ಸರ್ಕಾರಿ ಕೆಲಸ ಜನಸೇವೆಗೆ ಸಿಕ್ಕ ಪರವಾನಗಿ: ಉಪಲೋಕಾಯುಕ್ತ ವೀರಪ್ಪ

KannadaprabhaNewsNetwork |  
Published : Dec 18, 2025, 12:00 AM IST
೧೭ಕೆಎಲ್‌ಆರ್-೧೨ಕೋಲಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎರಡು ದಿನಗಳ ಉಪಲೋಕಾಯುಕ್ತರಿಂದ ಸಾರ್ವಜನಿಕ ದೂರು ವಿಚಾರಣೆ ಹಾಗೂ ಬಾಕಿ ದೂರು ವಿಲೇವಾರಿ ಕಾರ್ಯಕ್ರಮ ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ  ಬಿ.ವೀರಪ್ಪ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಲೋಕಾಯುಕ್ತಕ್ಕೆ ಬರುವ ಸುಮಾರು ೨೫,೦೦೦ ಪ್ರಕರಣಗಳಲ್ಲಿ ೭,೦೦೦ ದಿಂದ ೮,೦೦೦ ಪ್ರಕರಣಗಳು ಸುಳ್ಳು ದೂರುಗಳಾಗಿರುತ್ತವೆ. ಇಂತಹ ಸುಳ್ಳು ದೂರುದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ವ್ಯಾಪಕ ಭ್ರಷ್ಟಾಚಾರದಿಂದ ಭಾರತವು ಅಭಿವೃದ್ಧಿಯಲ್ಲಿ ಸೊರಗುತ್ತಿದೆ, ಅಧಿಕಾರಿಗಳು ಸಾರ್ವಜನಿಕರಿಂದ ಯಾವುದೇ ರೀತಿಯ ದೂರುಗಳು ಬಾರದಂತೆ ಕೆಲಸ ನಿರ್ವಹಿಸಬೇಕೆಂದು ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಬಿ.ವೀರಪ್ಪ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎರಡು ದಿನಗಳ ಉಪಲೋಕಾಯುಕ್ತರಿಂದ ಸಾರ್ವಜನಿಕ ದೂರು ವಿಚಾರಣೆ ಹಾಗೂ ಬಾಕಿ ದೂರು ವಿಲೇವಾರಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭ್ರಷ್ಟ ವ್ಯವಸ್ಥೆ ಹಾಗೂ ಅಧಿಕಾರಿಗಳ ವಿಳಂಬ ಧೋರಣೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಕಾಲಮಿತಿಯಲ್ಲಿ ಸಾರ್ವಜನಿಕರು ಲೊಕಾಯುಕ್ತರಿಗೆ ನೀಡಲಾದ ದೂರುಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದು ೭೯ ವರ್ಷವಾದರೂ, ಭ್ರಷ್ಟಾಚಾರ ಎಂಬ ಭೂತ ಇಂದಿಗೂ ದೇಶವನ್ನು ಕಾಡುತ್ತಿದೆ ವಿಷಾದಿಸಿದ ಅವರು, ಈ ಪಿಡುಗನ್ನು ತೊಲಗಿಸಿದರೆ ಭಾರತ ಅಭಿವೃದ್ಧಿಯಲ್ಲಿ ಜಗತ್ತಿನಲ್ಲೇ ನಂಬರ್ ಒನ್ ದೇಶವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಸರ್ಕಾರಿ ಅಧಿಕಾರಿಗಳು ಪಡೆಯುವ ಸಂಬಳ ಸಾರ್ವಜನಿಕರ ತೆರಿಗೆಯ ಹಣ ಎಂಬುದನ್ನು ಮರೆಯಬಾರದು. ಸರ್ಕಾರಿ ಕೆಲಸವೆಂದರೆ ಅದು ಸಾರ್ವಜನಿಕ ಸೇವೆಗೆ ಸಿಕ್ಕ ಪರವಾನಗಿಯೇ ಹೊರತು, ಲಂಚ ಪಡೆಯಲು ಸಿಕ್ಕ ಅವಕಾಶವಲ್ಲ ಎಂದು ಎಚ್ಚರಿಸಿದರು.

ಭ್ರಷ್ಟಾಚಾರಕ್ಕೆ ಆಸ್ಪದ ನೀಡದ ಪ್ರಾಮಾಣಿಕ ಅಧಿಕಾರಿಗಳಿಗೆ ತೊಂದರೆ ಎದುರಾದರೆ, ಲೋಕಾಯುಕ್ತ ಸಂಸ್ಥೆ ಅವರ ಬೆನ್ನಿಗೆ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಚುನಾವಣೆ ಸಂದರ್ಭದಲ್ಲಿ ಹಣಕ್ಕೆ ಮತ ಮಾರಿಕೊಳ್ಳುವುದು ಇಂದಿಗೂ ಜೀವಂತವಾಗಿರುವ ಗುಲಾಮಗಿರಿಯ ಸಂಕೇತವಾಗಿದೆ. ಇದರಿಂದಾಗಿ ಸಮರ್ಥ ನಾಯಕರು ಆಯ್ಕೆಯಾಗುತ್ತಿಲ್ಲ, ಮಾಹಿತಿ ಹಕ್ಕು ಕಾಯ್ದೆಯನ್ನು ಕೆಲವು ವ್ಯಕ್ತಿಗಳು ಪ್ರಾಮಾಣಿಕ ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡಲು ಬಳಸಿಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಲೋಕಾಯುಕ್ತಕ್ಕೆ ಬರುವ ಸುಮಾರು ೨೫,೦೦೦ ಪ್ರಕರಣಗಳಲ್ಲಿ ೭,೦೦೦ ದಿಂದ ೮,೦೦೦ ಪ್ರಕರಣಗಳು ಸುಳ್ಳು ದೂರುಗಳಾಗಿರುತ್ತವೆ. ಇಂತಹ ಸುಳ್ಳು ದೂರುದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜನಸೇವೆಯೇ ಜನಾರ್ಧನ ಸೇವೆ ಎಂದು ಸಾರಿದ ಅವರು, ಅಧಿಕಾರಿಗಳು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು ಮತ್ತು ಸಾರ್ವಜನಿಕರ ದೂರುಗಳನ್ನು ವಿಳಂಬ ಮಾಡದೆ ವಿಲೇವಾರಿ ಮಾಡಬೇಕು ಎಂದು ತಾಕೀತು ಮಾಡಿದ ಅವರು, ಉಪಲೋಕಾಯುಕ್ತರು ೧೦ ಸುಮೋಟೊ ಪ್ರಕರಣ ಸೇರಿದಂತೆ ಒಟ್ಟು ೧೧೬ ಪ್ರಕರಣಗಳನ್ನು ಬುಧವಾರ ವಿಲೇವಾರಿ ಮಾಡಲಾಯಿತು. ಉಳಿದ ೧೨೮ ಪ್ರಕರಣಗಳನ್ನು ಗುರುವಾರ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಎಸ್‌ಪಿ ಡಾ.ಬಿ.ನಿಖಿಲ್, ಜಿಲ್ಲಾ ಕಾನೂನು ಸೇವೆಗಳು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ನಟೇಶ್, ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿ ಸರಿನಾ ಸಿಕ್ಕಲಿಗಾರ್, ಉಪವಿಭಾಗಾಧಿಕಾರಿ ಡಾ.ಮೈತ್ರಿ, ಕೋಲಾರ ಲೋಕಾಯುಕ್ತ ವರಿಷ್ಠಾಧಿಕಾರಿ ಅಂತೋನಿ ಜಾನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುಣಮಟ್ಟ ಸಾಹಿತ್ಯ ರಚಿಸಲು ಶುದ್ಧ ಮನಸ್ಸು ಅಗತ್ಯ
ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚಬೇಡಿ