ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿ ಎಂಡೋಕ್ರೈನಾಲಜಿ ವಿಭಾಗವು ಆಯೋಜಿಸಿದ್ದ ವಿಶ್ವ ಥೈರಾಯ್ಡ್ ದಿನಾಚರಣೆಯಲ್ಲಿ ಮಾತನಾಡಿದ ಅವರು, ಥೈರಾಯ್ಡ್ ಗ್ರಂಥಿಯ ಮಹತ್ವ, ಅದರ ಕಾರ್ಯಗಳು ಮತ್ತು ಸಂಬಂಧಿತ ಕಾಯಿಲೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದರು.
ಇದು ಇತ್ತೀಚೆಗೆ ಸಾಮಾನ್ಯ ಕಾಯಿಲೆಯಾಗಿದ್ದು, ಇದನ್ನು ರಕ್ತ ಪರೀಕ್ಷೆಗಳ ಮೂಲಕ ಸುಲಭವಾಗಿ ಪತ್ತೆ ಹಚ್ಚಬಹುದು. ಸೂಕ್ತ ವೈದ್ಯಕೀಯ ಚಿಕಿತ್ಸೆ, ಔಷಧಿಗಳು, ಆಹಾರಕ್ರಮ ಹಾಗೂ ಶಿಸ್ತಿನ ಜೀವನ ಶೈಲಿಯ ಮೂಲಕ ಇದನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಡಬಹುದು ಎಂದರು.ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ನಾರಾಯಣಪ್ಪ ಮಾತನಾಡಿ, ಥೈರಾಯ್ಡ್ ಜಾಗತಿಕ ಮತ್ತು ಸಾಮಾನ್ಯ ಕಾಯಿಲೆಯಾಗಿದ್ದು, ಇದರ ಬಗ್ಗೆ ಜಾಗೃತಿ ಬಹಳ ಮುಖ್ಯ. ಥೈರಾಯ್ಡ್ ನಮ್ಮ ಕುತ್ತಿಗೆಯ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಸಣ್ಣಗ್ರಂಥಿಯಾಗಿದೆ. ಇದು ದೇಹದ ಅನೇಕ ಪ್ರಮುಖ ಕಾರ್ಯಗಳನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಈ ಗ್ರಂಥಿಯ ಕಾರ್ಯ ವೈಖರಿಯಲ್ಲಿ ಏರುಪೇರಾದಾಗ ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ ಎಂದರು.
ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸರ್ಜಿಕಲ್ ಆಂಕೋಲಜಿಸ್ಟ್ ಎಂಡೋಕ್ರೈನ್ ಮತ್ತು ಬ್ರೆಸ್ಟ್ ಸರ್ಜನ್ ಡಾ. ಸಸಿಮೌಲಿ ವೇಲಾಡಿ ಮಾತನಾಡಿ, ಇತ್ತೀಚಿನ ಶಸ್ತ್ರಚಿಕಿತ್ಸಾ ಪ್ರಗತಿಗಳು ಥೈರಾಯ್ಡ್ ಗಂಟುಗಳು ಮತ್ತು ಗೆಡ್ಡೆಗಳನ್ನು ನೋವುರಹಿತ ಮತ್ತು ಗಾಯಗಳಿಲ್ಲದೆ ತೆಗೆದು ಹಾಕಲು ಇರುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೈದ್ಯಕೀಯ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.