ಆನೆಗೊಂದಿ ಉತ್ಸವದ ಮೆರವಣಿಗೆಗೆ ಶಾಸಕ ಜನಾರ್ದನ ರೆಡ್ಡಿ ಚಾಲನೆ
ಗಂಗಾವತಿ ತಾಲೂಕಿನ ಐತಿಹಾಸಿಕ ಇತಿಹಾಸ ಪ್ರಸಿದ್ಧ ಆನೆಗೊಂದಿ ಉತ್ಸವದ ಅಂಗವಾಗಿ ಆನೆ ಮೇಲೆ ಅಂಬಾರಿ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.
ಶ್ರೀ ಆದಿಶಕ್ತಿ ದುರ್ಗಾದೇವಿ ದೇವಸ್ಥಾನದಿಂದ ಗಗನ್ ಮಹಲ್ವರೆಗೆ ಭವ್ಯ ಮೆರವಣಿಗೆ ಜರುಗಿತು. ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಂಬಾರಿಯಲ್ಲಿನ ಶ್ರೀ ಆದಿಶಕ್ತಿ ದುರ್ಗಾದೇವಿ ಮೂರ್ತಿಗೆ ಪುಷ್ಪ ಗುಚ್ಚ ಸಮರ್ಪಿಸಿ ಮೆರವಣಿಗೆಗೆ ಚಾಲನೆ ನೀಡಿದರು.ಮೆರವಣಿಗೆಯು ಆನೆಗೊಂದಿಯ ಗತಕಾಲದ ಸಂಸ್ಕೃತಿ, ಪರಂಪರೆಯ ಮೆಲುಕು ಹಾಕುವ ರೀತಿಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಗಮನ ಸೆಳೆದ ಕೋಲಾಟ ಪ್ರದರ್ಶನ:
ಆನೆಗೊಂದಿ ಉತ್ಸವದ ಮೆರವಣಿಗೆಯಲ್ಲಿ ಆಕರ್ಷಕ ಕೋಲಾಟ ಪ್ರದರ್ಶನಗೊಂಡಿತು. ಶಾಸಕರು, ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಹಾಗೂ ಇತರ ಅಧಿಕಾರಿಗಳು ಕೋಲಾಟ ಆಡುವುದರ ಮೂಲಕ ಸಾರ್ವಜನಿಕರ ಗಮನ ಸೆಳೆದರು.ಮೆರವಣಿಗೆಯ ಮೆರಗು ಹೆಚ್ಚಿಸಿದ ಆನೆ ಅಂಬಾರಿ:
ಆನೆಗೊಂದಿ ಉತ್ಸವದ ಮೆರವಣಿಗೆಯಲ್ಲಿ ಶ್ರೀ ಆದಿಶಕ್ತಿ ದುರ್ಗಾದೇವಿ ಮೂರ್ತಿಯನ್ನು ಹೊತ್ತ ಅಂಬಾರಿಯು ಮೆರವಣಿಗೆಯ ಮೆರಗನ್ನು ಹೆಚ್ಚಿಸಿತು. ಅಂಬಾರಿಯನ್ನು ಹೊತ್ತ ಆನೆಯ ಹೆಸರು ಲಕ್ಷ್ಮೀ. ಈ ಆನೆಯು ಪಕ್ಕದ ವಿಜಯನಗರ ಜಿಲ್ಲೆಯ ಹಂಪಿ ವಿರೂಪಾಕ್ಷೇಶ್ವರ ಸನ್ನಿಧಿಗೆ ಸೇರಿದ್ದು, ಇತ್ತೀಚೆಗೆ ನಡೆದ ಕನಕಗಿರಿ ಉತ್ಸವದಲ್ಲಿಯೂ ಪಾಲ್ಗೊಂಡು ಗಮನ ಸೆಳೆದಿತ್ತು. ಈಗ ಮತ್ತೆ ಆನೆಗೊಂದಿ ಉತ್ಸವಕ್ಕಾಗಿ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದು ವಿಶೇಷವಾಗಿದೆ.ವಿವಿಧ ಕಲಾ ತಂಡಗಳ ಆಕರ್ಷಣೆ:
ಆನೆಗೊಂದಿಯ ಉತ್ಸವದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ನಂದಿ ಧ್ವಜ ಸಮಾಳ ವಾದನ, ಕಹಳೆ ವಾದನ, ಕರಡಿ ಮಜಲು, ಹಲಗೆ ವಾದನ, ಮಹಿಳಾ ವೀರಗಾಸೆ, ಗೊರವರ ಕುಣಿತ, ಪೂಜಾ ಕುಣಿತ, ಜಗ್ಗಲಿಗೆ, ಮಹಿಳಾ ಡೊಳ್ಳು ಕುಣಿತ, ಹಗಲುವೇಷ, ಮೋಜಿನಗೊಂಬೆ, ಮಹಿಳಾ ತಮಟೆ ವಾದನ, ಕೀಲುಕುದುರೆ, ನಾಸಿಕ್ ಡೊಲ್, ನಗಾರಿ, ಗಾರುಡಿ ಗೊಂಬೆ, ಸೋಮನ ಕುಣಿತ, ಕಂಸಾಳೆ, ಲಂಬಾಣಿ ನೃತ್ಯ, ಹುಲಿವೇಷ, ಕೋಳಿ ನೃತ್ಯ, ಬೇಡರ ಪಡೆ, ಡ್ರಮ್ ವಾದನ, ಮಹಿಳಾ ಡೊಳ್ಳು, ಮಹಿಳಾ ಕೋಲಾಟ, ಮರಗಾಲು, ಹಗಲುವೇಷ, ಚಿಲಿಪಿಲಿಗೊಂಬೆ, ಪಟ ಕುಣಿತ, ವೀರಗಾಸೆ, ಚಂಡೆ ವಾದನ, ಕರಡಿ ಮಜಲು, ಯಕ್ಷಗಾನ ಕುಣಿತ, ಮೋಜಿನ ಗೊಂಬೆ, ಲೇಜಿಮ್ ನೃತ್ಯ ಹಾಗೂ ಇತರ ಕಲಾ ತಂಡಗಳು ಆಕರ್ಷಣೆಯಾಗಿದ್ದವು.