ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನರೇಗಾ ನಿಂತ ನೀರಲ್ಲ ಪ್ರವಹಿಸುವ ತೊರೆ. ನಿರಂತರ ಬದಲಾವಣೆ ನಿಶ್ಚಿತ. ಕಳೆದ ದಶಕಗಳಿಂದ ಉದ್ಯೋಗ ಖಾತರಿ ಕಾಯ್ದೆಯಲ್ಲಿ ಸಾಕಷ್ಟು ಬದಲಾವಣೆಗೊಂಡಿದೆ. ಎಲ್ಲ ಪ್ರಕ್ರಿಯೆಗಳು ಡಿಜಿಟಲೀಕರಣಗೊಳ್ಳುತ್ತಿವೆ. ಈ ಬಾರಿ ಕ್ರಿಯಾಯೋಜನೆಯು ಆನ್ಲೈನ್ಗೊಂಡಿದೆ. ಈ ಬಗ್ಗೆ ಸಾಕಷ್ಟು ಅರಿವು ಮೂಡಿಸಲಾಗಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ ಹೇಳಿದರು.ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಎಸ್ಐಆರ್ಡಿ ಮೈಸೂರು, ಜಿಪಂ ಬಾಗಲಕೋಟೆ ಮತ್ತು ವಿಜಯಪುರ ಹಾಗೂ ನಾಗರಿಕ ಸಮಾಜದ ಸಂಸ್ಥೆಗಳ ಒಕ್ಕೂಟ ಗ್ರಾಮ ಸ್ವರಾಜ್ ಅಭಿಯಾನದ ಸಹಯೋಗದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ, ಕಾಯಕ ಬಂಧುಗಳ ತರಬೇತಿದಾರರ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಕಾಯ್ದೆಯಡಿ ಸಾಕಷ್ಟು ಉತ್ತಮ ಕಾಮಗಾರಿಗಳಾಗಿವೆ ಎಂದರು.ದುರ್ಬಲ ವರ್ಗಗಳಿಗೆ ಪ್ರಥಮಾದ್ಯತೆಯಲ್ಲಿ ಕೆಲಸ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು. ನರೇಗಾ ಕಾಯ್ದೆಯಲ್ಲಿ ಕಾಯಕ ಬಂಧುಗಳ ಆಧಾರ ಸ್ತಂಭವಾಗಿದ್ದಾರೆ. ಕಾಯ್ದೆಯು ಪರಿಣಾಮಕಾರಿ ಅನುಷ್ಠಾನಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದು, ಕಾಯಕ ಬಂಧುಗಳಿಗೆ ತರಬೇತಿ ನೀಡುವ ಮುಖೇನ ಯೋಜನೆ ಇನ್ನಷ್ಟು ಬಲಪಡಿಸಲು ಸಾಧ್ಯವಾಗುತ್ತದೆ. ಶಿಬಿರಾರ್ಥಿಗಳು ತರಬೇತಿಯಲ್ಲಿ ಕಲಿತ ವಿಷಯಗಳನ್ನು ಕಾಯಕ ಬಂಧುಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸವಾಗಬೇಕು. ಆ ಮೂಲಕ ಈ ಕಾಯ್ದೆ ಯಶಸ್ಸಿಗೆ ಕಾರಣವಾಗಬೇಕು ಎಂದು ತಿಳಿಸಿದರು.ರೀಚ್ ಸಂಸ್ಥೆ ಮುಖ್ಯಸ್ಥರು ಹಾಗೂ ಗ್ರಾಮ ಸ್ವರಾಜ್ ಅಭಿಯಾನದ ರಾಜ್ಯ ಸಮಿತಿ ಸದಸ್ಯ ಜಿ.ಎನ್.ಸಿಂಹ ಮಾತನಾಡಿ, ರಾಜ್ಯದ 10 ಜಿಲ್ಲೆಯ 50 ತಾಲೂಕುಗಳಲ್ಲಿ ಕಾಯಕ ಬಂಧುಗಳ ತರಬೇತಿ ನಡೆಯುತ್ತಿದ್ದು, ಅದರ ಭಾಗವಾಗಿ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ 5 ತಾಲೂಕಿನ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.ಸಿದ್ರಾಮಯ್ಯ ಕಳ್ಳಿಮಠ, ಸುಜಾತ ತುಪ್ಪದ, ತರಬೇತಿ ಅನುಭವ ಹಂಚಿಕೊಂಡರು. ತರಬೇತಿ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಡಾ.ಬಾಬು ಸಜ್ಜನ, ನಿರೂಪಿಸಿದರು. ಸುರೇಶ ಕೆಳಗಡೆ, ಸರೋಜಾ, ಜಿ.ಎನ್.ಶೈಲಜಾ, ಸವಿತಾ ಗಾಣಿಗೇರ ಹಾಗೂ 30 ಜಿಲ್ಲಾ ಮಟ್ಟದ ತರಬೇತಿದಾರರು ಇದ್ದರು.