ಗದಗ: ಜಾನಪದ ಸಾಮಾನ್ಯವಾಗಿ ಅನಕ್ಷರಸ್ಥರ ಜ್ಞಾನವಾಗಿದೆ. ಆಡುಮಾತಿನ ಸೊಗಸಿದೆ. ಅದು ಸರಳ ಸ್ಪಷ್ಟತೆಯಿಂದ ಕೂಡಿದೆ. ಅಕ್ಷರದ ಅರಿವು ಇಲ್ಲದಿದ್ದರೂ ಸಾವಿರಾರು ಹಾಡುಗಳನ್ನು ಹೇಳುವ ಗೌರಮ್ಮ ಚಲವಾದಿ ನಮ್ಮ ನಾಡಿನ ಹೆಮ್ಮೆ ಮತ್ತು ನಾಡು ಕಂಡ ಅಪರೂಪದ ಗಾನಕೋಗಿಲೆ ಎಂದು ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ಹೇಳಿದರು.
ಜನಪದರು ತಮಗೆ ಅನಿಸಿದ ಭಾವನೆಗಳನ್ನು ಸರಳವಾಗಿ ಹೇಳಿದರೂ ಅದರ ಅರ್ಥದ ನಿಗೂಢತೆ ಮಿಗಿಲಾದುದು. ಗೌರಮ್ಮ ಬದುಕಿನಲ್ಲಿ ಕಷ್ಟನಷ್ಟಗಳನ್ನು ಅನುಭವಿಸಿ ಹಾಡಿನಲ್ಲಿ ಮರೆತು ಹಾಡುತ್ತಿದ್ದರು. ಜನರಿಗೆ ಸಂತೋಷ ಕೊಡುತ್ತಿದ್ದರು. ಅವರ ಬದುಕೆ ಜಾನಪದಮಯವಾಗಿತ್ತು. ಹಾಡು ಎಂದರೆ ಎಲ್ಲಿಲ್ಲದ ಉತ್ಸಾಹ. ದಿನವಿಡಿ ಹಾಡಿದರೂ ದಣಿವಿಲ್ಲದ ಗೌರಮ್ಮ ಹಾಡುತ್ತಾ ವೇದನೆ ಮರೆತು, ಸಾಧನೆ ಮಾಡಿದ ಗೌರಮ್ಮ ಜಾನಪದ ಕೋಗಿಲೆ ಎಂದರು.
ಜ.ಸಿದ್ದಲಿಂಗ ಸ್ವಾಮೀಜಿಗಳು ಬರುವುದನ್ನು ನೋಡಿ, ಅಲ್ಲಿಯೇ ಹಾಡು ಕಟ್ಟಿ, ಹಾಡುವುದನ್ನು ಕಂಡಾಗ ಸಿದ್ದಲಿಂಗ ಸ್ವಾಮೀಜಿಗಳು ಆನಂದ ಹೇಳತೀರದು. ಶ್ರೇಷ್ಠ ಸಾಧಕಿ ಜಾನಪದ ಗಾಯಕಿ ಗೌರಮ್ಮ, ಅವರ ಬಗ್ಗೆ ಪುಣ್ಯ ಪುರುಷರ ಮಾಲಿಕೆಯಲ್ಲಿ ಜಾನಪದ ಕೋಗಿಲೆ ಗೌರಮ್ಮ ಪುಸ್ತಕವನ್ನು ಪ್ರಕಟಿಸಿದರು. ಗೌರಮ್ಮ ಓದದಿದ್ದರೂ ಜಾನಪದ ಕಲೆ ಒಲಿದಿತ್ತು. ಇಂತ ಗಾಯಕಿಯರು ಇದ್ದುದರಿಂದಲೇ ಜಾನಪದ ಇಂದಿಗೂ ನಳನಳಿಸುತ್ತಿದೆ ಎಂದರು.ಇಲಕಲ್ಲದ ಅಂತಾರಾಷ್ಟ್ರೀಯ ಚಿತ್ರಕಲಾವಿದ ಡಾ. ಬಸವರಾಜ ಗವಿಮಠ ಮಾತನಾಡಿ, ಗೌರಮ್ಮನ ಹಾಡು ನಿಲ್ಲದ ಹಾಡು, ಒಂದುವರೆ ಸಾವಿರ ಹಾಡುಗಳನ್ನು, ಬಿಡುವಿಲ್ಲದೆ, ದಣಿವಿಲ್ಲದೆ, ಹಾಡುತ್ತಿದ್ದರು. ಅವರ ಅದ್ಭುತ ನೆನಪಿನ ಶಕ್ತಿ ಮೆಚ್ಚುವಂತಹದ್ದು. ಇಂತ ಅದ್ಭುತ ಗಾಯಕಿಯ ಜೀವನ ಚರಿತ್ರೆ ಪಠ್ಯಪುಸ್ತಕಗಳಲ್ಲಿ ಬರಬೇಕು ಎಂದರು.
ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ಮಹೇಶ್ಗೌಡ ಪೊಲೀಸ್ ಪಾಟೀಲ್, ಸಿದ್ದಣ್ಣ ಬಂಗಾರ ಶೆಟ್ಟರ್, ಕೆ.ಎಸ್. ಚಟ್ಟಿ ಅವರನ್ನು ಶ್ರೀಗಳು ಆಶೀರ್ವದಿಸಿದರು.ಮೃತ್ಯುಂಜಯ ಹಿರೇಮಠ, ಗುರುನಾಥ್ ಸುತಾರ ಹಾಗೂ ಸೋಮನಾಥ ದೊಡ್ಡಮನಿ ಅವರು ಸಂಗೀತ ಸೇವೆಯನ್ನು ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಖುಷಿ ಎಂ.ಲಕ್ಕುಂಡಿ ಹಾಗೂ ವಚನ ಚಿಂತನವನ್ನು ಶ್ರದ್ದಾ ಎಸ್.ಹೂಲಿ ನಡೆಸಿದರು. ದಾಸೋಹ ಸೇವೆಯನ್ನು ಮಲ್ಲಿಕಾರ್ಜುನ ಚಲವಾದಿ ಹಾಗೂ ಅವರ ಪರಿವಾರ ವಹಿಸಿಕೊಂಡಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಮಹೇಶ್ ಗಾಣಿಗೇರ, ಬಸವರಾಜ ಕಾಡಪ್ಪನವರ, ಐ.ಬಿ. ಬೆನಕೊಪ್ಪ, ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. ಸೋಮನಾಥ ಪುರಾಣಿಕ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ನಿರೂಪಿಸಿದರು.