ಕನ್ನಡಪ್ರಭ ವಾರ್ತೆ ಕೋಲಾರ
ನಗರದ ಪತ್ರಕರ್ತರ ಭವನದಲ್ಲಿ ಎಸ್ಐಆರ್ ಸಾಧಕ- ಬಾಧಕಗಳ ಕುರಿತ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಮಾಡಲು ಪರಿಷ್ಕರಣೆಗೆ ಅಗತ್ಯವಿರುವ ಜನನ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಹಾಗೂ ವಂಶವೃಕ್ಷ ಪ್ರಮಾಣ ಪತ್ರ ದಾಖಲೆಗಳನ್ನು ಚುನಾವಣಾ ಮಾದರಿಯಲ್ಲಿ ಅರ್ಜಿ ಸಲ್ಲಿಸಿದ ದಿನವೇ ಜನತೆಗೆ ಸಿಗುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಸಲಹೆ ನೀಡಿದರು.ಇಲ್ಲವಾದಲ್ಲಿ ಪಶ್ಚಿಮ ಬಂಗಾಳದಂತೆ ೯೧ ಲಕ್ಷಕ್ಕೂ ಅಧಿಕ ಮತದಾದರು ಪಟ್ಟಿಯಿಂದ ಹೊರ ಹೋಗುವ ಸಾಧ್ಯತೆ ಇದೆ, ರಾಜ್ಯದಲ್ಲಿ ಈವರೆಗೂ ನಡೆದಿರುವ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಶೇ.೧೦ರಷ್ಟು ಹೆಸರುಗಳು ಹೊಂದಾಣಿಕೆಯಾಗಿಲ್ಲ ಎನ್ನುವುದನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಹೇಳಿದರು.
ಮ್ಯಾಪಿಂಗ್ ಹಾಗೂ ಮ್ಯಾಚಿಂಗ್ ಆಗಿರುವ ಹೆಸರುಗಳ ಪೈಕಿಯು ತಂದೆ- ತಾಯಿ ಹೆಸರು ಇನ್ಷಿಯಲ್ ಹೊಂದಾಣಿಕೆಯಾಗದಿರುವುದು, ೪೫ ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಗೆ ಸೇರ್ಪಡೆಯಾಗುವಂತೆ ಅರ್ಜಿ ಸಲ್ಲಿಸಿದರೆ ಪರಿಗಣಿಸದಿರುವುದು, ಆರನೇ ಮಗ, ಮಗಳಾಗಿದ್ದರೆ ಪರಿಗಣನೆಗೆ ಬಾರದಿರುವುದು, ಪೋಷಕರಿಗೂ, ಮಕ್ಕಳ ನಡುವೆ ೧೫ ವರ್ಷಕ್ಕಿಂತ ಕಡಿಮೆ ಅಂತರ ಇರುವುದನ್ನು ತಾರ್ಕಿಕ ವ್ಯತ್ಯಾಸಗಳೆಂದು ಗುರುತಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಪತ್ರಕರ್ತ ಕೆ.ಎಸ್.ಗಣೇಶ್ ಮಾತನಾಡಿ, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಲೋಪದೋಷಗಳ ವಿರುದ್ಧ ಪ್ರತಿಯೊಬ್ಬರೂ ಸಹಕರಿಸಿ ಕೈಜೋಡಿಸಿ ಧ್ವನಿ ಎತ್ತಿ ಹೋರಾಟ ರೂಪಿಸಬೇಕು, ಇಲ್ಲವಾದಲ್ಲಿ ವ್ಯಕ್ತಿಗತ ಅಸ್ತಿತ್ವಗಳ ಜೊತೆಗೆ ದೇಶದ ಮೂಲ ಸಂವಿಧಾನದ ಆಶಯವು ಅಲುಗಾಡಲಿದೆಯೆಂದು ಎಚ್ಚರಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎನ್.ಮುನಿಸ್ವಾಮಿ ಹಾಗೂ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಯಾವುದೇ ಅರ್ಹ ವ್ಯಕ್ತಿ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಮತ್ತು ಯಾವುದೇ ಅನರ್ಹ ವ್ಯಕ್ತಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಾರದು, ಯಾರ ಹಕ್ಕುಗಳು ಮೊಟಕುಗೊಳ್ಳಬಾರದು ಎಂಬಂತೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿ ಎಂದರು.
ಕಾರ್ಯಕ್ರಮದಲ್ಲಿ ಟಿ.ವಿಜಯಕುಮಾರ್, ಹಾರೋಹಳ್ಳಿ ರವಿ, ಅಬ್ಬಣಿ ಶಿವಪ್ಪ, ಪಿ.ಶ್ರೀನಿವಾಸ್, ಎನ್.ಎನ್.ಶ್ರೀರಾಮ್, ಪಾತಕೋಟೆ ನವೀನ್ ಕುಮಾರ್, ವೀರಭದ್ರ, ಅಂದ್ರಹಳ್ಳಿ ಗಮನ ಮಹಿಳಾ ಸಂಘದ ಶಾಂತಮ್ಮ ಇದ್ದರು. ವಿಜಯಕೃಷ್ಣ ಸ್ವಾಗತಿಸಿ, ತಂಗರಾಜು ವಂದಿಸಿದರು.