ಕಿವುಡರ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ

KannadaprabhaNewsNetwork |  
Published : Sep 28, 2025, 02:00 AM IST
ಪೊಟೊ: 27ಎಸ್‌ಎಂಜಿಕೆಪಿ02 | Kannada Prabha

ಸಾರಾಂಶ

ಕಿವುಡರ ಕಷ್ಟಗಳು ಅರ್ಥವಾಗುತ್ತಿದೆ. ಇಲ್ಲಿ ನಾವೆಲ್ಲರೂ ಒಂದೇ. ಭೇದ-ಭಾವ ಬೇಡ, ಮಾನವೀಯತೆಯ ದೃಷ್ಟಿಯಿಂದ ಇವರ ತಲ್ಲಣಗಳನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.

ಶಿವಮೊಗ್ಗ: ಕಿವುಡರ ಕಷ್ಟಗಳು ಅರ್ಥವಾಗುತ್ತಿದೆ. ಇಲ್ಲಿ ನಾವೆಲ್ಲರೂ ಒಂದೇ. ಭೇದ-ಭಾವ ಬೇಡ, ಮಾನವೀಯತೆಯ ದೃಷ್ಟಿಯಿಂದ ಇವರ ತಲ್ಲಣಗಳನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.

ಶನಿವಾರ ಸುವರ್ಣ ಸಂಸ್ಕೃತಿ ಭವನದಲ್ಲಿ ಆಯೋಜಿಸಿದ್ದ ವಿಶ್ವ ಕಿವುಡರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಿವುಡರ ಸಂಕಷ್ಟಗಳನ್ನು ಹೃದಯದ ಕಿವಿಯಿಂದ ಆಲಿಸಿದ ಅವರ ಬೇಡಿಕೆಗಳನ್ನು ಈಡೇರಿಸುವಂತೆ ಭರವಸೆ ನೀಡಿದರು.ಸರ್ಕಾರ ಇಂತಹವರ ನೆರವಿಗೆ ಬರಬೇಕಾಗಿರುವುದು ನ್ಯಾಯಬದ್ಧವಾಗಿಯೇ ಇದೆ. ಈಗ ಇವರಿಗೆ 1400 ಪಿಂಚಣಿ ಬರುತ್ತದೆ ಎಂದು ಹೇಳಿದ್ದೀರಾ. ಇದನ್ನು 5 ಸಾವಿರಕ್ಕೆ ಏರಿಸಬೇಕು ಎಂದು ಮನವಿ ಕೂಡ ಮಾಡಿದ್ದೀರಿ ಇದನ್ನು ಮುಖ್ಯಮಂತ್ರಿಗಳ ಬಳಿ ಚರ್ಚಿಸುತ್ತೇನೆ. ಅ.3ರಂದು ನೀವು ಪದಾಧಿಕಾರಿಗಳು ಬೆಂಗಳೂರಿಗೆ ಬನ್ನಿ, ನಿಮ್ಮೊಂದಿಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡೋಣ. ನಿಮ್ಮೆಲ್ಲಾ ಬೇಡಿಕೆಗಳನ್ನು ನಾನು ಖಂಡಿತಾ ಈಡೇರಿಸುತ್ತೇನೆ ಎಂದು ಹೇಳಿದರು.

ಇಂದಿನ ವಿಶ್ವ ಕಿವುಡರ ದಿನಾಚರಣೆಯ ಎಲ್ಲಾ ಖರ್ಚನ್ನು ನಾನೇ ಸ್ವತಃ ಭರಿಸುತ್ತೇನೆ. ಇದು ಅನುಕಂಪವಲ್ಲ, ನನ್ನ ಪ್ರೀತಿಯ ಸೇವೆಯಷ್ಟೇ. ನಾವೆಲ್ಲರೂ ಕರ್ತವ್ಯ ಎಂದುಕೊಂಡೇ ಇಂತಹ ಕೆಲಸಗಳನ್ನು ಮಾಡಬೇಕಾಗಿದೆ. ನಿಮ್ಮ ಪರವಾಗಿ ನಾನಿದ್ದೇನೆ. ನಿಮ್ಮ ಭಾಷೆ ನನಗೆ ಅರ್ಥವಾಗಿದೆ. ನಾವು ಇದನ್ನು ಹೃದಯದಿಂದ ಮತ್ತಷ್ಟು ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.ಸಂಘದ ಗೌರವಾಧ್ಯಕ್ಷ ಕೆ.ಎಸ್.ಶಂಕರ್ ಮಾತನಾಡಿ, ರಾಜ್ಯದಲ್ಲಿ 5 ಲಕ್ಷ ಮಕ್ಕಳು ಕಿವುಡರಿದ್ದಾರೆ. ಶೋಷಣೆಗೆ ಒಳಗಾಗಿದ್ದಾರೆ. ಎಷ್ಟೋ ಮಕ್ಕಳು ಶಾಲೆಯಲ್ಲಿ ಪಾಠ ಅರ್ಥವಾಗದೆ ಶಿಕ್ಷಣವನ್ನೇ ಮೊಟಕುಗೊಳಿಸುತ್ತಾರೆ. ಹಾಗಾಗಿ ನಮಗಿರುವ ಪಿಂಚಣಿಯನ್ನು 5 ಸಾವಿರಕ್ಕೆ ಹೆಚ್ಚಿಸಬೇಕು. ಉಚಿತ ಪ್ರಯಾಣದ ವ್ಯವಸ್ಥೆ ನೀಡಬೇಕು. ವಿವಾಹ ಪ್ರೋತ್ಸಾಹಧನ ನೀಡಬೇಕು. ಕಿವುಡರಿಗಾಗಿಯೇ ಇರುವ ಸನ್ನೆಭಾಷೆ ಶಾಲೆಗಳನ್ನು ಮತ್ತಷ್ಟು ತೆರೆಯಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರಿಗೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಹನುಮಂತಪ್ಪ, ಉಮಾಶಂಕರ್, ದೇವರಾಜ್, ನವೀನ್‌ಕುಮಾರ್, ಸಂದೇಶ್, ಕಾಂಗ್ರೆಸ್ ಮುಖಂಡರಾದ ಜಿ.ಡಿ.ಮಂಜುನಾಥ್, ವೈ.ಎಚ್.ನಾಗರಾಜ್, ರಮೇಶ್ ಶಂಕರಘಟ್ಟ ಸೇರಿದಂತೆ ಹಲವರಿದ್ದರು.

PREV

Recommended Stories

ಅ.4ರಿಂದ ಅಂತಾರಾಜ್ಯ ವಿವಿ ಕಬಡ್ಡಿ ಕ್ರೀಡಾಕೂಟ
ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ: ಎಂ.ಎಂ. ವಿರಕ್ತಮಠ