ಗುರುಭಕ್ತಿಯನ್ನುಳ್ಳ ವಿದ್ಯಾರ್ಥಿಗೆ ಬದುಕಿನ ದಾರಿ ಸುಗಮ ಸತ್ಫಲದಾಯಕವಾಗಲಿದೆಯಾದರೂ, ಇಂದಿನ ಶಿಕ್ಷಕರೂ ಹಲವು ಸವಾಲುಗಳನ್ನು ಎದುರಿಸಿ ವೃತ್ತಿ ಗೌರವನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ ಎಂದು ಶಾಸಕ ಶ್ರೀನಿವಾಸ್ ಮಾನೆ ತಿಳಿಸಿದರು.
ಹಾನಗಲ್ಲ: ಗುರುಭಕ್ತಿಯನ್ನುಳ್ಳ ವಿದ್ಯಾರ್ಥಿಗೆ ಬದುಕಿನ ದಾರಿ ಸುಗಮ ಸತ್ಫಲದಾಯಕವಾಗಲಿದೆಯಾದರೂ, ಇಂದಿನ ಶಿಕ್ಷಕರೂ ಹಲವು ಸವಾಲುಗಳನ್ನು ಎದುರಿಸಿ ವೃತ್ತಿ ಗೌರವನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ ಎಂದು ಶಾಸಕ ಶ್ರೀನಿವಾಸ್ ಮಾನೆ ತಿಳಿಸಿದರು.
ಮಂಗಳವಾರ ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದ ಆವರಣದ ಸದಾಶಿವ ಮಂಗಲ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆಯೋಜಿಸಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಡು ಕಟ್ಟುವ ದಾರಿಯಲ್ಲಿ ಗುರುವಿನ ಮಾರ್ಗದರ್ಶನ ಈ ಸಮಾಜದ ಪ್ರತಿಯೊಬ್ಬರ ಇಚ್ಛಾಶಕ್ತಿ ಅತ್ಯಂತ ಮುಖ್ಯವಾದುದು. ಎಲ್ಲ ಸಂದರ್ಭಗಳಲ್ಲಿಯೂ ಗುರುವನ್ನು ನೆನೆದು, ಅವರ ಸೇವೆಗೆ ಕೃತಜ್ಞರಾಗಿ ನಾವು ನಡೆಯಬೇಕಾಗಿದೆ. ಭಾರತ ವಿಶ್ವನಾಯಕನಾಗಲು ದೇಶಾದ್ಯಂತ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಸಂಸ್ಕೃತಿ ಸಂಸ್ಕಾರ ದೇಶ ಪ್ರೇಮದ ಅಭಿರುಚಿಯನ್ನು ಮೂಡಿಸುವಲ್ಲಿ ಗುರುವಿನ ಕಾರ್ಯ ಮಹತ್ವದ್ದಾಗಿದೆ. ರಾಜ್ಯದಲ್ಲಿ ಈಗ ೧೫ ಸಾವಿರ ಶಿಕ್ಷಕರ ನೇಮಕ ನಡೆಯಲಿದೆ. ಹಾನಗಲ್ಲ ತಾಲೂಕಿನಲ್ಲಿ ಇಷ್ಟರಲ್ಲಿ ಒಟ್ಟು ೧೮ ಕೆಪಿಎಸ್ ಶಾಲೆಗಳು ಕಾರ್ಯಾರಂಭ ಮಾಡಲಿವೆ ಎಂದರು.ಸಾನಿಧ್ಯವಹಿಸಿ ಮಾತನಾಡಿದ ಅಕ್ಕಿಆಲೂರು ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು, ಶಿಕ್ಷಕ ಸಮಾಜದ ಕಣ್ಣು. ಸಾಮಾಜಿಕ ಆರೋಗ್ಯ ಕಾಪಾಡುವಲ್ಲಿ ಗುರುವಿನ ಪಾತ್ರ ಮಹತ್ವದ್ದು, ಹಾನಗಲ್ಲ ಲಿಂ.ಕುಮಾರಶಿವಯೋಗಿಗಳು, ಸದಾಶಿವಮಹಾಸ್ವಾಮಿಗಳು ಶಿಕ್ಷಕರೂ ಹಾಗೂ ಸ್ವಾಮಿಯೂ ಆಗಿ ಸಮಾಜವನ್ನು ತಿದ್ದಿ ತೀಡಿದ ಮಹಾಪುರುಷರು. ಶಿಕ್ಷಣದ ಕ್ರಾಂತಿ ಆಗಬೇಕಾಗಿದೆ. ಅದರೊಂದಿಗೆ ಶೈಕ್ಷಣಿಕ ಪಾವಿತ್ರ್ಯವನ್ನೂ ಕಾಪಾಡಿಕೊಳ್ಳಬೇಕಾಗಿದೆ. ಇದೆಲ್ಲದಕ್ಕೂ ಪ್ರಾಮಾಣಿಕತೆ ಅತ್ಯಂತ ಮುಖ್ಯ ಎಂದರು.
ಉಪನ್ಯಾಸ ನೀಡಿದ ನಿವೃತ್ತ ಉಪನ್ಯಾಸಕ ಜಗದೇಶ ಹೊಸಮನಿ, ಶಿಕ್ಷಕ ಲೋಕ ಮಾನ್ಯ, ಗುರುವಿನ ತ್ಯಾಗದಿಂದಾಗಿ ಶಿಷ್ಯನಿಗೆ ಜ್ಞಾನ ದೀಕ್ಷೆ ಸಾಧ್ಯ. ಇಂದು ನೈತಿಕ ಮೌಲ್ಯಗಳ ಕೊರತೆ ಸಮಾಜಕ್ಕೆ ಕಾಡುತ್ತಿದೆ. ಈ ನೆಲೆಯಲ್ಲಿ ಶಿಕ್ಷಕ ಸಮಾಜ ತಿದ್ದುವತ್ತ ಮುನ್ನಡೆಯಬೇಕಾಗಿದೆ, ಶಿಕ್ಷಕ ಸದ್ಗುಣಗಳ ನಿಧಿ ಎಂದರು.ತಾಲೂಕು ತಹಸೀಲ್ದಾರ್ ವಿಠಲ ಚೌಗಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಮರಗಡಿ, ತಾಲೂಕು ಅಧ್ಯಕ್ಷ ವೀರೇಶ ಬೈಲವಾಳ, ಅನಿತಾ ಶಿವೂರ, ಅಬ್ದುಲ್ಗನಿ ಪಟೇಲ್, ಗುರುನಾಥ ಗವಾಣಿಕರ, ಡಿ.ನಾಗೇಂದ್ರಪ್ಪ, ಬಿ.ಎನ್. ಸಂಗೂರ, ಎಸ್.ಎಸ್. ಹಿರೇಮಠ, ವಿವಿಧ ಶಿಕ್ಷಕರ ಸಂಘಗಳ ಅಧ್ಯಕ್ಷ ಕಾರ್ಯದರ್ಶಿಗಳಾದ ಶಿವಯೋಗಿ ನರೇಗಲ್ಲ, ಯು.ಡಿ.ಸವಣೂರ, ಎಸ್.ಕೆ. ದೊಡ್ಡಮನಿ, ಉಮೇಶ ಅಂಗಡಿ, ಡಿ.ಡಿ. ಲಂಗೋಟಿ, ಮಲ್ಲಿಕಾರ್ಜುನ ಶಾಂತಗಿರಿ, ಎಸ್.ಬಿ. ಕಂಟೆಣ್ಣನವರ, ಅನಿತಾ ಕಿತ್ತೂರ, ಎಸ್.ವಿ. ಬೂದಿಹಾಳ, ಬಸವರಾಜ ಕರೆಪ್ಯಾಟಿ, ಸಂತೋಸ ದೊಡ್ಡಮನಿ, ವೀರಪ್ಪ ಕರೆಗೊಂಡರ, ವಿ.ವೈ. ಬೆಳ್ಳಿಕಟ್ಟಿ, ಸುರೇಶ ವಡ್ಡರ, ಸಂತೋಷ ವಡ್ಡರ, ರಾಕೇಶ ಜಿಗಳಿ, ಎಸ್.ವಿ. ಅಗಸನಹಳ್ಳಿ, ಬಿ.ಎಂ. ದಿಡಗೂರ, ಆರ್.ಬಿ. ಬಡಿಗೇರ ಮೊದಲಾದವರು ವೇದಿಕೆಯಲ್ಲಿದ್ದರು. ಸಿದ್ದು ಗೌರಣ್ಣನವರ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಪ್ರಾಥಮಿಕ ಪ್ರೌಢಶಾಲೆಗಳ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.