-ಪ್ರಾಥಮಿಕ ಸಹಕಾರಿ ಕೃಷಿ, ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ಮಲ್ಲಣ್ಣಗೌಡ ಮಾಲಿ ಪಾಟೀಲ್
ಕನ್ನಡಪ್ರಭ ವಾರ್ತೆ ಯಾದಗಿರಿ
ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 2023-24ನೇ ಸಾಲಿನಲ್ಲಿ ರೈತರ ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ನೀಡಿರುವ ಸಾಲದಲ್ಲಿ ನಮ್ಮ ಸಿಬ್ಬಂದಿ ಉತ್ತಮ ಕೆಲಸ ಮಾಡಿದ ಪರಿಣಾಮ ಸಾಲ ವಸೂಲಾತಿಯಲ್ಲಿ ರಾಜ್ಯದಲ್ಲಿಯೇ 6ನೇ ಸ್ಥಾನದಲ್ಲಿದ್ದೇವೆ ಎಂದು ಬ್ಯಾಂಕ್ನ ಅಧ್ಯಕ್ಷ ಮಲ್ಲಣ್ಣಗೌಡ ಮಾಲಿ ಪಾಟೀಲ್ ಹತ್ತಿಕುಣಿ ಹೇಳಿದರು.ನಗರದ ಬ್ಯಾಂಕ್ ಆವರಣದಲ್ಲಿ 2023-24ನೇ ಸಾಲಿನ 66ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸಾಲಿನಲ್ಲಿ ಬ್ಯಾಂಕಿನಿಂದ ಸದಸ್ಯರಿಗೆ 1.62 ಕೋಟಿ ರು. ಸಾಲ ವಿತರಿಸಲಾಗಿತ್ತು, ಅದರಲ್ಲಿ 1.14 ಕೋಟಿ ರು.ಗಳು (93.27%) ವಸೂಲಾತಿ ಮಾಡುವ ಮೂಲಕ ಬ್ಯಾಂಕ್ನ ಆರ್ಥಿಕ ಪರಿಸ್ಥಿತಿ ಹಲವಾರು ತೊಂದರೆಗಳ ಮಧ್ಯೆ ಉತ್ತಮವಾಗಿದೆ ಎಂದು ತಿಳಿಸಿದರು.
ಈ ಸಾಲಿನಲ್ಲಿ ಕೂಡ ಬ್ಯಾಂಕ್ನಿಂದ ರೈತರಿಗೆ ಭೂ ಅಭಿವೃದ್ಧಿಪಡಿಸಿಕೊಳ್ಳಲು, ಟ್ರ್ಯಾಕ್ಟರ್ ಖರೀದಿಸಲು, ತಮ್ಮ ಜಮೀನುಗಳಿಗೆ ತಂತಿ ಬೇಲಿ ಹಾಕಿಕೊಳ್ಳಲು ಹಾಗೂ ಇನ್ನಿತರ ಕಾಮಗಾರಿಗಳನ್ನು ಕೈಗೊಳ್ಳಲು 50 ಲಕ್ಷ ರು.ಗಳು ಸಾಲ ನೀಡಲಾಗಿದೆ. ಇನ್ನು ಹಲವಾರು ಸದಸ್ಯರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆಡಳಿತ ಮಂಡಳಿ, ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ, ಅರ್ಹ ವ್ಯಕ್ತಿಗಳಿಗೆ ಸಾಲ ವಿತರಿಸಲಾಗುವುದು ಎಂದು ತಿಳಿಸಿದರು.
ಬ್ಯಾಂಕ್ನ ಉಪಾಧ್ಯಕ್ಷ ವಿಶ್ವನಾಥ ನೀಲಹಳ್ಳಿ ಮಾತನಾಡಿ, 2023-25ನೇ ಸಾಲಿನಲ್ಲಿ ಕೈಗೊಂಡಿರುವ ಚಟುವಟಿಕೆಗಳನ್ನು ವಿವರಿಸಿ ಅಭಿವೃದ್ಧಿಗಾಗಿ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.ಬ್ಯಾಂಕಿನ ವ್ಯವಸ್ಥಾಪಕರಾದ ಅಯ್ಯಣರೆಡ್ಡಿ ನಾಯ್ಕಲ್ ವಾರ್ಷಿಕ ಮಹಾಸಭೆಯ ಸಮಗ್ರ ವರದಿ ವಾಚಿಸಿದರು.
ಸಭೆಯಲ್ಲಿ ಹಲವಾರು ಸದಸ್ಯರು ತಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸುವ ಮೂಲಕ ಅಧ್ಯಕ್ಷರ ಜೊತೆ ಚರ್ಚಿಸಿ ಪರಿಹಾರ ಕಂಡುಕೊಂಡರು.ಆಡಳಿತ ಮಂಡಳಿಯ ಸದಸ್ಯರಾದ ಆರ್. ಮಹಾದೇವಪ್ಪಗೌಡ ಅಬ್ಬೆತುಮಕೂರ, ಶ್ರೀಧರಕುಮಾರ ಇಟಗಿ ಚಂಡ್ರಿಕಿ, ಶರಣಪ್ಪ ಕೋಲಕರ್ ಯರಗೋಳ, ತಿಮ್ಮಣ್ಣ ಬಡಿಗೇರ ಸೈದಾಪೂರ, ಮರೆಪ್ಪ ಬೇಗಾರ ಯಲ್ಹೇರಿ, ಬನ್ನಯ್ಯ ಹಳಿಗೇರಾ, ಸೋಮಶೇಖರ ಸಾಹುಕಾರ ಮಸ್ಕನಳ್ಳಿ, ರಾಮಚಂದ್ರಪ್ಪ ಮುಂಡರಗಿ ಸೇರಿದಂತೆ ಇತರರಿದ್ದರು. ಕಲ್ಪನಾ ಕೊಂಬಿನ್ ಸ್ವಾಗತಿಸಿದರು. ಸಭೆಯಲ್ಲಿ ನೂರಾರು ರೈತರು ಭಾಗವಹಿಸಿದ್ದರು.
----11ವೈಡಿಆರ್20: ಯಾದಗಿರಿ ನಗರದ ಬ್ಯಾಂಕ್ ಆವರಣದಲ್ಲಿ 2023-24ನೇ ಸಾಲಿನ 66ನೇ ವಾರ್ಷಿಕ ಮಹಾಸಭೆ ಜರುಗಿತು.