ಡಂಬಳ: ಗ್ರಾಪಂ ಒಂದನೇ ವಾರ್ಡ್ ಸದಸ್ಯ ಗಂಗಣ್ಣ ಸೂರಟೂರ ನಿಧನದಿಂದ ತೆರವಾದ ಸ್ಥಾನಕ್ಕೆ ಶನಿವಾರ ನಡೆದ ಉಪ ಚುನಾವಣೆ ಶಾಂತಿಯುತವಾಗಿ ನಡೆಯಿತು.
ವಯೋವೃದ್ಧರು, ಅಂಗವಿಕಲರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರನ್ನು ಅವರ ಸಂಬಂಧಿಕರು ಮತದಾನ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿದ್ದ ಚಿತ್ರಣ ಸಾಮಾನ್ಯವಾಗಿ ಕಂಡುಬಂತು. ಗುಳೆ ಹೋಗಿದ್ದ ಜನರು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಅರಿಸಿ ರಾಜ್ಯದ ಬೆಂಗಳೂರು, ಮಂಗಳೂರು, ಉಡುಪಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ರಾಜ್ಯದ ವಿವಿಧ ನಗರದಲ್ಲಿ ನೆಲೆಸಿದ್ದ ಜನರು ಸ್ವಗ್ರಾಮಕ್ಕೆ ಆಗಮಿಸಿ ತಮಗೆ ಬೇಕಾದ ಅಭ್ಯರ್ಥಿಗಳ ಪರ ಮತ ಚಲಾಯಿಸಿದರು.
ಈ ಕುರಿತು ಮಾಹಿತಿ ನೀಡಿದ ಚುನಾವಣಾ ಅಧಿಕಾರಿ ದುರ್ಗಾಪ್ರಸಾದ ಡಿ.ಒಂದನೇ ವಾರ್ಡ್ನಲ್ಲಿ ಒಟ್ಟು 802 ಮತದಾರರಿದ್ದಾರೆ. 264 ಪುರುಷರು ಮತ್ತು 230 ಮಹಿಳೆಯರು ಒಟ್ಟು 494 ಮತ ಚಲಾವಣೆಯಾಗಿವೆ. ಶೇ 61.60 ರಷ್ಟು ಶೇಕಡವಾರು ಮತದಾನವಾಗಿದೆ ಎಂದರು.ಈ ಸಮಯದಲ್ಲಿ ಸಹಾಯಕ ಚುನಾವಣಾಧಿಕಾರಿ ಎಂ.ಬಿ.ಮೇಟಿ, ಗ್ರೇಡ2 ತಹಸೀಲ್ದಾರ ರಾಧ ಕೆ, ಉಪತಹಸೀಲ್ದಾರ್ ಸಿ.ಕೆ. ಬಳೂಟಗಿ, ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಗ್ರಾಮ ಆಡಳಿತಾಧಿಕಾರಿ ಲಕ್ಷ್ಮಣ ಗುಡಸಲಮನಿ, ಡಂಬಳ ಪೊಲೀಸ್ ಹೊರಠಾಣೆಯ ಎಎಸ್ಐ ವೀರಣ್ಣ ತಂಟ್ರೆ, ಬಸವರಾಜ ಬಣಕಾರ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.