ಕಲೆಯನ್ನು ರೂಢಿಸಿಕೊಂಡರೆ ಉತ್ತಮ ಭವಿಷ್ಯ: ವಿಜಯ್‌ ಆನಂದ್‌

KannadaprabhaNewsNetwork |  
Published : Mar 05, 2026, 01:30 AM IST
4ಕೆಎಂಎನ್‌ಡಿ-3ಮಂಡ್ಯದ  ವಿವೇಕಾನಂದ ರಂಗಮಂದಿರದಲ್ಲಿ ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರ ೩೦ನೇ ಸಂಸ್ಮರಣಾರ್ಥ ಆಯೋಜಿಸಿದ್ದ ರಾಜ್ಯಮಟ್ಟದ ಜನಪದ ಗೀತೆ ಸ್ಪರ್ಧೆಯನ್ನು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ ಆನಂದ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಉತ್ತಮ ಭವಿಷ್ಯ ಕಟ್ಟಿಕೊಳ್ಳುವುದಕ್ಕೆ ಕಲೆಯ ಹಲವು ಪ್ರಾಕಾರಗಳು ಪೂರಕವಾಗಿವೆ. ಅವುಗಳನ್ನು ಶದ್ಧೆ-ಆಸಕ್ತಿಯಿಂದ ಕಲಿಯುವವರಿಗೆ ಕಲೆ ಒಲಿಯುತ್ತದೆ. ಯಾವುದಾದರೊಂದು ಕಲೆಯಲ್ಲಿ ಕೌಶಲ್ಯ ಸಾಧಿಸುವ ಮೂಲಕ ಯುವಕರು ಕಲೆಯ ಬೆಳವಣಿಗೆ ಹಾಗೂ ಮುನ್ನಡೆಗೆ ಸಹಕಾರಿಯಾಗಿ ನಿಲ್ಲಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಶಿಕ್ಷಣಕ್ಕಷ್ಟೇ ಸೀಮಿತರಾಗಬಾರದು. ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಕೌಶಲ್ಯ ಸಾಧಿಸುವಂತೆ ಪಿಇಟಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಎಸ್‌.ವಿಜಯ್‌ ಆನಂದ್‌ ಹೇಳಿದರು.

ನಗರದಲ್ಲಿರುವ ಪಿಇಎಸ್ ರಂಗಮಂದಿರದಲ್ಲಿ ಜನತಾ ಶಿಕ್ಷಣ ಟ್ರಸ್ಟ್‌, ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು ಆಯೋಜಿಸಿದ್ದ ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರ ೩೦ನೇ ಸಂಸ್ಮರಣಾರ್ಥ ರಾಜ್ಯಮಟ್ಟದ ಜನಪದ ಗೀತೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಉತ್ತಮ ಭವಿಷ್ಯ ಕಟ್ಟಿಕೊಳ್ಳುವುದಕ್ಕೆ ಕಲೆಯ ಹಲವು ಪ್ರಾಕಾರಗಳು ಪೂರಕವಾಗಿವೆ. ಅವುಗಳನ್ನು ಶದ್ಧೆ-ಆಸಕ್ತಿಯಿಂದ ಕಲಿಯುವವರಿಗೆ ಕಲೆ ಒಲಿಯುತ್ತದೆ. ಯಾವುದಾದರೊಂದು ಕಲೆಯಲ್ಲಿ ಕೌಶಲ್ಯ ಸಾಧಿಸುವ ಮೂಲಕ ಯುವಕರು ಕಲೆಯ ಬೆಳವಣಿಗೆ ಹಾಗೂ ಮುನ್ನಡೆಗೆ ಸಹಕಾರಿಯಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.

ಕೆ.ವಿ.ಶಂಕರಗೌಡರು ಕಲೆಯನ್ನು ಮೈಗೂಡಿಸಿಕೊಂಡಿದ್ದವರು. ಪಿಇಟಿ ಸಂಸ್ಥೆಯನ್ನು ನಾಟಕ ಮತ್ತು ಸಾಂಸ್ಕೃತಿಕ ಕಲಾ ಪ್ರದರ್ಶನಗಳಿಂದ ದುಡಿದ ಹಣದಲ್ಲಿ ಕಟ್ಟಿ ಬೆಳೆಸಿದರು. ನಮ್ಮ ಮನೆತನ ಉಳಿದಿರುವುದು ಕೂಡ ಕಲೆಯಿಂದ. ನಮ್ಮ ತಂದೆ ಸಚ್ಚಿದಾನಂದ ಅವರೂ ಕಲಾವಿದರು. ನಾನು ಕಲೆಯಿಂದ ಸ್ವಲ್ವ ದೂರ ಉಳಿದೆ. ನಾವೀಗ ಕಲೆಯ ಆರಾಧಕರಾಗಿದ್ದೇವೆ, ಕಲೆಯಿಂದ ದೂರ ಉಳಿದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಲೇಜಿನಲ್ಲಿ ಕಳೆದ ೩೦ ವರ್ಷಗಳಿಂದ ರಾಜ್ಯಮಟ್ಟದ ಜಾನಪದ ಸ್ಪರ್ಧೆ ನಡೆಸಿಕೊಂಡು ಬರುತ್ತಿದ್ದೇವೆ, ರಾಜ್ಯ ವಿವಿಧ ದೂರ ಜಿಲ್ಲೆಗಳಿಂದ ಜಾನಪದ ಕಲಾಸ್ಪರ್ಧಿಗಳು ಬಂದಿದ್ದೀರಿ. ಉತ್ತಮ ಪ್ರತಿಭಾ ಪ್ರದರ್ಶನ ನೀಡುವಂತೆ ಆಶಿಸಿದರು.

ಪ್ರಾಂಶುಪಾಲ ಡಾ.ನೀಲಕಂಠ ಮಾತನಾಡಿ, ಜನಪದ ವಿಜ್ಞಾನವಿದ್ದಂತೆ. ಜನಪದರ ಜೀವನ ಶೈಲಿಯೇ ವಿಜ್ಞಾನಕ್ಕೆ ಆಧಾರವಾಗಿದೆ. ಜನಪದವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ದುಡಿಯಬೇಕಿದೆ ಎಂದು ನುಡಿದರು.

ಕೆ.ವಿ.ಶಂಕರಗೌಡ ಅವರು ಶಿಕ್ಷಣ ಮತ್ತು ಸಹಕಾರ ಕ್ಷೇತ್ರದ ತಜ್ಞರಾಗಿದ್ದರು. ಮಂತ್ರಿಯಾಗಿದ್ದ ಅವರ ಕಾಲಘಟ್ಟದಲ್ಲಿ ಸಾಕಷ್ಟು ಹೊಸ ಯೋಜನೆಗಳು ಜಾರಿಗೊಂಡವು ಎಂದರು.

ಕಾರ್ಯಕ್ರಮದಲ್ಲಿ ಪಿಇಎಸ್ ವಿಜ್ಞಾನ,ಕಲಾ ಮತ್ತು ವಾಣಿಜ್ಯ ಕಾಲೇಜು ಉಪಪ್ರಾಂಶುಪಾಲ ಡಾ.ಎಸ್.ಕೆ.ವೀರೇಶ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಎಂ. ಶಿವಕುಮಾರ್ ಮತ್ತು ಪ್ರಾಧ್ಯಾಪಕರು, ಉಪನ್ಯಾಸಕರು ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಸತಿ ಶಾಲೆಗಳ ಸ್ಥಾಪನೆ ಮೂಲಕ ಶಿಕ್ಷಣಕ್ಕೆ ಒತ್ತು: ಕೆ.ಎಸ್.ಆನಂದ್
ರೈತರ ಮೇಲಿನ ಶೋಷಣೆ ಖಂಡಿಸಿ ೯ರಂದು ಧರಣಿ ಸತ್ಯಾಗ್ರಹ