ಕನ್ನಡಪ್ರಭವಾರ್ತೆ ಮಧುಗಿರಿ
ಉಪವಿಭಾಗಿಧಾರಿ ಗೋಟೂರು ಶಿವಪ್ಪ , ತಹಸೀಲ್ದಾರ್ ಶಿರಿನ್ತಾಜ್, ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು. ಶುಕ್ರವಾರ ಮುಂಜಾನೆ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ ಮೂರು ಬಾರಿ ಪ್ರಕಾರೋತ್ಸವ ಮಾಡಿ ಗೋಪುರದ ಮಧ್ಯ ಭಾಗದಲ್ಲಿ ಸಿದ್ದಪಡಿಸಿದ್ದ ದ್ವಾರದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಸಮ್ಮುಖದಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಸಾವಿರಾರು ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ವೆಂಕಟೇಶ್ವರ ದರ್ಶನಕ್ಕೆ ಗೋವಿಂದ ನಾಮವಳಿ ಹಾಡುವ ಶ್ರದ್ಧಾ ಭಕ್ತಿಯಿಂದ ದರ್ಶನ ಪಡೆದರು. ಬೆಳಿಗ್ಗೆ 4ರಿಂದ ಮಹಿಳಾ ಸಂಘಟನೆ ಸದಸ್ಯರು ನಿರಂತರವಾಗಿ ದೇವರ ಮೇಲಿನ ಭಕ್ತಿಗೀತೆಗಳನ್ನು ಹಾಡಿದರು. ಪ್ರಧಾನ ಅರ್ಚಕ ಅನಂತ ಪದ್ಮನಾಭ ಭಟ್ಟ ಪೂಜೆ ಸೇವೆಗಳನ್ನು ನೆರವೇರಿಸಿದರು.ಲಡ್ಡು ,ಸಿಹಿ ಮತ್ತು ಖಾರದ ಪೊಂಗಲ್ , ಬಿಸಿ ಬೆಳೆ ಬಾತು ಮೊಸರನ್ನವನ್ನು ಭಕ್ತರಿಗೆ ವಿತರಿಸಲಾಯಿತು. ಶ್ರೀವೆಂಕಟೇಶ್ವರನಿಗೆ ಮಾಡಿದ್ದ ವಜ್ರಾಂಗಿ ಅಲಂಕಾರ ಅತ್ಯಕರ್ಷಣೆಯಾಗಿತ್ತು. ತಾಲೂಕಿನಾದ್ಯಂತ ಶ್ರೀವೆಂಕಟೇಶ್ವ ಸ್ವಾಮಿ ದೇಗುಲಗಳು ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಧಾರ್ಮಿಕ ಕಂಕೈರ್ಯಗಳು ನೆರವೇರಿದವು. ಭಕ್ತ ಮಂಡಳಿಯವರು ಈ ಸಲ ಅಚ್ಚು ಕಟ್ಟಾಗಿ ಭಕ್ತರಿಗೆ ದೇವರ ದರ್ಶನ ಮತ್ತು ಪ್ರಸಾದದ ವ್ಯವಸ್ಥೆ ಮಾಡಿದ್ದನ್ನು ಕೊಂಡಾಡಿದರು.