ಕನ್ನಡಪ್ರಭ ವಾರ್ತೆ ಸವದತ್ತಿ
ಪಟ್ಟಣದಲ್ಲಿ ಕಳೆದ ೪೦ ವರ್ಷಗಳ ಹಿಂದೆ ನಡೆದಂತ ಗ್ರಾಮದೇವಿ ಜಾತ್ರೆಯನ್ನು ಮುಂಬರುವ ೨೦೨೬ರ ಮೇ ಮೊದಲ ವಾರದಲ್ಲಿ ನಡೆಸಲು ಎಲ್ಲ ಹಿರಿಯರ ಸಮ್ಮುಖದಲ್ಲಿ ತೀರ್ಮಾನಿಸಲಾಗುತ್ತಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರುಪಾಕ್ಷ ಮಾಮನಿ ಹೇಳಿದರು.ಪಟ್ಟಣದ ಮಾಮನಿ ಕಲ್ಯಾಣ ಮಂಟಪದಲ್ಲಿ ಗ್ರಾಮದೇವಿ ಜಾತ್ರೆಯ ಕುರಿತು ನಡೆದಂತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಎರಡ್ಮೂರು ಸಭೆಗಳನ್ನು ಕರೆದು ಗ್ರಾಮದೇವಿಯ ಜಾತ್ರೆಯ ವಿಷಯವಾಗಿ ಎಲ್ಲರೊಂದಿಗೆ ಚರ್ಚಿಸಲಾಗಿದ್ದು, ಅದರಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲು ವಿವಿಧ ಸಮಿತಿಗಳನ್ನು ರಚಿಸಲಾಗುತ್ತಿದೆ ಎಂದರು. ಪಟ್ಟಣದ ಪ್ರತಿಯೊಂದು ಜಾತಿ ಮತ್ತು ಧರ್ಮದವರೆಲ್ಲರೂ ಸೇರಿಕೊಂಡು ಈ ಗ್ರಾಮದೇವಿಯ ಜಾತ್ರೆಯನ್ನು ಮಾಡಬೇಕಿರುವುದರಿಂದ ಎಲ್ಲರ ಸಹಕಾರ ಬಹುಮುಖ್ಯ. ಪಟ್ಟಣದ ವ್ಯಾಪ್ತಿಯಲ್ಲಿ ಬರುವಂತ ಗ್ರಾಮದೇವಿ ಜಾತ್ರೆಗೆ ಪ್ರತಿಯೊಬ್ಬರಿಂದ ವಂತಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಪ್ರತಿ ರೈತರಿಂದ ಒಂದು ಎಕರೆ ಜಮೀನಿಗೆ ಒಂದು ಸಾವಿರ ರುಪಾಯಿಗಳಂತೆ ವಂತಿಗೆಯನ್ನು ಸಂಗ್ರಹಿಸಲಾಗುತ್ತಿದೆ ಎಂದರು.ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಪಟ್ಟಣದಲ್ಲಿ ಐತಿಹಾಸಿಕವಾದಂತ ಗ್ರಾಮದೇವಿ ಜಾತ್ರೆಯನ್ನು ಮಾಡಲು ನನ್ನ ಸಂಪೂರ್ಣ ಸಹಕಾರವಿದ್ದು, ಜಾತ್ರೆಯ ಪೂರಕವಾಗಿ ಗ್ರಾಮದೇವಿಯ ದೇವಸ್ಥಾನದ ನವೀಕರಣದ ಜೊತೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿನ ಚರಂಡಿ ಮತ್ತು ರಸ್ತೆ ದುರಸ್ಥಿ ಕಾರ್ಯ ಹಾಗೂ ಇನ್ನುಳಿದಂತ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಶಾಸಕರ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸುವುದಾಗಿ ತಿಳಿಸಿದರು.ಸದಾಶಿವ ಕೌಜಲಗಿ ಮಾತನಾಡಿ, ಸಾಂಪ್ರದಾಯಕವಾಗಿ ನಡೆಯುವ ಜಾತ್ರೆಗೆ ಎಲ್ಲರ ಸಹಕಾರ ಬಹುಮುಖ್ಯವಾಗಿದ್ದು, ಜಾತ್ರೆಯ ೧೧ ದಿನಗಳ ಕಾಲ ಪಟ್ಟಣದ ತುಂಬೆಲ್ಲ ಹಬ್ಬದ ವಾತಾವರಣವನ್ನು ಸೃಷ್ಟಿಸಿ ಜಾತ್ರೆಯನ್ನು ಯಶಸ್ವಿಗೊಳಿಸೋಣ ಎಂದರು.
ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ಟಿಎಚ್ಒ ಡಾ.ಶ್ರೀಪಾದ ಸಬನೀಸ ಮಾತನಾಡಿದರು. ಡಾ.ವೈ.ಎಂ.ಯಾಕೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಮಹಾಬಳೇಶ್ವರ ಪುರದಗುಡಿ, ರಾಜಶೇಖರ ಕಾರದಗಿ, ಡಾ.ಎನ್.ಸಿ.ಬೆಂಡಿಗೇರಿ, ಬಿ.ಎನ್.ಪ್ರಭುನವರ, ಬಸವರಾಜ ಕಾರದಗಿ, ಜಗದೀಶ ಶಿಂತ್ರಿ, ಎಲ್.ಆರ್.ಕುಲಕರ್ಣಿ, ಚಂದ್ರಣ್ಣ ಶಾಮರಾಯನವರ, ಶಿವಾನಂದ ಹೂಗಾರ, ಅಮೀರ ಗೋರಿನಾಯಕ, ಸಿದ್ದಯ್ಯ ವಡಿಯರ, ಪ್ರಬು ಪ್ರಭುನವರ, ಸುಭಾಸಸಿಂಗ್ ರಜಪುತ, ಅಡಿವೆಪ್ಪ ಬೀಳಗಿ, ಪ್ರವೀಣ ಪಟ್ಟಣಶೆಟ್ಟಿ, ಆನಂದ ಜಾನ್ವೇಕರ, ಭರಮಪ್ಪ ಅಣ್ಣಿಗೇರಿ, ಮದನಲಾಲ ಚೋಪ್ರಾ, ಮಂಜುನಾಥ ಪಾಚಂಗಿ, ನೀಲಪ್ಪ ಅಣ್ಣಿಗೇರಿ, ಶ್ರೀಶೈಲ್ ಮುತಗೊಂಡ ಇತರರು ಉಪಸ್ಥಿತರಿದ್ದರು.೨೮ಎಸ್ಡಿಟಿ೧
ಸವದತ್ತಿಯ ಮಾಮನಿ ಕಲ್ಯಾಣ ಮಂಟಪದಲ್ಲಿ ನಡೆದ ಗ್ರಾಮದೇವಿಯ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಮಾತನಾಡಿದರು.ಜಾತ್ರಾ ನಿಮಿತ್ತ ಈಗಾಗಲೇ ೧೮ ಸಮಿತಿಗಳನ್ನು ರಚಿಸಲಾಗಿದ್ದು, ಅವಶ್ಯಕತೆ ಬಿದ್ದರೆ ಇನ್ನಷ್ಟು ಸಮಿತಿಗಳನ್ನು ರಚಿಸಿ ಎಲ್ಲ ರೀತಿಯ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು.
-ವಿರುಪಾಕ್ಷ ಮಾಮನಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರು.ಜಾತ್ರೆಯ ಸಮಯದಲ್ಲಿ ಎಲ್ಲ ಕಾರ್ಯಗಳು ಅತ್ಯಂತ ಯಶಸ್ವಿಯಾಗಿ ನಡೆಯುವಂತೆ ಮಾಡುವಲ್ಲಿ ಹಿರಿಯರ ಸಮ್ಮತಿಯಂತೆ ನಾನು ಜವಾಬ್ದಾರಿ ವಹಿಸುವೆ. ಗ್ರಾಮದೇವಿಯ ಜಾತ್ರೆಯನ್ನು ಮಾಡುವುದರಿಂದ ಎಲ್ಲರಿಗೂ ಒಳಿತಾಗುತ್ತಿದ್ದು, 4 ದಶಕಗಳ ನಂತರ ನಡೆಯುತ್ತಿರುವ ಈ ಜಾತ್ರೆಯನ್ನು ಬರುವಂತ ದಿನಗಳಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಮಾಡುವ ನಿರ್ಧಾರವನ್ನು ತೆಗೆದುಕೊಂಡರೆ ಸೂಕ್ತ.-ವಿಶ್ವಾಸ ವೈದ್ಯ,
ಶಾಸಕರು.