ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಸರ್ಕಾರಿ ಗೋದಾಮು ಖಾಸಗಿ ವ್ಯಕ್ತಿಗೆ ಹಸ್ತಾಂತರ !

KannadaprabhaNewsNetwork | Published : Apr 12, 2025 12:46 AM

Government warehouse handed over to a private person!

- ಸರ್ಕಾರದ ಕೋಟ್ಯಂತರ ರು.ಗಳ ಬೆಲೆಬಾಳುವ ಗೋದಾಮು ಖಾಸಗಿ ವ್ಯಕ್ತಿಗೆ ವರ್ಗಾವಣೆ ಆರೋಪ

- ದಲಿತ ಸಂಘಟನೆಗಳಿಂದ ಆರೋಪ: ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

--

ಕನ್ನಡಪ್ರಭ ವಾರ್ತೆ ಹುಣಸಗಿ

ಕೋಟ್ಯಂತರ ರು.ಗಳ ಆಸ್ತಿ ಮೌಲ್ಯದ, ಸರ್ಕಾರದ ಗೋದಾಮು ಕಟ್ಟಡ ರಕ್ಷಣೆ ಮಾಡಬೇಕಾದ ಅಧಿಕಾರಿಗಳು ದುಡ್ಡಿನ ಆಸೆಗಾಗಿ ಖಾಸಗಿ ವ್ಯಕ್ತಿಯ ಹೆಸರಿಗೆ ವರ್ಗಾವಣೆ ಮಾಡಿದ್ದಾರೆಂದು ಆರೋಪಿಸಿರುವ ದಲಿತ ಸಂಘಟನೆಗಳು, ದಾಖಲೆಗಳನ್ನು ತಿದ್ದಿ, ಅಕ್ರಮವಾಗಿ ಆಸ್ತಿ ವರ್ಗಾವಣೆ ಮಾಡಿಕೊಂಡಿದ್ದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾದಿಗ ದಂಡೋರ ಸಮಿತಿ ಮುಖಂಡರು ಆಗ್ರಹಿಸಿ, ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಚರ್ಮಗಾರಿಕೆ ಗೋದಾಮನ್ನು (ಆಸ್ತಿ ಸಂಖ್ಯೆ 10/57) ಸುಮಾರು 30 ವರ್ಷಗಳ ಹಿಂದೆಯೇ ದಲಿತರಿಗೆ ಚರ್ಮಗಾರಿಕೆ ವೃತ್ತಿಯನ್ನು ಆರಂಭಿಸಲು ಹಾಗೂ ಚರ್ಮಗಾರಿಕೆ ತರಬೇತಿ ನೀಡುವ ಸಲುವಾಗಿ ಉದ್ಘಾಟಿಸಲಾಗಿತ್ತು. ಚರ್ಮಗಾರಿಕೆ ತರಬೇತಿದಾರನನ್ನು ನೇಮಕ ಮಾಡಿ ದಲಿತರಿಗೆ ಚರ್ಮಗಾರಿಕೆ ತರಬೇತಿ ನೀಡಲಾಗುತ್ತಿತ್ತು.

ಸರ್ಕಾರಿ ಚರ್ಮಗಾರಿಕೆ ಗೋದಾಮು ನೋಡಿಕೊಳ್ಳಲು ಖಾಸಗಿ ವ್ಯಕ್ತಿ ವಿಠಲ್ ಖಾಂದರೆ ಅವರಿಗೆ 1994 ರಲ್ಲಿ ಗುಲಬರ್ಗಾ ಪ್ರಾದೇಶಿಕ ಆಯುಕ್ತರು ಲಿಡ್ಕರ್ ಅವರು ಚರ್ಮಗಾರಿಕೆ ಗೋದಾಮು ನೋಡಿಕೊಳ್ಳಲು ಅವರ ಹೆಸರಿಗೆ ಹಂಚಿಕೆ ಮಾಡಲಾಗಿತ್ತು. ಇದನ್ನೇ ನೆಪವಾಗಿಟ್ಟುಕೊಂಡು, ಜನವರಿ 2020ರಂದು ಗ್ರಾಮ ಪಂಚಾಯತಿ ಇದ್ದ ಸಂದರ್ಭದಲ್ಲಿ ಅಕ್ರಮವಾಗಿ ವಿಠಲ್ ಖಾಂದಾರೆ ಹಾಗೂ ಅಂದು ಕಾರ್ಯನಿರ್ವಹಿಸುತ್ತಿರುವ ಗ್ರಾ.ಪಂ ಸಿಬ್ಬಂದಿ ಅಕ್ರಮವಾಗಿ ಈ ಆಸ್ತಿಯನ್ನು ವರ್ಗಾವಣೆ ಮಾಡಿ ಕೋಟ್ಯಾಂತರ ಬೆಲೆಬಾಳುವ ಆಸ್ತಿಯನ್ನು ಕೊಳ್ಳೆಹೊಡೆಯಲು ಮುಂದಾಗಿದ್ದಾರೆ ಎಂದು ಮಾದಿಗ ದಂಡೋರ ಸಮಿತಿಯ ತಾಲೂಕು ಅಧ್ಯಕ್ಷ ಮಾನಪ್ಪ ಕಟ್ಟಿಮನಿ ಆರೋಪಿಸಿದ್ದಾರೆ.

ಹುಣಸಗಿ ಗ್ರಾಮ ಪಂಚಾಯತಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ ಮೇಲೆಯೂ ವಿಠಲ್ ಖಾಂದಾರೆ ಅವರ ಹೆಸರಿನಿಂದ ತನ್ನ ಮಗನ ಹೆಸರಿಗೆ ಅಕ್ರಮವಾಗಿ ಪಟ್ಟಣ ಪಂಚಾಯತ ಅಧಿಕಾರಿಗಳು ಸಹ ಆಸ್ತಿಯನ್ನು ವರ್ಗಾವಣೆ ಮಾಡಿ ಫಾರಂ ನಂ. 3 ಕೂಡಾ ನೀಡಿದ್ದಾರೆ. ಅಧಿಕಾರಿಗಳೊಂದಿಗೆ ಕೈ ಜೋಡಿಸಿ ಮತ್ತೆ ಅಕ್ರಮಕ್ಕೆ ಮುಂದಾಗಿದ್ದಾರೆ ಎಂದು ಪಂಚಾಯಿತಿ ವಿರುದ್ಧ ಸಿದ್ದಣ್ಣ ಮೇಲಿನಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಈ ಆಸ್ತಿ ರಕ್ಷಣೆಗೆ ಮುಂದಾಗಿ ತಕ್ಷಣ ಸೂಕ್ತ ದಾಖಲಾತಿಗಳನ್ನು ಪರಿಶೀಲನೆ ನಡೆಸಿ, ಅಕ್ರವಾಗಿ ವರ್ಗವಣೆಯಾದ ಆಸ್ತಿಯನ್ನು ರದ್ದುಪಡಿಸಿ ಸರಕಾರದ ಅಧೀನಕ್ಕೆ ಒಳಪಡುವ ಆಸ್ತಿಯನ್ನು ರಕ್ಷಿಸಬೇಕು, ಈ ಅಕ್ರಮದಲ್ಲಿ ಭಾಗಿಯಾದ ಪೌರಸೇವಾ ಸಿಬ್ಬಂದಿ ಸೇವೆಯಿಂದ ವಜಾಗೊಳಿಸಬೇಕು ಎಂದು ಚರ್ಮಗಾರಿಕೆ ತರಬೇತಿ ಪಡೆದ ಸದಸ್ಯರಾದ ಬುದ್ದಪ್ಪ ಗ್ಯಾಂಗ್ಮ್ಯಾನ್‌, ಪರಸಪ್ಪ ಕಟ್ಟಿಮನಿ, ಮುದಕಪ್ಪ ಆನೇಕಿ ಆಗ್ರಹಿಸಿದ್ದಾರೆ.

--

ಕೋಟ್‌-1

ಹುಣಸಗಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗೆ ಈ ಕುರಿತು ಅರ್ಜಿ ಸಲ್ಲಿಸಿ 15 ದಿನಗಳು ಕಳೆದರೂ ಸೂಕ್ತ ದಾಖಲೆ ಪರಿಶೀಲನೆ ನಡೆಸದೆ ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ನಿಷ್ಕಾಳಜಿ ತೋರಿ ಜಾರಿಕೊಳ್ಳುತ್ತಿದ್ದಾರೆ.

- ಸಿದ್ದು ಬಾವಿಮನಿ, ಮುಖಂಡರು.

-

ಕೋಟ್-2

ಚರ್ಮಗಾರಿಕೆ ಗೋದಾಮು ಖಾಸಗಿ ವ್ಯಕ್ತಿಗೆ ವರ್ಗವಣೆಯಾದ ಬಗ್ಗೆ ಸಂಬಂಧಿಸಿದ ಅವರಿಗೆ ನೋಟೀಸ್‌ ನೀಡಲಾಗಿದೆ. ದಾಖಲೆಗಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವದು.

- ಸಿದ್ದರಾಮೇಶ್ವರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹುಣಸಗಿ.

-

11ವೈಡಿಆರ್‌10 : ಹುಣಸಗಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಚರ್ಮಗಾರಿಕೆ ತರಬೇತಿ ಕೇಂದ್ರದ ಗೋದಾಮು.

11ವೈಡಿಆರ್‌11 : ಹುಣಸಗಿಯ ಚರ್ಮಗಾರಿಕೆ ತರಬೇತಿ ಕೇಂದ್ರದ ಗೋದಾಮು ಅಕ್ರಮ ವರ್ಗಾವಣೆ ಮಾಡಿರುವದನ್ನು ವಿರೋಧಿಸಿ ಮಾದಿಗ ದಂಡೋರ ಸಮಿತಿ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.