ಕನ್ನಡಪ್ರಭ ವಾರ್ತೆ ಕುಷ್ಟಗಿ
ಭಾನುವಾರ ರಾತ್ರಿ ಗುಡಗು ಸಿಡಿಲುನೊಂದಿಗೆ ಶುರುವಾದ ವರುಣನ ಆರ್ಭಟ ಸುಮಾರು ಒಂದು ಗಂಟೆಗಳ ಕಾಲ ಮುಂದುವರಿಯಿತು.
ಈ ಸಂದರ್ಭದಲ್ಲಿ ಜೆಸ್ಕಾಂನವರು ಮುಂಜಾಗೃತಾ ಕ್ರಮವಾಗಿ ವಿದ್ಯುತ್ ಕಡಿತಗೊಳಿಸಿದ್ದರು. ತಾಲೂಕಿನ ಕೆಲವು ಗ್ರಾಮಗಳಿಗೆ ಬೆಳಗ್ಗೆ 9 ಗಂಟೆ ವರೆಗೆ ವಿದ್ಯುತ್ ಸರಬರಾಜು ಇರಲಿಲ್ಲ.ಮಳೆಯಿಂದಾಗಿ ತಾಲೂಕಿನಲ್ಲಿರುವ ಕೆಲವು ಹಳ್ಳಗಳಲ್ಲಿ ರಭಸವಾಗಿ ನೀರು ಹರಿಯಿತು. ಹಳ್ಳ ಹಾಗೂ ಚೆಕ್ ಡ್ಯಾಂಗಳು ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ತುಂಬಿ ಹರಿದವು. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿತು ಎನ್ನಬಹದು.
ಮಳೆಯ ವರದಿ:ಕುಷ್ಟಗಿ 29.0, ಮಿಮೀ, ತಾವರಗೇರಾ 43,6 ಮಿಮೀ, ದೋಟಿಹಾಳ 26.0 ಮಿಮೀ, ಕಿಲ್ಲಾರಟ್ಟಿ 28.2 ಮಿಮೀ, ಹನುಮಸಾಗರ 8.2 ಮಿಮೀ, ಹನುಮನಾಳ 11.8 ಮೀಮೀ ಮಳೆಯಾಗಿದೆ ಕಂದಾಯ ಇಲಾಖೆಯ ವರದಿಯು ತಿಳಿಸಿದೆ.
ಮನೆಗೆ ನುಗ್ಗಿದ ಮಳೆ ನೀರು; ಬಾಳೆ ಬೆಳೆಗೆ ಹಾನಿ:ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದಲ್ಲಿ ಗಾಳಿ ಸಹಿತ ಮಳೆಯಿಂದಾಗಿ ಐದಾರು ಮನೆಗಳಿಗೆ ಮಳೆ ನೀರು ನುಗ್ಗಿ ಹಾನಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ.ಭಾನುವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಗ್ರಾಮದ ಐದಾರು ಮನೆಗಳಿಗೆ ಜಮೀನುಗಳಲ್ಲಿನ ಮಳೆ ನೀರು ರಭಸವಾಗಿ ನುಗ್ಗಿದ ಪರಿಣಾಮ ಇಡೀ ರಾತ್ರಿ ದಿನ ನೀರು ಹೊರ ಚೆಲ್ಲಲು ಕುಟುಂಬಸ್ಥರು ಹರಸಾಹಸ ಪಡಬೇಕಾಯಿತು. ಇದೇ ಗ್ರಾಮಗಳ ರೈತ ಮಲ್ಲಿಕಾರ್ಜುನ ರಾಮಶೆಟ್ಟಿ ಎಂಬವರಿಗೆ ಸೇರಿದ ಸುಮಾರು ೧೦ ಎಕರೆ ಬಾಳೆ ತೋಟ ಪೈಕಿ ೪ ಎಕರೆ ವ್ಯಾಪ್ತಿಯಲ್ಲಿ ಬಾಳೆ ಹಾನಿಯಾಗಿದೆ. ಮತ್ತೊಬ್ಬ ರೈತ ಮರಿತಿಮ್ಮಪ್ಪ ಗುರಿಕಾರ ಎನ್ನುವರಿಗೆ ಸೇರಿದ ೨ಎಕರೆ ಬಾಳೆ ಬೆಳೆ ಹಾನಿ ಹಾನಿಯಾಗಿದೆ.