ಮುನಿರಾಬಾದ್: ಇಲ್ಲಿನ ಸಮೀಪದ ಪ್ರಸಿದ್ಧ ಪುಣ್ಯಕ್ಷೇತ್ರ ಹುಲಿಗೆಮ್ಮ ದೇವಸ್ಥಾನದ ಪಕ್ಕದಲ್ಲಿರುವ ತುಂಗಭದ್ರಾ ನದಿ ತೀರದಲ್ಲಿ ಮಂಗಳವಾರ ಸಂಜೆ ತುಂಗಭದ್ರಾ ಆರತಿ ವಿಜೃಂಭಣೆಯಿಂದ ನಡೆಯಿತು.
ಹಿಂದೂ ಧರ್ಮ ದತ್ತಿ ಇಲಾಖೆ ಸಚಿವ ಬಸವಂತಪ್ಪ, ಸಂಸದ ರಾಜಶೇಖರ್ ಹಿಟ್ನಾಳ್, ಶಾಸಕ ರಾಘವೇಂದ್ರ ಹಿಟ್ನಾಳ್, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ದೇವಸ್ಥಾನದ ಕಾರ್ಯದರ್ಶಿ ಪ್ರಕಾಶ್ ರಾವ್, ಸದಸ್ಯರಾದ ಈರಣ್ಣ ಪಾಲಾಕ್ಷಪ್ಪ ಹಾಗೂ ವೆಂಕಟೇಶ್ ಉಪಸ್ಥಿತರಿದ್ದರು.
ತುಂಗಭದ್ರಾ ಆರತಿಯನ್ನು ಗಂಗಾ ಆರತಿ ಮಾಡುವ ವಿಧಾನದಲ್ಲಿ ಮಾಡಲಾಯಿತು. ಶ್ರೀ ಕ್ಷೇತ್ರ ಹುಲಿಗಿಯಲ್ಲಿ ತುಂಗಾ ಆರತಿ ನಡೆಯುತ್ತಿರುವುದು ಇದು 2ನೆಯ ವರ್ಷ. ತುಂಗಾ ಆರತಿಯ ಪ್ರಯುಕ್ತ ದೇವಸ್ಥಾನದಲ್ಲಿ ಚಂಡಿಕಾ ಹೋಮ ಆಯೋಜಿಸಲಾಯಿತು .ಅಲ್ಲದೆ ಗ್ರಾಮದ ಮುತ್ತೈದೆಯರಿಗೆ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 2000ಕ್ಕೂ ಹೆಚ್ಚು ಮಹಿಳೆಯರಿಗೆ ಊಡಿ ತುಂಬಲಾಯಿತು. ಭಕ್ತರಿಗೆ ವಿಶೇಷ ದಾಸೋಹ ಏರ್ಪಡಿಸಲಾಯಿತು.ಸಂಜೆ 4 ಗಂಟೆಯಿಂದ 5.30 ಗಂಟೆಯ ವರೆಗೆ ಶ್ರೀ ಹುಲಿಗಮ್ಮ ದೇವಿ ಅಮ್ಮನವರ ಉತ್ಸವ ಮೂರ್ತಿಯನ್ನು ಕುಂಭ ಹೊತ್ತು 1,500ಕ್ಕೂ ಅಧಿಕ ಮಹಿಳೆಯರು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ತುಂಗಾ ಆರತಿ ಪ್ರಯುಕ್ತ ಪೂರ್ಣಕುಂಭ ಕಳಸದ ಮೆರವಣಿಗೆಗೆ ವಿನಯ ಗುರೂಜಿ ಚಾಲನೆ ನೀಡಿದರು. ಆನಂತರ ಅಮ್ಮನವರು ಉತ್ಸವ ಮೂರ್ತಿಯನ್ನು ತುಂಗಾ ಆರತಿ ನಡೆಯುವ ಸ್ಥಳದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಪ್ರತಿಷ್ಠಾಪನೆ ಮಾಡಲಾಯಿತು.
ರಾಜಶೇಖರ್ ಹಿಟ್ನಾಳ್ ಆಶಯ: ಕಾಶಿಯಲ್ಲಿ ಪ್ರತಿನಿತ್ಯ ಸಾಯಂಕಾಲ ಗಂಗಾ ಮಾತೆಗೆ ಆರತಿ ಮಾಡಲಾಗುತ್ತಿದ್ದು, ವಾರಾಣಸಿಗೆ ತೆರಳಿದ್ದ ಸಂದರ್ಭದಲ್ಲಿ ಗಂಗಾ ಆರತಿ ನೋಡಿ ಪ್ರೇರೇಪಿತರಾದ ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ತುಂಗಭದ್ರಾ ನದಿಗೆ ತುಂಗಾ ಆರತಿ ಮಾಡಲು ನಿರ್ಧರಿಸಿದರು. ಹುಲಿಗಿ ಗ್ರಾಮದ ಹಿರಿಯರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿದ್ದರು. ಗ್ರಾಮಸ್ಥರು ಒಪ್ಪಿಗೆ ಸೂಚಿದ್ದರು. 2025ನಲ್ಲಿ ಪ್ರಥಮ ಬಾರಿಗೆ ಹುಲಿಗೆಮ್ಮ ದೇವಸ್ಥಾನದ ಪಕ್ಕದಲ್ಲಿ ಹರಿಯುವ ತುಂಗಾ ನದಿಗೆ ಆರತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮುಜರಾಯಿ ಇಲಾಖೆ ಸಚಿವ ಎಚ್.ಎಸ್. ಬಸವಂತಪ್ಪ ಅವರು ಪ್ರಥಮ ಬಾರಿಗೆ ಹುಲಿಗಿ ಗ್ರಾಮಕ್ಕೆ ಭೇಟಿ ನೀಡಿದಾಗ ಶ್ರೀ ಕ್ಷೇತ್ರ ಹುಲಿಗಿಯಲ್ಲಿ ಸೆ. 8ರಂದು ತುಂಗಾ ಆರತಿ ಆಚರಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಕಳೆದ ವರ್ಷಕ್ಕಿಂತ ಹೆಚ್ಚು ವಿಜೃಂಭಣೆಯಿಂದ ತುಂಗಾ ಆರತಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.