ಕನ್ನಡಪ್ರಭ ವಾರ್ತೆ ಮಸ್ಕಿಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಗತಿಸಿದೆ. ಆರೇ ತಿಂಗಳಲ್ಲಿಯೇ ಜನರಿಂದ ತಿರಸ್ಕಾರವಾಗಿ ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದು, ಕೇವಲ ಗ್ಯಾರಂಟಿಯಲ್ಲೇ ಕಾಲಹರಣ ಮಾಡಿಕೊಂಡು ಹೊರಟಿದೆ. ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.ಪಟ್ಟಣದ ಬಸವೇಶ್ವರ ನಗರದಲ್ಲಿ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ಧೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ 6 ತಿಂಗಳಲ್ಲಿ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ. ಇಲ್ಲಿನ ನಾರಾಯಣಪೂರ ಬಲದಂಡೆಯ 5(ಎ) ಉಪ ಕಾಲುವೆ ಯೋಜನೆ ಸಾಧ್ಯವಿಲ್ಲ ಎಂದು ಗೊತ್ತಿದ್ದರೂ ಸಹ ಚುನಾವಣಾ ಪ್ರಚಾರದ ವೇಳೆ ಅವರು ಅಧಿಕಾರಕ್ಕೆ ಬಂದರೆ ಯೋಜನೆ ಜಾರಿ ಮಾಡುತ್ತೇವೆ ಎಂದು ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಪಡೆದುಕೊಂಡರು. ಆದರೆ ಈಗ ನಿಜ ಬಣ್ಣ ಬಯಲು ಮಾಡಿದೆ ಎಂಬುದಕ್ಕೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಸದನದಲ್ಲಿ ನೀಡಿದ ಉತ್ತರವೇ ಸಾಕ್ಷಿ ಎಂದು ಹೇಳಿದರು.
ಮಸ್ಕಿ ಕ್ಷೆತ್ರದ ಬಹುದೊಡ್ಡ ಬೇಡಿಕೆಯಾಗಿರುವ 5(ಎ) ನಾಲಾ ಯೋಜನೆಯ ಬಗ್ಗೆ ಅವರು ಜನರಿಗೆ ಮಾತುಕೊಟ್ಟಂತೆ ಸರ್ಕಾರದ ಯೋಜನೆ ಜಾರಿ ಮಾತು ಉಳಿಸಿಕೊಳ್ಳಲಿ. ಇಲ್ಲದಿದ್ದರೆ ಬಿಜೆಪಿಯಿಂದ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ನೀರಾವರಿ ವಂಚಿತ ಗ್ರಾಮಗಳಿಗೆ ವಟಗಲ್ ಬಸವೇಶ್ವರ ಏತ ಹರಿ ನೀರಾವರಿ ಯೋಜನೆಗೆ ಮುಂಜೂರಾತಿ ನೀಡಿಸಿದ್ದೆ. ಆದರೆ, ಕಾಂಗ್ರೆಸ್ ಸರ್ಕಾರ ಅದನ್ನು ರದ್ದು ಮಾಡಿತು. ಈಗ ಈ ರೈತರಿಗೆ ಶಾಶ್ವತ ನೀರಿನಿಂದ ವಂಚಿತ ಮಾಡಿದೆ ಎಂದು ಆರೋಪಿಸಿದರು.
ನನ್ನ ರಾಜೀನಾಮೆಯಿಂದ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಲು ಬಿಜೆಪಿ ಸರ್ಕಾರ 500 ಕೋಟಿ ಅನುದಾನ ನೀಡಿತು. ನಾನು ಸೋತರು ಪರವಾಗಿಲ್ಲ ಕ್ಷೇತ್ರದ ಜನರಿಗೆ ನನ್ನಿಂದ ಅನುಕೂಲವಾಯಿತಲ್ಲ ಎಂಬ ತೃಪ್ತಿ ಇದೆ ಎಂದರು.ಮಸ್ಕಿ ಕ್ಷೇತ್ರದಲ್ಲಿ ತಾಲೂಕು ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದೆ. ಹಳ್ಳಿ-ಹಳ್ಳಿಗಳಲ್ಲಿ ಮಟಕಾ ಹಾವಳಿ ಹೆಚ್ಚಾಗಿದೆ. ಜೊತೆಗೆ ಇಸ್ಪೀಟ್ ಅಡ್ಡೆಗಳ, ಮರಳು, ಸೇರಿ ಅಕ್ರಮ ದಂದೆಗಳು ರಾಜಾರೋಷವಾಗಿ ನಡೆಯುತ್ತಿವೆ. ಶಾಸಕರು ಕ್ಷೇತ್ರದ ಅಭಿವೃದ್ಧಿ ಮರೆತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಭ್ರಷ್ಟಾಚಾರವನ್ನು ಕಿತ್ತುಹಾಕುತ್ತೇವೆಂದು ಅಧಿಕಾರಕ್ಕೆ ಬಂದಿದೆ. ಆದರೆ ಈಗ ಗ್ರಾಪಂ ಹಂತದಲ್ಲಿಯೇ ಭ್ರಷ್ಟಾಚಾರ ನಡೆಸಲು ಮುಂದಾಗಿದೆ ಎಂದು ಆರೋಪಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಸೇರಿ ಮುಖಂಡರುಇದ್ದರು