ಬೆಂಗಳೂರಿನ ಹೊಟೆಲ್ ಉದ್ಯಮಕ್ಕೆ ಯುವಕರು ಹೆಚ್ಚಾಗಿ ಕಾಲಿಡುತ್ತಿದ್ದು, ಸಮಸ್ಯೆ ಪರಿಹರಿಸಲು ಹಾಗೂ ಸವಾಲು ಎದುರಿಸಲು ಸರ್ಕಾರದ ಸಹಕಾರ ಅಗತ್ಯ ಎಂದು ಬೆಂಗಳೂರು ಹೊಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರಿನ ಹೊಟೆಲ್ ಉದ್ಯಮಕ್ಕೆ ಯುವಕರು ಹೆಚ್ಚಾಗಿ ಕಾಲಿಡುತ್ತಿದ್ದು, ಸಮಸ್ಯೆ ಪರಿಹರಿಸಲು ಹಾಗೂ ಸವಾಲು ಎದುರಿಸಲು ಸರ್ಕಾರದ ಸಹಕಾರ ಅಗತ್ಯ ಎಂದು ಬೆಂಗಳೂರು ಹೊಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ಹೇಳಿದರು.
ಮಂಗಳವಾರ ಅರಮನೆ ಮೈದಾನದಲ್ಲಿ ಬೆಂಗಳೂರು ಹೊಟೇಲುಗಳ ಸಂಘದಿಂದ ನಡೆದ ‘ಫುಡ್ ಅವಾರ್ಡ್ಸ್-2025’ ಕಾರ್ಯಕ್ರಮದಲ್ಲಿ ಮಾತನಾಡಿ, ಆತಿಥ್ಯ ಉದ್ಯಮದಲ್ಲಿ ಬೆಂಗಳೂರು ತನ್ನದೇ ಛಾಪು ಮೂಡಿಸಿದೆ. 2-3 ದಿನಕ್ಕೊಮ್ಮೆ ಹೊಸ ಹೊಟೆಲ್ಗಳು ನಗರದಲ್ಲಿ ತಲೆ ಎತ್ತುತ್ತಿದ್ದು, 2024ರಲ್ಲಿ ಬೆಂಗಳೂರಿನಲ್ಲಿ 126 ಹೊಸ ಹೊಟೆಲ್ಗಳು ಆರಂಭವಾಗಿವೆ ಎಂದರು.
ದೇಶದ ಎಲ್ಲ ಬಗೆಯ ತಿನಿಸುಗಳನ್ನು ನಗರದ ಹೊಟೆಲ್ಗಳು ಉಣಬಡಿಸುತ್ತಿವೆ. ನವೋದ್ಯಮದ ರೀತಿ ಹೊಟೆಲ್ ಉದ್ಯಮಕ್ಕೆ ಯುವಕರು ಹೆಚ್ಚಾಗಿ ಕಾಲಿಡುತ್ತಿರುವುದು ವಿಶೇಷ. ಹೊಟೆಲ್ ಉದ್ಯಮ ಎದುರಿಸುವ ಸಮಸ್ಯೆ ಪರಿಹರಿಸಲು, ಸವಾಲುಗಳನ್ನು ಎದುರಿಸಿ ಉದ್ಯಮ ಇನ್ನಷ್ಟು ಬೆಳೆಯಲು ಸಹಕಾರ ನೀಡಬೇಕು ಎಂದು ಕೋರಿದರು.
ಕರ್ನಾಟಕ ರಾಜ್ಯ ಹೊಟೇಲುಗಳ ಸಂಘದ ಅಧ್ಯಕ್ಷ ಜಿ.ಕೆ.ಶೆಟ್ಟಿ ಮಾತನಾಡಿ, ಇದು ಕೇವಲ ಪ್ರಶಸ್ತಿ ಕಾರ್ಯಕ್ರಮ ಮಾತ್ರವಲ್ಲ. ಹೊಟೆಲ್ಗಳಲ್ಲಿ ಶುಚಿ, ರುಚಿಯನ್ನು ಕಾಪಾಡಿಕೊಂಡು ಹೋಗಲು ಉದ್ಯಮದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರಶಸ್ತಿ ನೀಡಲಾಗುತ್ತಿದೆ. ಹೊಟೆಲ್ ಉದ್ಯಮದಲ್ಲಿ ಇದು ಹೆಸರು ಪಡೆದಿದೆ. ಮುಂದಿನ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಜಿ.ಶ್ರೀನಿವಾಸ್ ಬೆಂಗಳೂರು ಹೊಟೇಲುಗಳ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ, ಸಂಘದ ಕಾರ್ಯದರ್ಶಿ ವಿರೇಂದ್ರ ಕಾಮತ್ ಸೇರಿ ಇತರರಿದ್ದರು.
20 ವಿಭಾಗದಲ್ಲಿ ಪ್ರಶಸ್ತಿ ಪ್ರದಾನ
ಹೊಟೇಲ್ ಉದ್ಯಮದಲ್ಲಿ ಜೀವನಸಾಧನೆಯ ಶ್ರೇಷ್ಠ ಪ್ರಶಸ್ತಿಯನ್ನು ಹಳ್ಳಿಮನೆಯ ನೀಲಾವರ ಸಂಜೀವ್ರಾವ್ ಅವರಿಗೆ ಪ್ರದಾನ ಮಾಡಲಾಯಿತು. ಯುವ ಮಹಿಳಾ ಉದ್ಯಮಿ ಪ್ರಶಸ್ತಿಯನ್ನು ಕೆಫೆ ಅಮುದಾಮ್ನ ಪ್ರಿಯಾಂಕಾ ರುದ್ರಪ್ಪ, ಯುವ ಹೊಟೆಲ್ ಉದ್ಯಮ ಪ್ರಶಸ್ತಿಯನ್ನು ರಾಮೇಶ್ವರಂ ಕೆಫೆ ಪಡೆಯಿತು. ಸುಮಾರು 20ಕ್ಕೂ ಹೆಚ್ಚಿನ ವಿಭಾಗದಲ್ಲಿ ಪ್ರಶಸ್ತಿ ನೀಡಲಾಯಿತು. ನಟ ವಿಜಯ ರಾಘವೇಂದ್ರ, ಸಿಹಿಕಹಿ ಚಂದ್ರು, ಪ್ರೊ.ರಾಧಾಕೃಷ್ಣ, ಕೃಪಾಲ್ ಅಮನ್ನಾ ಸೇರಿ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.