ಬಸವ ನಾಡಲ್ಲಿ ಇಂದು ಅದ್ಧೂರಿ ಅಕ್ಷರ ಜಾತ್ರೆ

KannadaprabhaNewsNetwork | Published : Dec 2, 2024 1:17 AM

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಬಸವನನಾಡು ಬಸವನಬಾಗೆವಾಡಿಯಲ್ಲಿ ಇಂದು ಅಕ್ಷರ ಜಾತ್ರೆ ಜಾತ್ರೆ ನಡೆಯಲಿದೆ. ತಾಲೂಕಿನ 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಿನ ಸುಕ್ಷೇತ್ರ ಇವಣಗಿ ಗ್ರಾಮದ ವರದಾನಿ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ವೇದಿಕೆಯನ್ನು ಸಿದ್ಧಗೊಳಿಸಲಾಗಿದೆ. ಸಮ್ಮೇಳನದ ಯಶಸ್ವಿಗೆ ಇವಣಗಿ ಗ್ರಾಮದ ಮುಖಂಡರು, ಗ್ರಾಮಸ್ಥರು, ಕಸಾಪ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಸಮ್ಮೇಳನದ ವಿವಿಧ ಸಮಿತಿಗಳ ಪದಾಧಿಕಾರಿಗಳು ಟೊಂಕಕಟ್ಟಿ ನಿಂತಿದ್ದಾರೆ. ಈಗಾಗಲೇ ಸಮ್ಮೇಳನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಇವಣಗಿ ಗ್ರಾಮವನ್ನು ಕನ್ನಡ ಬರಹಗಳಿಂದ ಹಾಗೂ ಸ್ವಾಗತ ಬ್ಯಾನರ್‌ಗಳಿಂದ ತುಂಬಿಸಲಾಗಿದೆ.

ಬಸವರಾಜ ನಂದಿಹಾಳಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಬಸವನನಾಡು ಬಸವನಬಾಗೆವಾಡಿಯಲ್ಲಿ ಇಂದು ಅಕ್ಷರ ಜಾತ್ರೆ ಜಾತ್ರೆ ನಡೆಯಲಿದೆ. ತಾಲೂಕಿನ 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಿನ ಸುಕ್ಷೇತ್ರ ಇವಣಗಿ ಗ್ರಾಮದ ವರದಾನಿ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ವೇದಿಕೆಯನ್ನು ಸಿದ್ಧಗೊಳಿಸಲಾಗಿದೆ. ಸಮ್ಮೇಳನದ ಯಶಸ್ವಿಗೆ ಇವಣಗಿ ಗ್ರಾಮದ ಮುಖಂಡರು, ಗ್ರಾಮಸ್ಥರು, ಕಸಾಪ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಸಮ್ಮೇಳನದ ವಿವಿಧ ಸಮಿತಿಗಳ ಪದಾಧಿಕಾರಿಗಳು ಟೊಂಕಕಟ್ಟಿ ನಿಂತಿದ್ದಾರೆ. ಈಗಾಗಲೇ ಸಮ್ಮೇಳನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಇವಣಗಿ ಗ್ರಾಮವನ್ನು ಕನ್ನಡ ಬರಹಗಳಿಂದ ಹಾಗೂ ಸ್ವಾಗತ ಬ್ಯಾನರ್‌ಗಳಿಂದ ತುಂಬಿಸಲಾಗಿದೆ.ಪ್ರಮುಖ ರಸ್ತೆ ಬದಿಯ ಗೋಡೆಗಳನ್ನು, ಓವರ್ ಹೆಡ್ ಟ್ಯಾಂಕ್ ಮೇಲೆ ಸುಣ್ಣ-ಬಣ್ಣದಿಂದ ಅಂದಗೊಳಿಸಿ ನಾಡ-ನುಡಿ ಮಹತ್ವ ಸಾರುವ ಬರಹದೊಂದಿಗೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಜಾಗೃತಿ ಮೂಡಿಸಲಾಗಿದೆ. ಸ್ವಾಗತ ಕಮಾನುಗಳು, ನಾಡ ಧ್ವಜಗಳು, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಸಮ್ಮೇಳನಕ್ಕೆ ಬರುವ ಕನ್ನಡಾಭಿಮಾನಿಗಳಿಗೆ ಇವಣಗಿ ಗ್ರಾಮಸ್ಥರು ಹೋಳಿಗೆ-ತುಪ್ಪ, ಬದನಿಕಾಯಿ ಪಲ್ಲ್ಯೆ, ಅನ್ನ-ಸಾಂಬಾರು ದಾಸೋಹದ ವ್ಯವಸ್ಥೆ ಮಾಡಲು ಸನ್ನದ್ಧರಾಗಿದ್ದಾರೆ. ಇದಕ್ಕಾಗಿ ನಾಲ್ಕೂವರೆ ಕ್ವಿಂಟಾಲ್ ಬೇಳೆ, ನಾಲ್ಕೂವರೆ ಕ್ವಿಂಟಾಲ್ ಬೆಲ್ಲ, ಐದು ಕ್ವಿಂಟಾಲ್ ಅಕ್ಕಿ ಸೇರಿದಂತೆ ವಿವಿಧ ದಿನಸಿ ಸಾಮಾನುಗಳನ್ನು, ತರಕಾರಿ ಖರೀದಿಸಲಾಗುತ್ತಿದೆ ಎಂದು ಗ್ರಾಮದ ನಿಂಗಣ್ಣ ಬಾಗೇವಾಡಿ, ಚಂದ್ರಶೇಖರ ಸುಭಾನಪ್ಪರ ಹೇಳಿದರು.ಸಮ್ಮೇಳನದ ಪ್ರಧಾನ ವೇದಿಕೆಗೆ ವರದಾನಿ ಲಕ್ಕಮ್ಮ ದೇವಿಯ ಹೆಸರು, ಮುಖ್ಯದ್ವಾರಕ್ಕೆ ಸಾಂಸ್ಕೃತಿಕ ನಾಯಕ ಬಸವೇಶ್ವರರ ಹೆಸರು, ದಾಸೋಹ ಮನೆಗೆ ಅರವತ್ಮೂರು ಪುರಾತನರ ಶರಣರ ದಾಸೋಹ ಮನೆ ಎಂದು ಹೆಸರು, ಪುಸ್ತಕ ಮಳಿಗೆಗೆ ವರಕವಿ ಡಾ.ದ.ರಾ,ಬೇಂದ್ರೆ ಹೆಸರು ನಾಮಕರಣ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಹೇಳಿದರು. ತಾಲೂಕು ಸಮ್ಮೇಳನದ ಹಿನ್ನೆಲೆಯಲ್ಲಿ ಬಸವನಬಾಗೇವಾಡಿ ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಡಿ.೨ ರಂದು ರಜೆ ಘೋಷಿಸಲಾಗಿದೆ. ಈ ರಜೆಯನ್ನು ಡಿ.೮ರಂದು(ಭಾನುವಾರ) ಪೂರ್ಣ ದಿನ ಶಾಲೆಯನ್ನು ನಡೆಸುವ ಮೂಲಕ ಸರಿದೂಗಿಸಬೇಕೆಂದು ಬಿಇಒ ವಸಂತ ರಾಠೋಡ ಆದೇಶಿಸಿದ್ದಾರ.ಒಂಬತ್ತನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮನಗೂಳಿ ಪಟ್ಟಣದಲ್ಲಿ ಶರಣ ಸಾಹಿತಿ ಈರಣ್ಣ ಬೆಕಿನಾಳ ಸರ್ವಾಧ್ಯಕ್ಷತೆಯಲ್ಲಿ ಡಿ.೨೫ರ ೨೦೨೩ರಲ್ಲಿ ಜರುಗಿತ್ತು. ಇದೀಗ ಹತ್ತನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಇವಣಗಿ ಗ್ರಾಮದಲ್ಲಿ ಸಿದ್ರಾಮಪ್ಪ ಬಿರಾದಾರ ಸರ್ವಾಧ್ಯಕ್ಷತೆಯಲ್ಲಿ ನಡೆಯುತ್ತಿದ್ದು, ಸಮ್ಮೇಳನವನ್ನು ಕಣ್ಣುತುಂಬಿಸಿಕೊಳ್ಳಲು ಕನ್ನಡಾಭಿಮಾನಿಗಳು ಕಾತರರಾಗಿದ್ದಾರೆ.ಬಾಕ್ಸ್‌

ಸಮ್ಮೇಳನಾಧ್ಯಕ್ಷರ ಪರಿಚಯಸಮ್ಮೇಳನದ ಸರ್ವಾಧ್ಯಕ್ಷ ಸಿದ್ರಾಮಪ್ಪ ಬಿರಾದಾರ ಜೂ.೧,೧೯೬೫ ರಂದು ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಜನಿಸಿದ್ದು, ಧಾರವಾಡದ ಕವಿವಿಯಿಂದ ಇತಿಹಾಸ ಎಂ.ಎ. ಪದವಿ ಪಡೆದ ಇವರು ೧೯೮೯ ರಿಂದ ೧೯೯೬ ರವರೆಗೆ ಮಸಬಿನಾಳ ಗ್ರಾಮದ ನೂತನ ಪ.ಪೂ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ೧೯೯೬ ರಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿದರು. ಪ್ರಸ್ತುತ ಮನಗೂಳಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಶಿಕ್ಷಕ ವೃತ್ತಿಯೊಂದಿಗೆ ಕತೆ, ಕವನ,ಲೇಖನ ಬರೆಯುವ ಮೂಲಕ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಇವರ ಮನೆಯ ಜ್ಯೋತಿ ಕವನ ಮಹಾರಾಷ್ಟ್ರದ ಬಾಲಭಾರತಿ ಪಠ್ಯದಲ್ಲಿ ಅಳವಡಿಸಲಾಗಿದೆ. ಕಲಬುರಗಿಯಲ್ಲಿ ಜರುಗಿದ ೮೫ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚಿಸಿದ್ದಾರೆ. ಇವರಿಗೆ ರಾಜ್ಯ ಮಟ್ಟದ ಆರೂಢ ಪ್ರಶಸ್ತಿ, ಜೆ.ಡಿ.ಜೋಶಿ ಕಥಾ ಪ್ರಶಸ್ತಿ, ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳು ಸಂದಿವೆ. ಇವರು ಮನಗೂಳಿ ಪಟ್ಟಿಕಂಥಿ ಹಿರೇಮಠದ ಮಹಾಂತರು (ಜೀವನ ಚರಿತ್ರೆ), ಮನೆಯ ಜ್ಯೋತಿ (ಕವನ ಸಂಕಲನ), ಹೃದಯಗಳ ಲೋಕದಲ್ಲಿ (ಕಥಾಸಂಕಲನ), ಗಜಲ್‌ಗಳ ಗೆಜ್ಜೆನಾದ (ಕವನ ಸಂಕಲನ), ಶಕುನಿ ಮಾಮ (ಕಥಾ ಸಂಕಲನ), ಬಿ.ಎಸ್.ಪಾಟೀಲ ಮನಗೂಳಿ (ಜೀವನ ಚರಿತ್ರೆ), ಮುಗಿಲ ದೀಪಗಳು (ಕವನ ಸಂಕಲನ), ನಿಜದ ಸ್ವರ್ಗ ನಿಸರ್ಗ(ಕವನ ಸಂಕಲನ), ಹೇಳಿ ಹೋಗುವೆ ಕಾರಣ (ಗಜಲ್ ಸಂಕಲನ) ಸೇರಿದಂತೆ ಹಲವಾರು ಸ್ವರಾಜ್ಯದ ಹಾದಿಯಲ್ಲಿ ಮನಗೂಳಿ ಸ್ವಾತಂತ್ರ್ಯ ಯೋಧರ ಹೆಜ್ಜೆಗಳು , ಇದೇ ಅಂತರಂಗ ಸುದ್ದಿ ಇದೇ ಬಹಿರಂಗ ಸುದ್ದಿ(ಕಥಾ ಸಂಕಲನ) ಹನ್ನೊಂದು ಕೃತಿಗಳನ್ನು ರಚಿಸಿದ್ದಾರೆ. ಇವರ ಕನ್ನಡ ಸಾಹಿತ್ಯ ಸೇವೆ ಗುರುತಿಸಿ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ, ಈ ಬಾರಿಯ ಸಮ್ಮೇಳನಕ್ಕೆ ಅರ್ಜಿ ಆಹ್ವಾನಿಸಿ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಿದ್ದು ವಿಶೇಷ ಎನಿಸಿದೆ.