ಸರ್ಕಾರಗಳಿಂದ ರೈತ ವಿರೋಧಿ ಕಾನೂನು ಜಾರಿ: ನಟ ಚೇತನ್ ಅಹಿಂಸಾ

KannadaprabhaNewsNetwork |  
Published : Mar 23, 2025, 01:30 AM IST
ನವಲಗುಂದ ಪಟ್ಟಣದ ಮಹದಾಯಿ, ಕಳಸಾ ಬಂಡೂರಿ ಹೋರಾಟ ವೇದಿಕೆಯಲ್ಲಿ ನಟ, ಹೋರಾಟಗಾರ ಚೇತನ್ ಅಹಿಂಸಾ ಮಾತನಾಡಿದರು. | Kannada Prabha

ಸಾರಾಂಶ

ನಮ್ಮನ್ನಾಳುವ ಸರ್ಕಾರಗಳು ಹಸಿರು ಟಾವೆಲ್ ಹಾಕಿ ರೈತಪರ ಎಂದು ಹೇಳಿ ರೈತವಿರೋಧಿ ಕಾನೂನುಗಳನ್ನು ಜಾರಿಗೊಳಿಸುತ್ತಿರುವುದಲ್ಲದೇ ರೈತ ಕಾನೂನುಗಳನ್ನು ತಿದ್ದುಪಡಿ ಮಾಡುತ್ತಿರುವುದು ತೀವ್ರ ಅನ್ಯಾಯ ಎಂದು ನಟ, ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.

ನವಲಗುಂದ: ನಮ್ಮನ್ನಾಳುವ ಸರ್ಕಾರಗಳು ಹಸಿರು ಟಾವೆಲ್ ಹಾಕಿ ರೈತಪರ ಎಂದು ಹೇಳಿ ರೈತವಿರೋಧಿ ಕಾನೂನುಗಳನ್ನು ಜಾರಿಗೊಳಿಸುತ್ತಿರುವುದಲ್ಲದೇ ರೈತ ಕಾನೂನುಗಳನ್ನು ತಿದ್ದುಪಡಿ ಮಾಡುತ್ತಿರುವುದು ತೀವ್ರ ಅನ್ಯಾಯ ಎಂದು ನಟ, ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.

ಪಟ್ಟಣದ ಮಹದಾಯಿ, ಕಳಸಾ ಬಂಡೂರಿ ರೈತರ ಹೋರಾಟ ವೇದಿಕೆಗೆ ಶನಿವಾರ ಭೇಟಿ ನೀಡಿ ಮಾತನಾಡಿದರು.

ರೈತರು ಹಾಗೂ ಕಾರ್ಮಿಕ ವರ್ಗದವರಿಗೆ ನ್ಯಾಯ ಒದಗಿಸುವುದು ಮುಖ್ಯವಾಗಿದೆ. ಮಹದಾಯಿ, ಕಳಸಾ- ಬಂಡೂರಿ ನಾಲಾ ಜೋಡಣೆ ಕುಡಿಯುವ ನೀರಿಗಾಗಿ ನಮ್ಮ ರೈತರು ಸಾವಿರಾರು ದಿನಗಳಿಂದ ಹೋರಾಟ ಮಾಡುತ್ತಿರುವುದು ನೋಡಿದರೆ ರೈತಕುಲವನ್ನು ಸರ್ಕಾರಗಳು ತುಳಿಯುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದೆ ಎಂದರು.

ಈಗಿನ ವೈಜ್ಞಾನಿಕ ಹೋರಾಟಗಳಲ್ಲಿ ಗಟ್ಟಿಯಾದ ಶಕ್ತಿಗಳೇ ಒಂದಾಗಿ ನಿಂತಾಗ ಮಾತ್ರ ಹೋರಾಟಕ್ಕೆ ಪ್ರತಿಫಲ ಸಿಗುತ್ತದೆ. ಎಲ್ಲರೂ ಗಟ್ಟಿಯಾದ ಸಿದ್ಧಾಂತಕ್ಕೆ, ಅದು ಸಂವಿಧಾನದ ಸಮಸಿದ್ಧಾಂತಕ್ಕೆ ಬದ್ಧರಾಗಿ ನಿಂತಾಗ ಮಾತ್ರ ಸಾಧ್ಯ. ಈ ಹಿಂದೆಯೂ ಹೋರಾಟಕ್ಕೆ ಬೆಂಬಲ ನೀಡಿದ್ದೇನೆ. ಪ್ರತಿಫಲ ಸಿಗುವ ವರೆಗೂ ಹೋರಾಟಕ್ಕೆ ಸದಾ ಸಿದ್ಧನಿರುವುದಾಗಿ ತಿಳಿಸಿದರು.

ಇದಕ್ಕೂ ಮೊದಲು ವಾಟಾಳ್ ನಾಗರಾಜ್ ಅವರು ಕರ್ನಾಟಕ ಬಂದ್‌ಗೆ ಕಳಸಾ -ಬಂಡೂರಿ ರೈತ ಹೋರಾಟ ಸಮಿತಿಯಿಂದ ಬೆಂಬಲಿಸಿ ರೈತ ಹುತಾತ್ಮ ವೀರಗಲ್ಲಿನಿಂದ ಪಟ್ಟಣದ ನೀಲಮ್ಮನ ಜಲಾಶಯದ ವರೆಗೆ ಪ್ರತಿಭಟನೆ ನಡೆಸಿ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು. ಬಳಿಕ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ರೈತ ಮುಖಂಡರಾದ ಸುಭಾಸಗೌಡ ಪಾಟೀಲ, ಮಲ್ಲೇಶ ಉಪ್ಪಾರ ಮಾತನಾಡಿದರು.

ಹೋರಾಟ ಸಮಿತಿ ಅಧ್ಯಕ್ಷ ಯಲ್ಲಪ್ಪ ದಾಡಿಬಾಯಿ, ಮಲ್ಲೇಶ್ ಉಪ್ಪಾರ, ಬಸನಗೌಡ ಹುನಸಿಕಟ್ಟಿ, ಗೋವಿಂದರೆಡ್ಡಿ ಮೊರಬದ, ರವಿ ತೋಟದ, ಮುರಗೆಪ್ಪ ಪಲ್ಲೇದ, ಸಂಗಪ್ಪ ನಿಡವಣಿ, ಕರಿಯಪ್ಪ ತಳವಾರ, ಗುರುನಾಥ ಕುಲಕರ್ಣಿ, ಸಿದ್ದಲಿಂಗಪ್ಪ ಹಳ್ಳದ, ಗಂಗಪ್ಪ ಸಂಘಟಿ, ನಿಂಗಪ್ಪ ತೋಟದ, ಶಿವಪ್ಪ ಸಂಗಳ ಸೇರಿದಂತೆ ಹಲವರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ