ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟನೆ
ವಿಶೇಷ ವರದಿಗದಗ: ಗದಗ ಜಿಲ್ಲೆ ಈಗಾಗಲೇ ಹಲವಾರು ಹೊಸ ಮೈಲುಗಲ್ಲಗಳನ್ನು ಸ್ಥಾಪಿಸಿ ದೇಶವೇ ಇತ್ತ ತಿರುಗಿ ನೋಡುವಂತಹ ಹಲವಾರು ಕೆಲಸಗಳ ಮೂಲಕ ಗಮನ ಸೆಳೆಯುತ್ತಿದೆ. ಅದರ ಸಾಲಿಗೆ ಮತ್ತೊಂದು ಸೇರ್ಪಡೆ ಎನ್ನುವಂತೆ ಅತ್ಯಾಧುನಿಕ ಸೌಲಭ್ಯವುಳ್ಳ ಬಾಲಕಿಯರ ಬಾಲಮಂದಿರ ಲೋಕಾರ್ಪಣೆಗೊಳ್ಳುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಸೇರಿದಂತೆ ಅನೇಕ ಗಣ್ಯರು ಈ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
ಮಕ್ಕಳು ಸಮಾಜದ ಅಮೂಲ್ಯ ಆಸ್ತಿ. ಅವರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಗದಗ ನಗರದಲ್ಲಿ ನಿರ್ಮಾಣವಾಗಿರುವ ಬಾಲಕಿಯರ ಬಾಲ ಮಂದಿರ ವಿಶೇಷತೆಯನ್ನು ಹೊಂದಿದೆ. ಪ್ರತಿಯೊಂದು ಮಗುವನ್ನು ದೌರ್ಜನ್ಯ, ಹಿಂಸೆ, ಶೋಷಣೆಯಿಂದ ರಕ್ಷಿಸುವ ಹೊಣೆಯನ್ನು ಸರಕಾರಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದ ಸಮಗ್ರ ಮಕ್ಕಳ ರಕ್ಷಣಾ ಯೋಜನೆ 2011 ರಲ್ಲಿ ಜಾರಿಗೆ ತಂದಿದ್ದು ಅದು ವಿಶೇಷ ಮಹತ್ವವನ್ನು ಪಡೆದುಕೊಂಡಿದೆ.ಇದೇ ಮಕ್ಕಳ ರಕ್ಷಣಾ ಯೋಜನೆಯಡಿಯಲ್ಲಿ ಗದಗ ಜಿಲ್ಲೆಯಲ್ಲಿ ಬಾಲಕಿಯರ ಸರಕಾರಿ ಬಾಲಮಂದಿರ ಕಟ್ಟಡ ನಿರ್ಮಾಣವಾಗಿದೆ. ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಒಟ್ಟು ₹199 ಲಕ್ಷಗಳ ಅನುದಾನ ಬಿಡುಗಡೆ ಮಾಡಲಾಗಿದ್ದು, ಜಿಲ್ಲಾ ನಿರ್ಮಿತಿ ಕೇಂದ್ರದ ಮೂಲಕ 2016-17ನೇ ಸಾಲಿಗೆ ಬಾಲಕಿಯರ ಸರಕಾರಿ ಬಾಲಮಂದಿರ ನಿರ್ಮಾಣಕ್ಕಾಗಿ ವಹಿಸಲಾಗಿತ್ತು. ಈ ಬಾಲಕಿಯರ ಸರಕಾರಿ ಬಾಲಮಂದಿರವು 100 ಮಕ್ಕಳ ಸಾಮರ್ಥ್ಯವುಳ್ಳ ಕಟ್ಟಡವಾಗಿದ್ದು, ಈಗ ಗದಗನಲ್ಲಿ 43 ಮಕ್ಕಳು ರಕ್ಷಣೆ ಮತ್ತು ಪೋಷಣೆಯನ್ನು ಪಡೆಯುತ್ತಿದ್ದಾರೆ.
ಹಿನ್ನೆಲೆ: ಸಮಗ್ರ ಮಕ್ಕಳ ರಕ್ಷಣಾ ಯೋಜನೆಯನ್ನು 1-4-2022ರ ಮಿಷನ್ ವಾತ್ಸಲ್ಯ ಎಂದು ಮರು ನಾಮಕರಣ ಮಾಡಿ ಯೋಜನೆಯನ್ನು ಜಾರಿಗೆ ತಂದಿದ್ದು, ಗದಗ ಜಿಲ್ಲೆಯಲ್ಲಿ ಮಕ್ಕಳ ಪಾಲನೆ ಮತ್ತು ರಕ್ಷಣೆ ಅಗತ್ಯವಿರುವಂತಹ ಮಕ್ಕಳಾದ ಅನಾಥ, ನಿರ್ಗತಿಕ, ದೌರ್ಜನ್ಯ, ಹಿಂಸೆಗೆ ಒಳಪಟ್ಟ ಪ್ರಕೃತಿ ವಿಕೋಪಗಳಿಗೆ ಒಳಪಟ್ಟ ಮಕ್ಕಳು, ಕೌಟುಂಬಿಕ ಕಲಹದಿಂದ ಬೇರ್ಪಟ್ಟ ಮಕ್ಕಳು, ನಿರ್ಲಕ್ಷ್ಯಕ್ಕೆ ಒಳಪಟ್ಟ ಮಕ್ಕಳು, ಕೈದಿ ಪಾಲಕರ ಮಕ್ಕಳು, ಭಿಕ್ಷಾಟನೆಯಿಂದ ರಕ್ಷಿಸಿದ ಮಕ್ಕಳು ಹಾಗೂ ಬಾಲ್ಯ ವಿವಾಹದಿಂದ ರಕ್ಷಿಸಿದ ಮಕ್ಕಳು ಹೀಗೆ ಇನ್ನಿತರೆ ಕಾರಣಾಂತರಗಳಿಂದ ಬಾಲಕಿಯರ ಸರಕಾರಿ ಬಾಲಮಂದಿರದಲ್ಲಿ ರಕ್ಷಣೆ ಮತ್ತು ಪೋಷಣೆಯನ್ನು ಪಡೆಯಬಹುದಾಗಿದೆ. ಇಂತಹ ಮಕ್ಕಳಿಗೆ ಉತ್ತಮವಾದ ವಾತಾವರಣವನ್ನು ಕಲ್ಪಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುವುದಾಗಿದೆ. ಇಂತಹ ಮಕ್ಕಳ ರಕ್ಷಣೆ ಹಾಗೂ ಪುನರ್ವಸತಿಯೇ ಇದರ ಮೂಲ ಉದ್ದೇಶವಾಗಿದೆ.ಆಗಮಿಸುವ ಗಣ್ಯರು: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಡಿ. 17ರಂದು ಬೆಳಗ್ಗೆ 10.45ಕ್ಕೆ ನಗರದ ಸಂಭಾಪುರ ರಸ್ತೆಯ ಬಾಲಕಿಯರ ಸರಕಾರಿ ಬಾಲಮಂದಿರದ ಕಟ್ಟಡವನ್ನು ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಲಿದ್ದಾರೆ. ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು. ಮುಖ್ಯಅತಿಥಿಗಳಾಗಿ ಸರ್ಕಾರಿ ಮುಖ್ಯ ಸಚೇತಕರು ಹಾಗೂ ವಿಧಾನಪರಿಷತ್ ಸದಸ್ಯರಾದ ಸಲೀಂ ಅಹ್ಮದ್ , ಸಂಸದರಾದ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡರ, ವಿಧಾನಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ, ನರಗುಂದ ಶಾಸಕರಾದ ಸಿ.ಸಿ. ಪಾಟೀಲ, ರೋಣ ಶಾಸಕ ಜಿ.ಎಸ್. ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಆಗಮಿಸುವರು. ವಿಶೇಷ ಆಹ್ವಾನಿತರಾಗಿ ವಾಣಿಜ್ಯ ತೆರಿಗೆ ಆಯುಕ್ತರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ. ಶಿಖಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಜಿ.ಸಿ. ಪ್ರಕಾಶ, ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕ ಚಂದ್ರಕಾಂತ ಎಂ.ವಿ. ವಿಶೇಷ ಆಹ್ವಾನಿತರಾಗಿ ಆಗಮಿಸುವರು.ಸುಸಜ್ಜಿತ ಬಾಲಮಂದಿರ: ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ಆಸಕ್ತಿ ಹಾಗೂ ವಿಶೇಷ ಕಾಳಜಿಯಿಂದಾಗಿ ಜಿಲ್ಲೆಯಲ್ಲಿನ ಮಕ್ಕಳ ಪಾಲನೆ ಮತ್ತು ರಕ್ಷಣೆ ಅಗತ್ಯವಿರುವಂತಹ ಮಕ್ಕಳಾದ ಅನಾಥ, ನಿರ್ಗತಿಕ, ದೌರ್ಜನ್ಯ, ಹಿಂಸೆಗೆ ಒಳಪಟ್ಟ ಪ್ರಕೃತಿ ವಿಕೋಪಗಳಿಗೆ ಒಳಪಟ್ಟ ಮಕ್ಕಳು, ಕೌಟುಂಬಿಕ ಕಲಹದಿಂದ ಬೇರ್ಪಟ್ಟ ಮಕ್ಕಳು, ಹಾಗೂ ನಿರ್ಲಕ್ಷ್ಯಕ್ಕೆ ಒಳಪಟ್ಟ ಮಕ್ಕಳು, ಕೈದಿ ಪಾಲಕರ ಮಕ್ಕಳು, ಭಿಕ್ಷಾಟನೆಯಿಂದ ರಕ್ಷಿಸಿದ ಮಕ್ಕಳು ಹಾಗೂ ಬಾಲ್ಯ ವಿವಾಹದಿಂದ ರಕ್ಷಿಸಿದ ಮಕ್ಕಳಿಗೆ ಸುಸಜ್ಜಿತ ಬಾಲಕಿಯರ ಬಾಲ ಮಂದಿರ ನಿರ್ಮಾಣಗೊಂಡಿದೆ.
ದುರ್ಬಲ, ಅನಾಥ, ದೌರ್ಜನ್ಯಕ್ಕೆ ಒಳಗಾದ ಮಕ್ಕಳ ರಕ್ಷಣೆ ಜತೆಗೆ ಅವರ ಭವಿಷ್ಯ ಕಟ್ಟಿಕೊಡುವ ದೊಡ್ಡ ಜವಾಬ್ದಾರಿ ಸರಕಾರ ತೆಗೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಈ ಜವಾಬ್ದಾರಿ ನಿರ್ವಹಣೆಯಲ್ಲಿ ಸಮಾಜದ ವಿಶೇಷ ಪಾಲ್ಗೊಳ್ಳುವಿಕೆ ಹಾಗೂ ಸಹಕಾರವನ್ನು ಬಯಸುವೆ. ಬನ್ನಿ ನಿರ್ಗತಿಕ, ತೊಂದರೆಯಲ್ಲಿರುವ ಮಕ್ಕಳ ಭವಿಷ್ಯವನ್ನು ಕಟ್ಟಿಕೊಡುವಲ್ಲಿ ಕೈಜೋಡಿಸಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.