ಸರ್ಕಾರ 5 ಗ್ಯಾರಂಟಿ ಯೋಜನೆಗಳ ಮೂಲಕ ಜನರ ಜೀವನಮಟ್ಟ ಸುಧಾರಿಸಿದೆ: ತನ್ವೀರ್ ಸೇಠ್

KannadaprabhaNewsNetwork | Updated : Jun 05 2025, 12:47 PM IST
ಪ್ರಜಾಪ್ರಭುತ್ವದಲ್ಲಿ ಚುನಾಯಿತ ಸರ್ಕಾರಗಳು ಜನರ ಹಿತ ಕಾಪಾಡಲು, ಜನರ ಒಳಿತಿಗಾಗಿ ಕೆಲಸ ಮಾಡಲು, ಜೊತೆಗೆ ಒಂದು ರಾಜಕೀಯ ಪಕ್ಷವಾಗಿ ಜನರ ಮನಸ್ಸನ್ನು ಗೆಲ್ಲುವಂತಹ ಸಂದರ್ಭಗಳಲ್ಲಿ ನೀಡಿದಂತಹ ಆಶ್ವಾಸನೆಗಳು ಈ ಯೋಜನೆಗಳಾಗಿವೆ.

  ಮೈಸೂರು : ರಾಜ್ಯ ಕಾಂಗ್ರೆಸ್ ಸರ್ಕಾರವು 2 ವರ್ಷ ಪೂರೈಸಿದ್ದು, ರಾಜ್ಯದಲ್ಲಿ ಆಶ್ವಾಸನೆ ನೀಡಿದಂತಹ 5 ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿ ಜನರ ಜೀವನಮಟ್ಟವನ್ನು ಸುಧಾರಿಸಿದ್ದು, ನುಡಿದಂತೆ ನಡೆದುಕೊಂಡಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ತನ್ವೀರ್ ಶೇಠ್ ತಿಳಿಸಿದರು.

ನಗರದ ಕೆಎಸ್ಆರ್‌ಟಿಸಿ ಕೇಂದ್ರ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ರಾಜ್ಯ ಸರ್ಕಾರದ 2ನೇ ವರ್ಷದ ಸಾಧನೆ ಹಾಗೂ ಸರ್ಕಾರದ ಯೋಜನೆಗಳನ್ನು ಬಿಂಬಿಸುವ ವಸ್ತುಪ್ರದರ್ಶನವನ್ನು ಅವರು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಚುನಾಯಿತ ಸರ್ಕಾರಗಳು ಜನರ ಹಿತ ಕಾಪಾಡಲು, ಜನರ ಒಳಿತಿಗಾಗಿ ಕೆಲಸ ಮಾಡಲು, ಜೊತೆಗೆ ಒಂದು ರಾಜಕೀಯ ಪಕ್ಷವಾಗಿ ಜನರ ಮನಸ್ಸನ್ನು ಗೆಲ್ಲುವಂತಹ ಸಂದರ್ಭಗಳಲ್ಲಿ ನೀಡಿದಂತಹ ಆಶ್ವಾಸನೆಗಳು ಈ ಯೋಜನೆಗಳಾಗಿವೆ ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕಾರ್ಯಕ್ರಮಗಳು ಆಯೋಜಿಸಿ ಜನರ ಗಮನ ಸೆಳೆಯುವಂತೆ ಮಾಡುತ್ತಿದ್ದು, ಈ ಯೋಜನೆಗಳು ಜನರ ಮನೆಯ ಬಾಗಿಲಿಗೆ ತಲುಪಿಸುವುದರ ಜೊತೆಗೆ ಸರ್ಕಾರದಿಂದ ಜಾರಿ ಮಾಡುವಂತಹ ಯೋಜನೆಗಳ ಸೌಲಭ್ಯಗಳನ್ನು ಯಾವ ರೀತಿ ಪಡೆದುಕೊಳ್ಳಬೇಕು ಎಂಬುದರ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ ಎಂದರು.

ವಸ್ತುಪ್ರದರ್ಶನದಲ್ಲಿ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷೀ, ಶಕ್ತಿಯೋಜನೆ ಮತ್ತು ಯುವನಿಧಿ ಯೋಜನೆಗಳ ಮಾಹಿತಿ, ಈ ಗ್ಯಾರಂಟಿ ಯೋಜನೆಯಿಂದ ಪ್ರಯೋಜನ ಪಡೆದವರ ಯಶೋಗಾಥೆಗಳಿವೆ. ಅಲ್ಲದೆ, ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯೂ ಲಭ್ಯವಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್, ಕೆಎಸ್ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಿ. ವೀರೇಶ್, ವಿಭಾಗೀಯ ಸಂಚಾರಾಧಿಕಾರಿ ಹೇಮಂತ್ ಕುಮಾರ್, ವಾರ್ತಾ ಸಹಾಯಕ ಕೆ.ಎನ್. ರಮೇಶ್ ಮೊದಲಾದವರು ಇದ್ದರು.

ಕಮಲ್ ನಟ ಮಾತ್ರ, ನಾಯಕ ಕಲಾವಿದ ಆಗಲೇ ಇಲ್ಲ

 ಮೈಸೂರು : ಕಮಲ್ ಹಾಸನ್ ಈವರೆಗೂ ತಮ್ಮ ನಟನೆಯಿಂದ ಜನ ಮನ ಗೆದ್ದಿದ್ದಾರೆಯೆ ಹೊರತು ತಮ್ಮ ನಡೆ ನುಡಿಯಿಂದ ಅಲ್ಲ. ಕಮಲ್ ಇನ್ನೂ ನಟನಾಗಿಯೇ ಉಳಿದಿದ್ದಾರೆ. ಅವರಿನ್ನೂ ಕಲಾವಿದನಾಗಿ ರೂಪುಗೊಂಡಿಲ್ಲ ಎಂದು ಸರ್ವೋದಯ ಕರ್ನಾಟಕದ ಉಗ್ರನರಸಿಂಹೇಗೌಡ ತಿಳಿಸಿದ್ದಾರೆ.

ನಟ ಕಮಲಹಾಸನ್ ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿದ್ದು ಎಂಬ ಅಸಂಬದ್ಧ ಹೇಳಿಕೆ ನೀಡಿ ಕನ್ನಡ ಜನಮಾನಸವನ್ನು ಕೆಣಕಿದ್ದಾರೆ. ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸುವ ಬದಲು, ತಪ್ಪು ಮಾಡುವ ಜಾಯಮಾನ ತನ್ನದಲ್ಲ, ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ. ದಕ್ಷಿಣ ರಾಜ್ಯಗಳ ದ್ವನಿಯಾಗಲು ವೇದಿಕೆಯತ್ತ ಹೊರಟಿರುವ ಕಮಲ್ ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಿ ನಾಯಕನಾಗಿ ಹೊರಹೊಮ್ಮಲಿ. ಇಲ್ಲವಾದರೆ, ಕನ್ನಡಿಗರ ಎದೆಗೆ ವಿಷದ ಸೂಜಿ ಚುಚ್ಚಿದ ಕಹಿ ನೆನಪಾಗಿ ಉಳಿದುಬಿಡುತ್ತಾರೆ. ಹೊಸ ಜವಾಬ್ದಾರಿಯತ್ತ ಹೊರಟಿರುವ ಅವರಿಗೆ ಕನಿಷ್ಠ ರಾಜಕೀಯ ಅರಿವು ಮೂಡಲಿ ಎಂದು ಅವರು ಆಗ್ರಹಿಸಿದ್ದಾರೆ.

Read more Articles on