ರಾಜ್ಯ ಸರ್ಕಾರ ಕೆಂಪೇಗೌಡ ಜಯಂತಿ ಹೆಸರಿನಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇವಲ ಒಕ್ಕಲಿಗ ಜನಾಂಗದ ನಾಯಕರಲ್ಲ. ರಾಜ್ಯದ ಸರ್ವ ಜನಾಂಗದ ನಾಯಕರು. ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಆಯೋಜಿಸಿರುವ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡದಿರುವ ಕ್ರಮವನ್ನು ತಾಲೂಕು ಜೆಡಿಎಸ್ ಅಕ್ಕಿಹೆಬ್ಬಾಳು ಹೋಬಳಿ ಘಟಕ ತೀವ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸಿತು.
ತಾಲೂಕಿನ ಬೀರುವಳ್ಳಿಯಲ್ಲಿ ಗ್ರಾಮಸ್ಥರೊಂದಿಗೆ ಕೆಂಪೇಗೌಡ ಜಯಂತಿ ಆಚರಿಸಿದ ಬಳಿಕ ಜೆಡಿಎಸ್ ಮುಖಂಡರು, ರಾಜ್ಯ ಸರ್ಕಾರದ ದ್ವೇಷದ ರಾಜಕಾರಣದ ವಿರುದ್ಧ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಅಧ್ಯಕ್ಷ ಬಸವಲಿಂಗಪ್ಪ, ರಾಜ್ಯ ಸರ್ಕಾರ ಕೆಂಪೇಗೌಡ ಜಯಂತಿ ಹೆಸರಿನಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇವಲ ಒಕ್ಕಲಿಗ ಜನಾಂಗದ ನಾಯಕರಲ್ಲ. ರಾಜ್ಯದ ಸರ್ವ ಜನಾಂಗದ ನಾಯಕರು. ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಹುದ್ದೆ ಅಲಂಕರಿಸಿದ ಏಕೈಕ ಕನ್ನಡಿಗ ದೇವೇಗೌಡರು ದೇಶದ ರೈತರು, ಕಾರ್ಮಿಕರು, ಸೇರಿದಂತೆ ದುಡಿಯುವ ಶ್ರಮಿಕ ವರ್ಗದ ಪರವಾಗಿ ನಿಲ್ಲುವ ಮೂಲಕ ಎಲ್ಲಾ ವರ್ಗದ ಜನತೆ ಸಾಮಾಜಿಕ ನ್ಯಾಯ ಕಲ್ಪಿಸಿದ್ದರು. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಪರಿಶಿಷ ಜಾತಿ ಮತ್ತು ಪಂಗಡಗಳು ಮತ್ತು ಮಹಿಳೆಯರು ಹೀಗೆ ಎಲ್ಲರಿಗೂ ಸಮಾನತೆಯಿಂದ ಲಾಭ ಸಿಗುವಂತೆ ಮೀಸಲಾತಿ ಯೋಜನೆ ಜಾರಿಗೆತಂದವರು.
ರೈತರ ಪಾಲಿನ ಶಾಶ್ವತ ಪ್ರಧಾನಿಯಾಗಿರುವ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿಲ್ಲ. ಅವರಿಗೆ ಆಹ್ವಾನ ಸಹ ನೀಡಿಲ್ಲ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸದ್ಯ ಕೇಂದ್ರ ಸರ್ಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರನ್ನೂ ಆಹ್ವಾನಿಸಿಲ್ಲ ಎಂದು ಕಿಡಿಕಾರಿದರು.
ಆಹ್ವಾನ ಪತ್ರಿಕೆಯಲ್ಲೂ ಅವರ ಹೆಸರು ಮುದ್ರಿಸಿ ಗೌರವನ್ವಿತರಾಗಿ ನಡೆಸಿಕೊಳ್ಳದೇ ಸರ್ಕಾರ ಕೇವಲ ತಮ್ಮ ಪಕ್ಷಕ್ಕೆ ನಿಷ್ಟರಾಗಿರುವವರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವ ಮೂಲಕ ಕ್ಷುಲ್ಲಕ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯ ಬಿ.ಎನ್.ಕುಮಾರ್, ಬೀರುವಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಲಕ್ಷ್ಮೇಗೌಡ, ಶಿವರಾಮೇಗೌಡ, ವೆಂಕಟೇಶ್ಗೌಡ, ಪರುಶುರಾಮ್, ನಂಜೇಗೌಡ, ಶೋಭಿತ್, ರಾಮಕೃಷ್ಣ, ಚಂದ್ರೆಗೌಡ, ಮಹದೇವ್, ಶ್ರೀನಿವಾಸ್, ಧರಣೇಶ್, ಮಹೇಶ್, ಕೃಷ್ಣ ಹಲವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.