ಪಾಲಕರು ಬೈದಿದ್ದಕ್ಕೆ ಮನೆ ಬಿಟ್ಟು ಹೋಗಿದ್ದ ಮಕ್ಕಳಿಬ್ಬರನ್ನು ಎಚ್ಎಎಲ್​​ ಠಾಣೆ ಪೊಲೀಸರು ಪತ್ತೆ ಹಚ್ಚಿ ಪಾಲಕರ ಮಡಿಲು ಸೇರಿಸಿದ್ದಾರೆ. 13 ವರ್ಷದ ಬಾಲಕಿ ಮತ್ತು ಈಕೆಯ 9 ವರ್ಷದ ಸಹೋದರನನ್ನು ರಕ್ಷಣೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪಾಲಕರು ಬೈದಿದ್ದಕ್ಕೆ ಮನೆ ಬಿಟ್ಟು ಹೋಗಿದ್ದ ಮಕ್ಕಳಿಬ್ಬರನ್ನು ಎಚ್ಎಎಲ್​​ ಠಾಣೆ ಪೊಲೀಸರು ಪತ್ತೆ ಹಚ್ಚಿ ಪಾಲಕರ ಮಡಿಲು ಸೇರಿಸಿದ್ದಾರೆ. 13 ವರ್ಷದ ಬಾಲಕಿ ಮತ್ತು ಈಕೆಯ 9 ವರ್ಷದ ಸಹೋದರನನ್ನು ರಕ್ಷಣೆ ಮಾಡಲಾಗಿದೆ. ಚಿತ್ರದುರ್ಗ ಮೂಲದ ದಂಪತಿ ಕೆಲಸದ ನಿಮಿತ್ತ ಊರಿಗೆ ಹೋಗಿದ್ದರು. ಮಕ್ಕಳು ಮನೆಯಲ್ಲಿ ಇದ್ದರು. ಆದರೆ ಇಬ್ಬರು ಟ್ಯೂಷನ್‌ಗೆ ಹೋಗಿರಲಿಲ್ಲ. ಇದರಿಂದ ಕೋಪಗೊಂಡ ತಂದೆ ಫೋನ್‌ ಮಾಡಿ ಬೈದಿದ್ದರು. ಹೀಗಾಗಿ ಬಾಲಕಿ ತಮ್ಮನನ್ನು ಕರೆದುಕೊಂಡು ಶಿವಮೊಗ್ಗ ಬಸ್‌ ಹತ್ತಿ ಭದ್ರಾವತಿಗೆ ಹೋಗಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ:

ಟ್ಯೂಷನ್‌ಗೆ ಹೋಗದ ಕಾರಣ ಅಕ್ಕ-ತಮ್ಮನಿಗೆ ಪಾಲಕರು ಬೈದಿದ್ದರು. ಹೀಗಾಗಿ ಫೆ.2ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಲಗೇಜ್ ಪ್ಯಾಕ್ ಮಾಡಿಕೊಂಡು, ಪತ್ರ ಬರೆದಿಟ್ಟು ಮನೆ ಬಿಟ್ಟು ತೆರಳಿದ್ದರು. ಬಾಲಕಿಯು ಆಧಾರ್ ಕಾರ್ಡ್ ಕೊಂಡೊಯ್ದಿದ್ದರಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾಳೆ. ಇತ್ತ ಈಕೆಯ ಸಹೋದರ ತುಂಬಾ ಚಿಕ್ಕವನಾಗಿದ್ದರಿಂದ ನಿರ್ವಾಹಕರು ಟಿಕೆಟ್ ಪಡೆದಿರಲಿಲ್ಲ ಎನ್ನಲಾಗಿದೆ. ಬೆಂಗಳೂರಿನಿಂದ ಇಬ್ಬರೂ ಭದ್ರಾವತಿಗೆ ತೆರಳಿದ್ದರು.

ಇತ್ತ ಮಕ್ಕಳು ಕಾಣೆಯಾಗಿರುವ ಬಗ್ಗೆ ವಿಷಯ ತಿಳಿದು ಪಾಲಕರು ಎಚ್ಎಎಲ್​ ಠಾಣೆಗೆ ದೂರು ನೀಡಿದ್ದರು. ಸಿಸಿ ಕ್ಯಾಮೆರಾ ದೃಶ್ಯಗಳನ್ನು ಗಮನಿಸಿ ತಕ್ಷಣ ಅಲರ್ಟ್​​​​​​ ಆಗಿದ್ದ ಎಚ್ಎಎಲ್​ ಪೊಲೀಸರು ರಾಜ್ಯಾದ್ಯಂತ ವಿವಿಧ ಪೊಲೀಸ್​ ಠಾಣೆಗಳಿಗೆ ಮಾಹಿತಿ ರವಾನಿಸಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಮಕ್ಕಳ ಮಾಹಿತಿ ಹಂಚಿಕೊಂಡಿದ್ದರು. ಮಕ್ಕಳ ಫೋಟೋ ಗಮನಿಸಿದ್ದ ಸಾರ್ವಜನಿಕರೊಬ್ಬರು ಎಚ್‌ಎಎಲ್‌ ಠಾಣೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಅಲ್ಲಿಗೆ ತೆರಳಿ ಮಕ್ಕಳಿಬ್ಬರನ್ನೂ ಕರೆತಂದು ಪಾಲಕರಿಗೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.