ಬ್ಯಾಡಗಿ ಸಮಗ್ರ ಅಭಿವೃದ್ಧಿ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಶಿವಾನಂದ ಪಾಟೀಲ

KannadaprabhaNewsNetwork | Published : Jun 22, 2025 11:47 PM

ಮಾರುಕಟ್ಟೆಗೆ ರೈತ ಭವನ ನೂತನ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಬ್ಯಾಡಗಿ ಮತಕ್ಷೇತ್ರದಲ್ಲಿ ರೈತರು ಮತ್ತು ವ್ಯಾಪಾರಸ್ಥರ ಅನುಕೂಲಕ್ಕಾಗಿ ಚಿಕ್ಕಬಾಸೂರ ಹಾಗೂ ಹೂಲಿಹಳ್ಳಿ ಮೆಗಾ ಮಾರುಕಟ್ಟೆಗಳಲ್ಲಿ ₹10 ಕೋಟಿ ವೆಚ್ಚದಲ್ಲಿ ಸುಸಜ್ಜಿತ 2 ಶಿಥಲೀಕರಣ ಘಟಕಗಳನ್ನು ನಿರ್ಮಿಸಲು ಮುಂದಾಗಿದೆ.

ಬ್ಯಾಡಗಿ: ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ರೈತರು ಮತ್ತು ವ್ಯಾಪಾರಸ್ಥರ ಅನುಕೂಲಕ್ಕಾಗಿ ನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕೆನ್ನವ ಕನಸು ಒಂದೊಂದಾಗಿ ನನಸಾಗುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಲೋಕೋಪಯೋಗಿ ಇಲಾಖೆ ವತಿಯಿಂದ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗಣ್ಯ ವ್ಯಕ್ತಿಗಳ ವಿಶ್ರಾಂತಿ ಭವನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಮಾರುಕಟ್ಟೆಗೆ ರೈತ ಭವನ ನೂತನ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಬ್ಯಾಡಗಿ ಮತಕ್ಷೇತ್ರದಲ್ಲಿ ರೈತರು ಮತ್ತು ವ್ಯಾಪಾರಸ್ಥರ ಅನುಕೂಲಕ್ಕಾಗಿ ಚಿಕ್ಕಬಾಸೂರ ಹಾಗೂ ಹೂಲಿಹಳ್ಳಿ ಮೆಗಾ ಮಾರುಕಟ್ಟೆಗಳಲ್ಲಿ ₹10 ಕೋಟಿ ವೆಚ್ಚದಲ್ಲಿ ಸುಸಜ್ಜಿತ 2 ಶಿಥಲೀಕರಣ ಘಟಕಗಳನ್ನು ನಿರ್ಮಿಸಲು ಮುಂದಾಗಿದ್ದು, ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಮೂಲಕ ಸರ್ಕಾರ ರಾಜ್ಯದ ಜನರಿಗೆ ಅನುಕೂಲ ಕಲ್ಪಿಸುತ್ತಿದೆ ಎಂದರು.

ಸುಸಜ್ಜಿತ ಮುಖ್ಯರಸ್ತೆ: ಪಟ್ಟಣದಲ್ಲಿ ಹಾಯ್ದು ಹೋಗಿರುವ ಗಜೇಂದ್ರಗಡ- ಸೊರಬ ರಾಜ್ಯ ಹೆದ್ದಾರಿ- 136 ನಗರ ಪರಿಮಿತಿಯಲ್ಲಿ 750 ಮೀ. ರಸ್ತೆ ಅಗಲೀಕರಣಕ್ಕೆ ಬಹುವರ್ಷಗಳಿಂದ ಸಾರ್ವಜನಿಕರ ಒತ್ತಡವಿದೆ. ಈ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅಲ್ಲಿನ ಜನರ ಮನವೊಲಿಸುವ ಕಾರ್ಯ ನಡೆದಿದ್ದು, ತನ್ಮೂಲಕ ಅಗಲೀಕರಣ ಕಾಮಗಾರಿ ಪೂರ್ಣಗೊಳಿಸಿ ಮಾರುಕಟ್ಟೆಗೆ ಅಗಮಿಸುವ ರೈತರ ಮತ್ತು ವ್ಯಾಪಾರಸ್ಥರ ವಾಹನಗಳ ಸಂಚಾರಕ್ಕೆ ಅನುಕೂಲ ಸೇರಿದಂತೆ ನಗರದ ಸೌಂದರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಿದ್ದೇನೆ ಎಂದರು.

ಸುಳ್ಳು ಆರೋಪ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ವಿಶ್ರಾಂತಿಗೃಹದ ಗುಣಮಟ್ಟದ ಕಾಮಗಾರಿ ಅಚ್ಚುಕಟ್ಟಾಗಿ ಮಾಡಿದ್ದಾರೆ. ಅದನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಇಲಾಖೆಯ ಮೇಲಿದೆ. ಅಂತೆಯೇ ಪಟ್ಟಣದಲ್ಲಿ ಕೆರೆ ಅಭಿವೃದ್ಧಿಗೆ ಹಣಕಾಸಿನ ನೆರವು ನೀಡಲಿದ್ದೇನೆ. ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಯಡಿ ಕಾಲುವೆಗಳ ಬದಲಾಗಿದೆ. ಪೈಪ್‌ಲೈನ್ ಮೂಲಕ ರೈತರ ಕೃಷಿಭೂಮಿಗಳಿಗೆ ನೀರುಣಿಸುವ ₹115 ಕೋಟಿ ವೆಚ್ಚದ ಯೋಜನೆಗೆ ಮಂಜೂರಾತಿ ದೊರಕಿದ್ದು, ಶೀಘ್ರದಲ್ಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳಾಗಲಿ. ಪಟ್ಟಣದಲ್ಲಿ ಒಂದೊಳ್ಳೆ ಮುಖ್ಯರಸ್ತೆ ನಿರ್ಮಾಣವಾಗಲಿ ಎಂಬ ಆಶಯವನ್ನು ಹೊಂದಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಹೆಸ್ಕಾಂ ಅಧ್ಯಕ್ಷ ಅಜೀಮ್‌ಪೀರ್ ಖಾದ್ರಿ, ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ತಾಲೂಕಾಧ್ಯಕ್ಷ ಶಂಭನಗೌಡ ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವ ನೀರಲಗಿ, ಬ್ಯಾಡಗಿ ಬ್ಲಾಕ್ ಅಧ್ಯಕ್ಷ ದಾನಪ್ಪ ಚೂರಿ, ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಶಿವನಗೌಡ ವೀರನಗೌಡ್ರ, ಹಾವೆಮುಲ್ ನಿರ್ದೇಶಕ ಪ್ರಕಾಶ ಬನ್ನಿಹಟ್ಟಿ, ಆಶ್ರಯ ಸಮಿತಿ ಅಧ್ಯಕ್ಷ ಮುನಾಫ್ ಎರೇಶೀಮಿ, ಕೃಷಿ ವಿವಿ ನಿರ್ದೇಶಕ ವೀರನಗೌಡ ಪೊಲೀಸಪಾಟೀಲ, ಪುರಸಭೆ ಉಪಾಧ್ಯಕ್ಷ ಸುಭಾಸ್ ಮಾಳಗಿ, ಸದಸ್ಯರಾದ ಫಕ್ಕೀರಮ್ಮ ಛಲವಾದಿ, ಮಾಜಿ ಸದಸ್ಯ ದುರ್ಗೇಶ ಗೋಣೆಮ್ಮನವರ, ಮುಖಂಡರಾದ ಬೀರಪ್ಪ ಬಣಕಾರ, ರಮೇಶ ಸುತ್ತಕೋಟಿ, ಡಿ.ಎಚ್. ಬುಡ್ಡನಗೌಡ್ರ, ಅಪರ ಜಿಲ್ಲಾಧಿಕಾರಿ ಎಲ್. ನಾಗರಾಜ, ಜಿಪಂ ಸಿಇಒ ರುಚಿ ಬಿಂದಲ್, ಎಸ್ಪಿ ಅಂಶುಕುಮಾರ, ಲೋಕೋಪಯೊಗಿ ಇಲಾಖೆ ಇಇ ಎನ್.ಎನ್. ಪಾಟೀಲ, ಎಇಇ ಉಮೇಶ ನಾಯಕ್ಸ ತಹಸೀಲ್ದಾರ್ ಫಿರೋಜಶಾ ಸೋಮನಕಟ್ಟಿ, ಟಿಇಒ ಕೆ.ಎಂ. ಮಲ್ಲಿಕಾರ್ಜುನ, ಸಿಪಿಐ ಮಹಾಂತೇಶ ಲಂಬಿ ಸೇರಿದಂತೆ ಇತರರಿದ್ದರು.