ಸರ್ಕಾರಿ ಶಾಲಾ ಶಿಕ್ಷಕರಿಂದ ಪೋಷಕರ ನಂಬಿಕೆಗೆ ಹುಸಿ: ಎಚ್.ಟಿ.ಮಂಜು ಬೇಸರ

KannadaprabhaNewsNetwork |  
Published : Jun 10, 2025, 01:31 AM IST
9ಕೆಎಂಎನ್ ಡಿ19 | Kannada Prabha

ಸಾರಾಂಶ

ಫಲಿತಾಂಶ ಕುಸಿತದ ಕಾರಣ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ದಾಖಲಾತಿ ಕೊರತೆಯಿಂದ ಮುಚ್ಚುತ್ತಿವೆ. ಪೋಷಕರು ಸರ್ಕಾರಿ ಶಾಲೆಗಳ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಶಾಲೆಗೆ ಬರುವವರೆಲ್ಲರೂ ರೈತರು, ಕೂಲಿ ಕಾರ್ಮಿಕರು ಮತ್ತು ಬಡವರ ಮಕ್ಕಳು. ಶಿಕ್ಷಕರಾದ ನೀವು ಬದ್ಧತೆಯಿಂದ ಕೆಲಸ ಮಾಡದೆ ಬಡವರ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದ್ದೀರಿ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಶಿಕ್ಷಕರನ್ನು ನಂಬಿ ಸರ್ಕಾರಿ ಶಾಲೆಗೆ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಉತ್ತಮ ಫಲಿತಾಂಶ ನೀಡದೆ ಪೋಷಕರ ನಂಬಿಕೆಯನ್ನು ಶಿಕ್ಷಕರು ಹುಸಿಗೊಳಿಸುತ್ತಿದ್ದಾರೆ ಎಂದು ಶಾಸಕ ಎಚ್.ಟಿ.ಮಂಜು ಬೇಸರ ವ್ಯಕ್ತಪಡಿಸಿದರು.ತಾಲೂಕಿನ ಬಲ್ಲೇನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ಸಭೆ ನಡೆಸಿ ಶೈಕ್ಷಣಿಕ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿ, ಪ್ರೌಢಶಾಲೆಯಲ್ಲಿ ಯಾವುದೇ ಶಿಕ್ಷಕ ಹುದ್ದೆಗಳು ಖಾಲಿ ಇಲ್ಲ. ಎಲ್ಲಾ 8 ಹುದ್ದೆಗಳಿಗೂ ಶಿಕ್ಷಕರಿದ್ದಾರೆ. ಇರುವ 45 ಮಕ್ಕಳಿಗೆ ಒಬ್ಬೂಬ್ಬ ಶಿಕ್ಷಕ ತಲಾ 6 ಮಕ್ಕಳ ವೈಯಕ್ತಿಕ ಜವಾಬ್ದಾರಿ ತೆಗೆದುಕೊಂಡರೆ ಶಾಲೆಯಲ್ಲಿ ಶೇ.100 ಫಲಿತಾಂಶ ನೀಡಬಹುದು ಎಂದರು.

ಫಲಿತಾಂಶ ಕುಸಿತದ ಕಾರಣ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ದಾಖಲಾತಿ ಕೊರತೆಯಿಂದ ಮುಚ್ಚುತ್ತಿವೆ. ಪೋಷಕರು ಸರ್ಕಾರಿ ಶಾಲೆಗಳ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಶಾಲೆಗೆ ಬರುವವರೆಲ್ಲರೂ ರೈತರು, ಕೂಲಿ ಕಾರ್ಮಿಕರು ಮತ್ತು ಬಡವರ ಮಕ್ಕಳು. ಶಿಕ್ಷಕರಾದ ನೀವು ಬದ್ಧತೆಯಿಂದ ಕೆಲಸ ಮಾಡದೆ ಬಡವರ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದ್ದೀರಿ ಎಂದು ದೂರಿದರು.

ಆದರೆ, ಶಾಲೆಯ ಶಿಕ್ಷಕರು ಉತ್ತಮ, ಫಲಿತಾಂಶ ನೀಡುವುದರಲ್ಲಿ ವಿಫಲರಾಗಿದ್ದಾರೆ. ಮುಖ್ಯ ಶಿಕ್ಷಕರು ಫಲಿತಾಂಶ ಕುಸಿತಕ್ಕೆ ಕಾರಣಗಳನ್ನು ಹುಡುಕಿ ಲೋಪದೋಷ ಸರಿಪಡಿಸಿಕೊಳ್ಳುವಂತೆ ಸೂಚಿಸಿದರು.

ಒಂದು ದೇಶದಲ್ಲಿ ಅಭಿವೃದ್ಧಿ ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸುವ ಜೊತೆಗೆ ಶೈಕ್ಷಣಿಕ ಮತ್ತು ಆರೋಗ್ಯಕರ ಸೌಲಭ್ಯ ಕಲ್ಪಿಸಿ ಗಟ್ಟಿಗೊಳಿಸುವುದಾಗಿದೆ. ಇದನ್ನು ನಾಡಿನ ಶಿಕ್ಷಕ ಸಮುದಾಯ ಅರ್ಥಮಾಡಿಕೊಳ್ಳಬೇಕು ಎಂದರು.

ಸರ್ಕಾರಿ ಶಾಲೆ ಶಿಕ್ಷಕರಿಗೆ ಲಕ್ಷ ಲಕ್ಷ ಮಾಸಿಕ ವೇತನ ನೀಡುತ್ತಿದೆ. ಆದರೆ, ಮಕ್ಕಳಿಗೆ ಗುಣ ಮಟ್ಟದ ಬೋಧನೆಯನ್ನು ನಿರ್ಲಕ್ಷ್ಯ ಮಾಡುವುದು ಸಮಾಜಕ್ಕೆ ಅಪಾಯಕಾರಿ. ಯಾವುದೇ ಶಿಕ್ಷಕರು ಬೋಧನೆಯಲ್ಲಿ ನಿರ್ಲಕ್ಷ್ಯ ಮಾಡದೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವ ಮೂಲಕ ಸಮಾಜದ ಋಣವನ್ನು ತೀರಿಸಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ತಾಪಂ ಯೋಜನಾಧಿಕಾರಿ ಮೋದೂರು ಶ್ರೀನಿವಾಸ್, ಗ್ರಾಮ ಮುಖಂಡ ನಂದೀಶ್, ಮುಖ್ಯ ಶಿಕ್ಷಕ ಪಿ.ಎನ್.ಶಿವಣ್ಣ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?
ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?