ಮಂಗಳೂರು: 812 ಕಿಮೀ ಓಟದ ವಿಶಿಷ್ಟ ವಿಶ್ವದಾಖಲೆ ಮತ್ತು ವಿಶ್ವಶಾಂತಿಗಾಗಿ ಗಿನ್ನೆಸ್ ದಾಖಲೆ ಹೊಂದಿರುವ ಬಾಬಿ ಚೆಮ್ಮನೂರು ಒಡೆತನದ, 163 ವರ್ಷಗಳ ವಿಶ್ವಾಸಾರ್ಹ ಇತಿಹಾಸ ಹೊಂದಿರುವ ಆಭರಣ ಸಮೂಹ- ಬಾಬಿ ಚೆಮ್ಮನೂರು ಇಂಟರ್ನ್ಯಾಶನಲ್ ಜ್ಯುವೆಲ್ಲರ್ಸ್ನ 58ನೇ ಶೋರೂಮ್ ನಗರದ ಕ್ಲಾಕ್ ಟವರ್ ಬಳಿ ಭಾನುವಾರ ಅದ್ಧೂರಿಯಾಗಿ ಉದ್ಘಾಟನೆಗೊಂಡಿತು. ಸ್ಟಾರ್ ಆಕರ್ಷಣೆಯಾಗಿ ಬಾಲಿವುಡ್ ನಟ ಇಮ್ರಾನ್ ಹಶ್ಮಿ, ರಿಯಲ್ ಸ್ಟಾರ್ ಉಪೇಂದ್ರ ಅವರ ಉಪಸ್ಥಿತಿಯಲ್ಲಿ ಚೆಮ್ಮನೂರು ಜ್ಯುವೆಲ್ಲರಿ ಶೋರೂಮ್ಗೆ ಅಧಿಕೃತ ಚಾಲನೆ ನೀಡಲಾಯಿತು.ಈ ಸಂದರ್ಭ ಮಾತನಾಡಿದ ಇಮ್ರಾನ್ ಹಶ್ಮಿ, ಯಶಸ್ವಿ 57 ಶೋರೂಮ್ಗಳ ಬಳಿಕ 58ನೇ ಶೋರೂಮ್ ಆರಂಭಿಸುತ್ತಿರುವುದು ಮಹತ್ವದ ಮೈಲುಗಲ್ಲು. ಬಾಬಿ ಚೆಮ್ಮನೂರು ಅವರು ತಮ್ಮ ಆದಾಯದ ಬಹುಪಾಲನ್ನು ಬಡವರಿಗಾಗಿ ವಿನಿಯೋಗಿಸುತ್ತಿದ್ದಾರೆ. ಅವರ ಉದ್ಯಮ ಮಂಗಳೂರಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ರಿಯಲ್ ಸ್ಟಾರ್ ಉಪೇಂದ್ರ ಮಾತನಾಡಿ, ಅತ್ಯಂತ ಕಡಿಮೆ ದರದಲ್ಲಿ ಚಿನ್ನದ ಆಭರಣಗಳ ಮಾರಾಟ ಚೆಮ್ಮನೂರ್ ಜ್ಯುವೆಲ್ಲರಿಯ ವಿಶೇಷತೆ. ಮಂಗಳೂರಿನ ಜನತೆ ಪ್ರೋತ್ಸಾಹ ನೀಡಬೇಕು ಎಂದರು.
ಬಡವರಿಗೆ ಸಹಾಯಹಸ್ತ: ಇದೇ ಸಂದರ್ಭ ಬಾಬಿ ಚೆಮ್ಮನೂರು ಅವರು ಬಡ ರೋಗಿಗಳಿಗೆ ಬೋಚೆ ಫ್ಯಾನ್ಸ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಆರ್ಥಿಕ ಸಹಾಯ ವಿತರಿಸಿದರು. ಚೆಮ್ಮನೂರು ಜ್ಯುವೆಲ್ಲರಿ ಸಂಸ್ಥೆಯ ಮಾಲೀಕ ಬಾಬಿ ಚೆಮ್ಮನೂರು, ಗಾಣಿಗ ಅಭಿವೃದ್ಧಿ ನಿಗಮ ಅಧ್ಯಕ್ಷ ವಿಶ್ವಾಸ್ಕುಮಾರ್ ದಾಸ್, ಮಾಜಿ ಶಾಸಕ ಮೊಹಿಯುದ್ದೀನ್ ಬಾವ, ಮಾಜಿ ಮೇಯರ್ ಮನೋಜ್ ಕೋಡಿಕಲ್, ಉಪಮೇಯರ್ ಪೂರ್ಣಿಮಾ, ಮುಖಂಡರಾದ ಜಗದೀಶ್ ಅಧಿಕಾರಿ, ಎಲಿಯಾಸ್ ಮತ್ತಿತರರು ಇದ್ದರು. ಬಾಬಿ ಚೆಮ್ಮನೂರು ಇಂಟರ್ನ್ಯಾಶನಲ್ ಗ್ರೂಪ್ನ ಮಾರ್ಕೆಟಿಂಗ್ ಜನರಲ್ ಮ್ಯಾನೆಜರ್ ಅನಿಲ್ ಸಿ.ಪಿ. ಸ್ವಾಗತಿಸಿದರು.
ಕರ್ನಾಟಕದಲ್ಲಿ ಇನ್ನೂ 24 ಶೋರೂಮ್: ಬಾಬಿ ಚೆಮ್ಮನೂರ್: ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬಿ ಚೆಮ್ಮನೂರ್, ಮಂಗಳೂರಿನ ಶೋರೂಮ್ ಸೇರಿ ಕರ್ನಾಟಕದಲ್ಲಿ 25 ಜ್ಯುವೆಲ್ಲರಿ ಶೋರೂಮ್ಗಳನ್ನು ಆರಂಭಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಮಂಗಳೂರಿನಲ್ಲಿ ಅತ್ಯಂತ ಕಡಿಮೆ ದರದಲ್ಲಿ ಚಿನ್ನದ ಆಭರಣಗಳು ಜನರಿಗೆ ಇಲ್ಲಿ ದೊರೆಯಲಿದೆ ಎಂದು ಹೇಳಿದರು.ಗಲ್ಫ್ ರಾಷ್ಟ್ರಗಳು, ಯುಎಸ್ಎ ಮತ್ತು ಭಾರತದಲ್ಲಿ ನೆಲೆಯೂರಿರುವ ಚೆಮ್ಮನೂರು ಜ್ಯುವೆಲ್ಲರಿ ಸಂಸ್ಥೆ 163 ವರ್ಷಗಳ ಇತಿಹಾಸ ಹೊಂದಿದ್ದು, ನಾನು 4ನೇ ತಲೆಮಾರಿನಲ್ಲಿ ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದೇನೆ. ನನ್ನ ಲಾಭಾಂಶದ ಪಾಲನ್ನು ಬಡವರಿಗಾಗಿ ಮೀಸಲಿಟಿದ್ದೇನೆ ಎಂದರು. ನಾನು ಬದುಕುವುದೇ ಸಾಯಲಿಕ್ಕಾಗಿ ಎಂದು ಪುನರುಚ್ಚರಿಸಿದ ಅವರು, ಇದೇ ನನ್ನ ಜೀವನವನ್ನು ಅತ್ಯಂತ ಖುಷಿಯಾಗಿಟ್ಟಿದೆ ಎಂದೂ ಹೇಳಿದರು.