ಹೊನ್ನಾವರ: ಗಣೇಶ ಚೌತಿ ಪ್ರಯುಕ್ತ ಪುರಾಣ ಪ್ರಸಿದ್ಧ ಇಡಗುಂಜಿಯಲ್ಲಿ ಸೋಮವಾರ ಬೆಳಗ್ಗೆ 4 ಗಂಟೆಯಿಂದ ಮಹಾಗಣಪತಿಯ ದರ್ಶನ ಪಡೆಯಲು ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದರು.
ಚೌತಿ ಹಬ್ಬದ ದಿನ ಉಪಸಭಾಧ್ಯಕ್ಷ ಮಂಕಾಳ ವೈದ್ಯ ಅವರು ಇಡಗುಂಜಿ ಗಣಪನ ದರ್ಶನ ಪಡೆದರು. ಇದೇ ವೇಳೆ ಮಾತನಾಡಿದ ವೈದ್ಯ ಅವರು, ಸಚಿವರಾಗಿದ್ದಾಗ ಜನರಿಗೆ ನೇರವಾಗಿ ಸಹಾಯ ಮಾಡಲು ಸಾಧ್ಯ ಎನ್ನುವುದು ಸುಳ್ಳು. ಈಗಲೂ ಎಲ್ಲ ಇಲಾಖೆಯಿಂದ ಜನರಿಗೆ ಸಹಾಯ ಮಾಡಬಹುದು ಎಂದರು.
ಉಪಸಭಾಧ್ಯಕ್ಷ ಆದರೂ ಅಂತಹ ಕಟ್ಟುಪಾಡುಗಳು ಏನು ಇರುವುದಿಲ್ಲ. ವಿಧಾನಸಭೆ ಉಪಸಭಾಧ್ಯಕ್ಷ ಹುದ್ದೆಗೆ ಏರಿದಾಗ ಕಟ್ಟುಪಾಡುಗಳು ಇರುತ್ತವೆ ಎಂಬುದು ತಪ್ಪು. ಜನರ ಸಮಸ್ಯೆಗೆ ಸ್ಪಂದಿಸಲು ಅದೊಂದು ಹುದ್ದೆ ಆಗಿದೆ. ಸಚಿವರು, ಉಪಸಭಾಧ್ಯಕ್ಷ ಎಂಬ ವ್ಯತ್ಯಾಸ ಇಲ್ಲ ಎಂದರು.ಉಪಸಭಾಧ್ಯಕ್ಷ ಆದವರು ಮಾತನಾಡಬಾರದು ಎಂಬ ಯಾವುದೇ ಕಟ್ಟುಪಾಡುಗಳು ಇಲ್ಲ. ಯಾವುದೇ ಹುದ್ದೆಯಲ್ಲಿ ಕೂತರೂ ನಾನೊಬ್ಬ ಜನಸಾಮಾನ್ಯ. ಯಾವ ಹುದ್ದೆ ಏರಿದರೂ ನನ್ನಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಯಾವ ಹುದ್ದೆ ಯಾರಿಗೂ ಶಾಶ್ವತ ಅಲ್ಲ ಎಂದರು.
ಹಳಿಯಾಳ: ತಾಲೂಕಿನೆಲ್ಲೆಡೆ ಗಣೇಶ ಚತುರ್ಥಿ ಹಬ್ಬವನ್ನು ಸಾರ್ವಜನಿಕರು ಅತ್ಯಂತ ಸಂಭ್ರಮ, ಸಡಗರ ಭಕ್ತಿಭಾವದಿಂದ ಆಚರಿಸಿದರು.ಹಬ್ಬದ ನಿಮಿತ್ತ ಪಟ್ಟಣದ ಗಣೇಶ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಬೆನಕನ ದರ್ಶನ ಪಡೆದು ಪುನೀತರಾದರು. ಲಂಬೋಧರನ ಪ್ರೀತಿಯ ಗರಿಕೆ ಹಾಗೂ ಮೋದಕವನ್ನು ಅರ್ಪಿಸಿದರು.ದೇಶಪಾಂಡೆ ಮನೆಯಲ್ಲೂ ಗಣಾಧೀಶ: ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರು ತಮ್ಮ ನಿವಾಸದಲ್ಲಿ ಸೋಮವಾರ ಗಣಾಧೀಶನನ್ನು ಮೆರವಣಿಗೆಯ ಮೂಲಕ ಅದ್ಧೂರಿಯಾಗಿ ತಂದು ಪ್ರತಿಷ್ಠಾಪಿಸಿ ಕುಟುಂಬ ಸಮೇತ ಪೂಜೆಯನ್ನು ಸಲ್ಲಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಅವರ ಮನೆಯಲ್ಲೂ ವಿಘ್ನ ವಿನಾಯಕನನ್ನು ತಂದು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಘೋಟ್ನೇಕರ ಅವರ ಪತ್ನಿ ಹಾಗೂ ಪುತ್ರ ಶ್ರೀನಿವಾಸ ಘೋಟ್ನೇಕರ ಮತ್ತು ಬೆಂಬಲಿಗರು ಪೂಜಾವಿಧಿಯಲ್ಲಿ ಪಾಲ್ಗೊಂಡಿದ್ದರು.ಮಂಗಳವಾರ ಪಟ್ಟಣದ ತುಳಜಾಭವಾನಿ ದೇವಸ್ಥಾನದಲ್ಲಿ ಹಮ್ಮಿಕೊಂಡ ಗಣಹೋಮ ಧಾರ್ಮಿಕ ಪೂಜಾವಿಧಿಯಲ್ಲಿ ಶಾಸಕ ದೇಶಪಾಂಡೆ ಅವರು ಕುಟುಂಬ ಸಮೇತ ಭಾಗಿಯಾಗಿದ್ದರು.