ಉತ್ತಮ ಮಳೆ, ರೈತರ ಮೊಗದಲ್ಲಿ ಮಂದಹಾಸ

KannadaprabhaNewsNetwork |  
Published : Jun 16, 2025, 01:55 AM IST
ಮುಂಡಗೋಡ: ಅಧಿಕೃತ ಮುಂಗಾರು ಮಳೆ ಪ್ರಾರಂಭವಾಗಿದ್ದು, ಬಿತ್ತನೆ ಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ. | Kannada Prabha

ಸಾರಾಂಶ

ಬಿತ್ತನೆ ಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಸಂತೋಷ ದೈವಜ್ಞ

ಮುಂಡಗೋಡ: ಅಧಿಕೃತ ಮುಂಗಾರು ಮಳೆ ಪ್ರಾರಂಭವಾಗಿದೆ. ಬಿತ್ತನೆ ಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಪ್ರಸಕ್ತ ಸಾಲಿನಲ್ಲಿ ಈವರೆಗೂ ಕೃಷಿಗೆ ಪೂರಕ ಉತ್ತಮ ಮಳೆಯಾಗುತ್ತಿದೆ. ಈ ಬಾರಿ ಅಡ್ಡಿ ಮಳೆ ಕೃಷಿ ಚಟುವಟಿಕೆಗೆ ಇಂಬು ನೀಡಿದೆ. ಮುಂಗಾರು ಮಳೆ ಹಿಡಿದ ಬಳಿಕ ಕೃಷಿ ಕಾರ್ಯ ಕಷ್ಟ ಎಂಬ ಕಾರಣಕ್ಕೆ ರೈತರು ತರಾತುರಿಯಲ್ಲಿ ಭೂಮಿ ಹದಗೊಳಿಸಿ ಬಿತ್ತನೆ ಕಾರ್ಯ ಮುಗಿಸಿದ್ದಾರೆ. ಈ ನಡುವೆ ಕೃಷಿ ಇಲಾಖೆಯಿಂದ ಸಹಾಧನದಲ್ಲಿ ಬಿತ್ತನೆ ಬೀಜ ವಿತರಿಸಲಾಗಿದೆ. ಇನ್ನು ಕೆಲವೇ ಕೆಲವು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಬಾಕಿ ಇದ್ದು, ವಾತಾವರಣ ನೋಡಿಕೊಂಡು ರೈತರು ಬಿತ್ತನೆ ಮಾಡುತ್ತಿದ್ದಾರೆ.

ನಿರೀಕ್ಷೆಯಂತೆ ಮೇ ಅಂತ್ಯದವರೆಗೂ ಗುಡುಗು ಸಹಿತ ಅಡ್ಡ ಮಳೆ ಉತ್ತಮ ಹದ ನೀಡಿದೆ. ಜೂನ್ ಮೊದಲ ವಾರದಲ್ಲಿ ಮಳೆ ವಿರಾಮ ನೀಡಿದ್ದು, ಬಿತ್ತನೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಬತ್ತ, ಗೋವಿನಜೋಳ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ. ಮೊದಲು ಬಿತ್ತನೆ ಮಾಡಿದ ಪ್ರದೇಶದಲ್ಲಿ ಈಗಾಗಲೇ ಸಸಿಗಳು ಬೆಳೆದು ನಿಂತಿದ್ದು, ಅಗತ್ಯ ಕೃಷಿ ಚಟುವಟಿಕೆ ಕೈಗೊಳ್ಳಲಾಗಿದೆ.

ಶೇ.೬೦ ಬಿತ್ತನೆ:

ಬತ್ತ ಪ್ರಧಾನ ಪ್ರದೇಶವಾಗಿರುವ ಮುಂಡಗೋಡ ತಾಲೂಕಿನಲ್ಲಿ ಹಿಂದೆಲ್ಲ ಶೇ.೮೦ರಷ್ಟು ಭೂಮಿಯಲ್ಲಿ ಬತ್ತವನ್ನೇ ಬೆಳೆಯಲಾಗುತ್ತಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಮಳೆಯ ಪ್ರಮಾಣ ಕಡಿಮೆಯಾಗಿ, ಅನಾವೃಷ್ಟಿ ಎದುರಾಗಿದ್ದರಿಂದ ನಿರಂತರ ಭತ್ತದ ಬೆಳೆ ಹಾನಿಗೊಳಗಾಯಿತು. ಪರಿಣಾಮ ಕಳೆದ ೪-೫ ವರ್ಷಗಳಿಂದ ಗೋವಿನಜೋಳ ಬೆಳೆ ಬಿತ್ತನೆ ಕೂಡ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಯಾವುದೇ ನೀರಾವರಿ ಯೋಜನೆ ಇಲ್ಲದಿರುವುದರಿಂದ ಇಲ್ಲಿಯ ಬಹುತೇಕ ರೈತರು ಮಳೆಯಾಶ್ರಯಿಸಿಯೇ ವ್ಯವಸಾಯ ಮಾಡುತ್ತಾರೆ.

ಕೃಷಿ ಇಲಾಖೆಯ ಪ್ರಕಾರ ೪೫೦೦ ಹೆಕ್ಟೇರ್ ಗೋವಿನ ಜೋಳ, ೫೫೦೦ ಹೆಕ್ಟೇರ್ ಭತ್ತ, ೧೪೦೦ ಹೆಕ್ಟೇರ್ ಕಬ್ಬು ಹಾಗೂ ಇತರ ಬೆಳೆ ಸೇರಿದಂತೆ ೧೧,೭೦೦ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದೆ. ಅದರಲ್ಲಿ ಈವರೆಗೆ ಶೇ.೭೦ ಗೋವಿನಜೋಳ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಶೇ.೫೦ ಭತ್ತ ಬಿತ್ತನೆಯಾಗಿದೆ.

ಮಳೆಯ ಪ್ರಮಾಣ ಹೆಚ್ಚು:

ಪ್ರಸಕ್ತ ಸಾಲಿನಲ್ಲಿ ಜ.೧ರಿಂದ ಜೂ.೧೪ರ ವರೆಗೆ ೩೩೫.೩ ಮಿ.ಮೀ. ಮಳೆಯಾಗಿದ್ದು, ವಾಡಿಕೆಯಂತೆ ೨೭೦.೯ ಮಿ.ಮೀ. ಮಳೆಯಾಗಬೇಕಿತ್ತು. ಆದರೆ ವಾಡಿಕೆಗಿಂತ ಶೇ.೨೪ರಷ್ಟು ಮಳೆ ಹೆಚ್ಚಾದಂತಾಗಿದೆ. ಕಳೆದ ವರ್ಷ ಈ ವೇಳೆಗೆ ೨೮೨ ಮಿ.ಮೀ. ಮಳೆಯಾಗಿತ್ತು.

ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಕೃಷಿಗೆ ಅನುಕೂಲವಾಗಿದೆ. ಗೋವಿನಜೋಳ ಹಾಗೂ ಭತ್ತದ ಬೆಳೆ ಬಿತ್ತನೆಗೆ ಪೂರಕ ವಾತಾವರಣವಿದೆ. ಉಳಿದ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಕೂಡ ಪ್ರಗತಿಯಲ್ಲಿದೆ. ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಿಸಲಾಗಿದೆ. ಬಿತ್ತನೆ ಬೀಜ ಹಾಗೂ ಔಷಧಗಳ ಯಾವುದೇ ಕೊರತೆ ಇಲ್ಲ ಎನ್ನುತ್ತಾರೆ ಮುಂಡಗೋಡ ಸಹಾಯಕ ಕೃಷಿ ನಿರ್ದೇಶಕ ಕೆ.ಎನ್. ಮಹಾರೆಡ್ಡಿ.

ಒಣ ಬಿತ್ತನೆ ಮಾಡಿಕೊಂಡ ಕೆಲವು ರೈತರನ್ನು ಹೊರತುಪಡಿಸಿ ಮಳೆ ಪೂರ್ವ ಬಿತ್ತನೆ ಮಾಡಿಕೊಂಡ ರೈತರ ಬೆಳೆಗೆ ಪೂರಕ ವಾತಾವರಣವಿದೆ. ಈ ಬಾರಿ ಹೆಚ್ಚು ಮಳೆಯಾಗುತ್ತಿರುವುದರಿಂದ ಮೊದಲಿನಂತೆಯೇ ಹೆಚ್ಚು ಭತ್ತ ಬಿತ್ತನೆ ಮಾಡಲಾಗುತ್ತಿದೆ ಎನ್ನುತ್ತಾರೆ ಪ್ರಗತಿಪರ ರೈತ ಸಂಗಮೇಶ ಬಿದರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಕಸಿತ ಭಾರತ ಸಾಕಾರಕ್ಕೆ ಕೇಂದ್ರ ಬಜೆಟ್ ಪೂರಕ : ಕೆ ಜಿ ಬೋಪಯ್ಯ
ಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿದ ಯೋಧ ಸ್ವಗ್ರಾಮಕ್ಕೆ ಆಗಮನ