ಧಾರವಾಡ: ಸೋಮವಾರ ಮಧ್ಯಾಹ್ನದ ವೇಳೆ ಅತ್ತ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ, ಮಂದಿರದ ಉದ್ಘಾಟನೆ ನಡೆಯುತ್ತಿದ್ದರೆ, ಇತ್ತ ಧಾರವಾಡದಲ್ಲಿ ಅದೇ ಸಮಯಕ್ಕೆ ರಾಮನ ಭಕ್ತರು ಅಷ್ಟೇ ಪ್ರಮಾಣದ ಭಕ್ತಿಯಲ್ಲಿ ರಾಮನಿಗೆ ವಿಶೇಷ ಪೂಜೆ, ಜೈ ಘೋಷಗಳು, ಕುಣಿತ ಹಾಗೂ ರಾಮನ ಜಪ ಮಾಡುತ್ತ ಅಕ್ಷರಶಃ ರಾಮೋತ್ಸವ ಆಚರಿಸಿದರು.
ಹೆಚ್ಚು ಕಡಿಮೆ ಒಂದು ವಾರದಿಂದ ಧಾರವಾಡದಲ್ಲೂ ಬರೀ ರಾಮನ ಜಪ-ತಪಗಳು ನಡೆಯುತ್ತಿದ್ದು, ಸೋಮವಾರ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಹಾಗೂ ಮಂದಿರದ ಉದ್ಘಾಟನೆ ಮೂಲಕ ಒಂದರ್ಥದಲ್ಲಿ ರಾಮನ ಮೇಲಿನ ಭಕ್ತಿಯು ಪರಾಕಾಷ್ಠೆ ಮುಟ್ಟಿತು. ಪ್ರಮುಖ ರಸ್ತೆ, ವೃತ್ತಗಳಲ್ಲಿ ಧ್ವಜಗಳು ರಾರಾಜಿಸಿದವು. ರಾಮ-ಹನುಮಂತ ಮಾತ್ರವಲ್ಲದೇ ಬಹುತೇಕ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದವು. ರಾಮನ ಭಕ್ತರು ಮನೆ ಎದುರು ರಾಮನ ಚಿತ್ರವುಳ್ಳ ರಂಗೋಲಿ ಬಿಡಿಸಿ ಹೂ ಅರ್ಪಿಸಿದರು. ಸಂಜೆ ಹೊತ್ತು ದೀಪ ಹಚ್ಚಿ ದೀಪೋತ್ಸವ ಮಾಡುವ ಮೂಲಕ ರಾಮನ ಜಪ ಮಾಡಿದರು.ಧಾರವಾಡದ ಜೆಎಸ್ಸೆಸ್ ವಿದ್ಯಾಗಿರಿ ಅಂತಹ ಕೆಲವು ಶಾಲೆಗಳು ರಜೆ ಘೋಷಣೆ ಮಾಡಿದ್ದರೆ ಪ್ರಜೆಂಟೇಶನ್, ಬಾಸಲ್ ಮಿಶನ್ನಂತಹ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ನಡೆಸಿದವು. ಇನ್ನು ಹಲವು ಬೆಳಗ್ಗೆ 8 ರಿಂದ 11ರ ವರೆಗೆ ಮಾತ್ರ ಶಾಲೆ ನಡೆಸಿದವು. ರಾಮ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯಕ್ರಮದ ನೇರ ಪ್ರಸಾರವನ್ನು ಮನೆಯಲ್ಲಿ ಮಾತ್ರವಲ್ಲದೇ ಪ್ರಮುಖ ಸ್ಥಳಗಳಲ್ಲಿ ಪರದೆ ಹಾಕಿ ಸಾರ್ವಜನಿಕವಾಗಿಯೂ ನೋಡಲಾಯಿತು. ಪ್ರಾಣ ಪ್ರತಿಷ್ಠಾಪನೆ ನಂತರ ಪೂಜೆ ನಡೆಸಿ ಬಹುತೇಕ ದೇವಸ್ಥಾನಗಳಲ್ಲಿ ಅನ್ನಸಂತರ್ಪಣೆ ಮಾಡಿದ್ದು ವಿಶೇಷ. ಮಕ್ಕಳಂತೂ ರಾಮ-ಸೀತಾ-ಲಕ್ಷ್ಮಣ-ಹನುಮಂತನ ವೇಷ ಧರಿಸಿ ಸಂಭ್ರಮಿಸಿದರು. ದಶಕಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಟಾಪನೆ ಹಾಗೂ ಮಂದಿರದ ಉದ್ಘಾಟನೆಯ ಸಂತಸದ ಭಾವ ಮಾತ್ರ ಸೋಮವಾರ ರಾಮನ ಭಕ್ತರಲ್ಲಿ ಎದ್ದು ಕಾಣುತ್ತಿತ್ತು.
ಮುಳ್ಳಿನ ಹೆಜ್ಜೆ ಕುಣಿತ: ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಕೆಲಗೇರಿಯ ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ರಾಮೋತ್ಸವ ವಿಶೇಷವಾಗಿ ನಡೆಯಿತು. ಗ್ರಾಮದ ಭವಾನಿ ಹೆಜ್ಜೆ ಮೇಳದ ಯುವಕರು ಮುಳ್ಳಿನ ಮೇಳದಲ್ಲಿ ಹೆಜ್ಜೆ ಹಾಕಿ ರಾಮನಿಗೆ ಭಕ್ತಿ ಅರ್ಪಿಸಿದರು. ಗ್ರಾಮದೇವತೆ ದೇವಸ್ಥಾನದಿಂದ ಕಲ್ಮೇಶ್ವರ ದೇವಸ್ಥಾನ ವರೆಗೆ ಹೆಜ್ಜೆ ಕುಣಿತದಲ್ಲಿ ಬಂದು ನಂತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಅನ್ನ ಸಂತರ್ಪಣೆ ಜರುಗಿತು. ಗ್ರಾಮದ ಹಿರಿಯರು ಇದ್ದರು. ಇನ್ನು, ಬೇಂದ್ರೆ ನಗರ ಕ್ರಾಸ್ನಲ್ಲಿ ಜನಜಾಗೃತಿ ಸಂಘದ ವತಿಯಿಂದ ಕಲಾವಿದ ಮಂಜುನಾಥ ಮರಳಿನಲ್ಲಿ ಅದ್ಭುತವಾಗಿ ರಾಮ ಮಂದಿರದ ನಿರ್ಮಾಣ ಮಾಡಿ ಗಮನ ಸೆಳೆದರು.ಸಾಧನಕೇರಿ: ಸಾಧನಕೇರಿ ಅಭಿವೃದ್ಧಿ ಸಂಘದ ವತಿಯಿಂದ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಸಾಧನಕೇರಿಯಲ್ಲಿ ಶ್ರೀರಾಮೋತ್ಸವವನ್ನು ಆಚರಿಸಲಾಯಿತು. ಹಿರಿಯರಾದ ಪರಾಂಜಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜು ನರೇಗಲ್, ರಾಮನ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ಮುಖಂಡರಾದ ಮಂಜುನಾಥ ಕಾಳೆ, ಸಾಯಿ ರಾಮ, ಮಲ್ಲಿಕಾರ್ಜುನ ಅಥಣಿ, ಮನೋಜ್ ಬೈಲೂರು, ಮಂಜುನಾಥ್ ಭಟ್ಟನವರ್, ಆನಂದ್ ಉದ್ದನ್ನವರ್ ಇದ್ದರು.ವೀರಶೈವ ಮಹಾಸಭಾ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ 140 ವರ್ಷಗಳ ಕಾನೂನು ಹೋರಾಟ ಹಾಗೂ ಶತಕೋಟಿ ಭಾರತೀಯರ 500 ವರ್ಷಗಳ ಕನಸು ಶ್ರೀರಾಮ ಮಂದಿರ ನಿರ್ಮಾಣವಾಗಿ ಲೋಕಾರ್ಪಣೆಯೊಂದಿಗೆ ನನಸಾಗುತ್ತಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಮೋತ್ಸವದಲ್ಲಿ ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ್ ಹೇಳಿದರು. ಸಿದ್ದಣ್ಣ ಕಂಬಾರ, ಶಂಕರ ಕುಂಬಿ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ್ ಇದ್ದರು.
ತಾಲೂಕಿನ ತಿಮ್ಮಾಪೂರ ಗ್ರಾಮದ ಶ್ರೀಆಂಜನೇಯಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ನಡೆದ ಶ್ರೀರಾಮೋತ್ಸವದಲ್ಲಿ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಸ್ವಾಮೀಜಿ ಯುವಕರಿಗೆ ಶ್ರೀರಾಮನ ಮೌಲ್ಯಾದರ್ಶನ ಪಾಲಿಸಲು ಸೂಚನೆ ನೀಡಿದರು. ಅದೇ ರೀತಿ ಸಮೀಪದ ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಮ ರಕ್ಷಾ ಸ್ತೋತ್ರವನ್ನು ಪಠಿಸುವುದರ ಮೂಲಕ ರಾಮದೇವರಿಗೆ ಪೂಜೆ ಸಲ್ಲಿಸಲಾಯಿತು. ಮಕ್ಕಳು ರಾಮ, ಸೀತಾ, ಲಕ್ಷ್ಮಣ ಮತ್ತು ಹನುಮನ ವೇಷ ಧರಿಸಿ ಸಂಭ್ರಮಿಸಿದರು. ಕೆಲಗೇರಿಯ ಜೆಎಸ್ಸೆಸ್ ಪಬ್ಲಿಕ್ ಶಾಲೆಯಲ್ಲೂ ರಾಮೋತ್ಸವ ನಡೆಯಿತು. ಮದಿಹಾಳ ಮಾರುತಿ ದೇವಸ್ಥಾನದಲ್ಲಿ ರಾಮ ದೇವರಿಗೆ ಮತ್ತು ಹನುಮಾನ್ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಉಚಿತ ಕಟಿಂಗ್ ಮಾಡಿ ಭಕ್ತಿ: ಶ್ರೀರಾಮನ ಮೇಲಿನ ಭಕ್ತಿ ಪರಾಕಾಷ್ಠೆ ಸೋಮವಾರ ಮುಗಿಲು ಮುಟ್ಟಿದ್ದು, ರಾಮನ ಭಕ್ತನೋರ್ವ ಉಚಿತ ಕಟಿಂಗ್ ಮಾಡುವ ಮೂಲಕ ವಿನೂತನವಾಗಿ ತನ್ನ ಭಕ್ತಿ ಪ್ರದರ್ಶಿಸಿದ್ದಾನೆ. ಇಲ್ಲಿಯ ಜಯನಗರ ಬಳಿ ಇರುವ ಶಿವಾ ಮೆನ್ಸ್ ಪಾರ್ಲರ್ನ ಶಿವಾನಂದ ಹಡಪದ ಎಂಬುವರು ಸೋಮವಾರ ಇಡೀ ದಿನ ಗ್ರಾಹಕರಿಗೆ ಉಚಿತವಾಗಿ ಕಟಿಂಗ್ ಮಾಡುವ ಮೂಲಕ ತನ್ನ ವೃತ್ತಿಯ ಮೂಲಕ ಭಕ್ತಿ ಮೆರೆದಿದ್ದಾರೆ.