ಸುಂಟಿಕೊಪ್ಪ: ಶಾಲಾ ಪ್ರಾರಂಭೋತ್ಸವ, ಮಕ್ಕಳಿಗೆ ಅದ್ಧೂರಿ ಸ್ವಾಗತ

KannadaprabhaNewsNetwork | Published : Jun 4, 2025 12:37 AM
ಶಾಲಾ ಪ್ರಾರಂಭೋತ್ಸವ ಅಂಗವಾಗಿ ಸುಂಟಿಕೊಪ್ಪ ವ್ಯಾಪ್ತಿಯ ಶಾಲೆಗಳಲ್ಲಿ ಬಾಳೆಗಿಡ ತಳಿರು ತೋರಣದಿಂದ ಸಿಂಗರಿಸಿ ಮಕ್ಕಳಿಗೆ ಪುಷ್ಪ ನೀಡಿ ಸಿಹಿ ಹಂಚುವ ಮೂಲಕ ಶಿಕ್ಷಕರು ಅದ್ಧೂರಿ ಸ್ವಾಗತ ಕೋರಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಸುಂಟಿಕೊಪ್ಪ ವ್ಯಾಪ್ತಿಯ ಶಾಲೆಗಳಲ್ಲಿ ಬಾಳೆಗಿಡ ತಳಿರುತೋರಣದಿಂದ ಸಿಂಗರಿಸಿ ಮಕ್ಕಳಿಗೆ ಪುಷ್ಪ ನೀಡಿ ಸಿಹಿ ಹಂಚುವ ಮೂಲಕ ಶಿಕ್ಷಕರು ಅದ್ಧೂರಿ ಸ್ವಾಗತ ಕೋರಿದರು. ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಸಂತ ಮೇರಿ ಆಂಗ್ಲಮಾಧ್ಯಮ ಶಾಲೆ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಹಾಗೂ ಗದ್ದೆಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸೋಮವಾರ ಹಬ್ಬದ ವಾತಾವರಣ ಕಂಡು ಬಂತು. 2 ತಿಂಗಳ ಬರೋಬ್ಬರಿ ರಜೆಯನ್ನು ಮುಗಿಸಿ ಮರಳಿ ಶಾಲೆಗೆ ಹೋಗುವ ದಿನ ಸಮೀಪಿಸಿ ಇಂದಿನಿಂದ ಸರ್ಕಾರದ ಘೋಷವಾಕ್ಯವಾದ ಮರಳಿ ಶಾಲೆಗೆ ಬಾ ಎಂಬುದನ್ನು ಪೋಷಕರು ಮಕ್ಕಳನ್ನು ಶಾಲೆಗೆ ತಂದು ಬಿಡುತ್ತಿದ್ದುದು ಕಂಡು ಬಂತು. ಕಿರಿಯ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳ ಮಕ್ಕಳು ಅಳುತ್ತ ತರಗತಿಗಳಿಗೆ ತೆರಳುತ್ತಿದ್ದುದು ಕಂಡು ಬಂತು. ಕೆಲವು ಶಾಲೆಗಳಲ್ಲಿ ಪೋಷಕರು ಮಕ್ಕಳನ್ನು ಶಾಲಾ ಗೇಟ್ ಬಳಿ ಶಿಕ್ಷಕರು ಇಲ್ಲವೇ ಸಿಬ್ಬಂದಿಗೆ ಒಪ್ಪಿಸಿ ಹೋಗುವಂತೆ ಸೂಚಿಸಲಾಗಿತ್ತು.ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ಮೇ 29 ರಂದು ಶಾಲೆಗಳನ್ನು ತೆರೆಯುವ ಆದೇಶವಿದೆ. ಆದರೆ ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿದ ಭಾರಿ ಮಳೆ ಗಾಳಿ ಹಿನ್ನೆಲೆಯಲ್ಲಿ ಮೇ 30 ರವರಗೆ ರಜೆ ಘೋಷಣೆ ಮಾಡಲಾಗಿದೆ. ಜೂ. 2 ರಂದು ಮಕ್ಕಳಿಗೆ ಅಧಿಕೃತವಾಗಿ ಶಾಲಾ ಪ್ರಾರಂಭೋತ್ಸವ ಮಾಡಿದ ಹಿನ್ನೆಲೆಯಲ್ಲಿ ಇದೀಗ ಪ್ರಾಥಮಿಕ ಪ್ರೌಢಶಾಲಾ ಮತ್ತೊಂದು ವರ್ಷದ ಶೈಕ್ಷಣಿಕ ಸಾಧನೆಗಾಗಿ ಶಾಲಾಯತ್ತ ಮುಖ ಮಾಡಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ, ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕರಾದ ರೇ.ಪಾ. ವಿಜಯಕುಮಾರ್, ಮುಖ್ಯೋಪಾಧ್ಯಾಯರಾದ ಸೇಲ್ವರಾಜ್, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಜೋವಿಟಾ ವಾಸ್, ಹಾಗೂ ಗದ್ದೆಹಳ್ಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಮಾಕುಮಾರಿ ಇತರೆ ಶಾಲೆಗಳ ಸಹ ಶಿಕ್ಷಕರು ಮಕ್ಕಳಿಗೆ ಸಿಹಿ ವಿತರಿಸುವ ಮೂಲಕ ಬರಮಾಡಿಕೊಂಡರು. ವಿವಿಧ ಶಾಲೆಗಳ ಮಕ್ಕಳು ಶಾಲೆಯ ಸಮವಸ್ತ್ರವನ್ನು ಧರಿಸಿಕೊಂಡು ಲವಲವಿಕೆಯಿಂದ ಶಾಲೆಗಳಿಗೆ ಆಗಮಿಸಿದರು. ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶೇ. 75 ಭಾಗದಷ್ಟು ಮಕ್ಕಳು ಶಾಲೆಗೆ ಹಾಜರಾಗಿದ್ದರು ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಸೇಲ್ವರಾಜ್ ತಿಳಿಸಿದರು. ಸುಂಟಿಕೊಪ್ಪ ಪ್ರೌಢಶಾಲೆಯ ಹಾಜರಾತಿಯ ಅರ್ಧಭಾಗದಷ್ಟು ಮಕ್ಕಳು ಶಾಲೆಯ ಆರಂಭೋತ್ಸವದ ಸಡಗರದಲ್ಲಿ ತೊಡಗಿಸಿಕೊಂಡಿದ್ದರು.