ಹೊಳೆನರಸೀಪುರ ಪಟ್ಟಣಕ್ಕೆ ಸೈಕಲ್ ಪ್ರವಾಸ ಮಾಡುತ್ತಾ ಆಗಮಿಸಿದ ಪುನೀತ್ ರಾಜಕುಮಾರ್ ಅಭಿಮಾನಿ ಹಾಗೂ ಸೈಕಲ್ ಪ್ರವಾಸ ಮಾಡುವ ಮೂಲಕ ಗಿನ್ನೀಸ್ ದಾಖಲೆ ಮಾಡಲು ಹೊರಟಿರುವ ಕೊಯಮತ್ತೂರಿನ ಮುತ್ತು ಸೆಲ್ವಂ ಅವರನ್ನು ಅಪ್ಪು ಅಭಿಮಾನಿಗಳು ಗೌರವಿಸಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣಕ್ಕೆ ಸೈಕಲ್ ಪ್ರವಾಸ ಮಾಡುತ್ತಾ ಆಗಮಿಸಿದ ಪುನೀತ್ ರಾಜಕುಮಾರ್ ಅಭಿಮಾನಿ ಹಾಗೂ ಸೈಕಲ್ ಪ್ರವಾಸ ಮಾಡುವ ಮೂಲಕ ಗಿನ್ನೀಸ್ ದಾಖಲೆ ಮಾಡಲು ಹೊರಟಿರುವ ಕೊಯಮತ್ತೂರಿನ ಮುತ್ತು ಸೆಲ್ವಂ ಅವರನ್ನು ಅಪ್ಪು ಅಭಿಮಾನಿಗಳು ಗೌರವಿಸಿದರು. ಕೊಯಮತ್ತೂರಿನ ಮುತ್ತು ಸೆಲ್ವಂ ಅವರು ಮಾತನಾಡಿ, ೧೧೧೧ ದಿನಗಳ ಸೈಕಲ್ ಪ್ರವಾಸವನ್ನು ೨೦೨೧ರ ಡಿಸೆಂಬರ್ ೨೧ರಂದು ಪ್ರಾರಂಭಿಸಿ, ೨೦೨೫ರ ಜನವರಿ ೫ರಂದು ಮುಕ್ತಾಯಗೊಳಿಸುವುದಾಗಿ ತಿಳಿಸಿ, ಈಗ ೧೯ ಸಾವಿರ ಕಿ.ಮಿ. ಕ್ರಮಿಸಿದ್ದು, ಒಟ್ಟು ೩೬,೩೦೦ ಕಿ.ಮಿ. ಪ್ರವಾಸದಲ್ಲಿ ೩೪ ರಾಜ್ಯಗಳು ಹಾಗೂ ೭೩೩ ಜಿಲ್ಲೆಗಳಿಗೆ ಭೇಟಿ ನೀಡಿ, ಗಿನ್ನೀಸ್ ದಾಖಲೆ ಮಾಡುವ ಗುರಿ ಹೊಂದಿರುವುದಾಗಿ ತಿಳಿಸಿದರು. ಬೆಂಗಳೂರಿನಲ್ಲಿ ಅಪ್ಪು ಮನೆಗೆ ತೆರಳಿ, ಅಶ್ವಿನಿ ಪುನೀತ್ ಅವರನ್ನು ಭೇಟಿ ಮಾಡಿ, ಉದ್ದೇಶವನ್ನು ತಿಳಿಸಿದಾಗ ಪ್ರವಾಸದಲ್ಲಿ ಸಹಾಯವಾಗಲಿ ಎಂದು ಪುನೀತ್ ಬಳಸಿದ್ದ ಕೂಲಿಂಗ್ ಗ್ಲಾಸ್ ಕೊಡುಗೆ ನೀಡಿದ್ದಾರೆ ಎಂದು ಸಂತಸದಿಂದ ಪ್ರದರ್ಶಿಸಿ, ಅಪ್ಪುವಿನ ಕನ್ನಡಕವೆಂದು ಅಭಿಮಾನದಿಂದ ಚುಂಬಿಸಿದರು. ತಮಿಳುನಾಡು ಮೂಲದವರಾಗಿದ್ದರೂ ಸಹ ಅಪ್ಪುವಿನ ಮೇಲಿನ ಪ್ರೀತಿ ಹಾಗೂ ಗೌರವದ ಸಂಕೇತವಾಗಿ ಸೈಕಲಿಗೆ ಅಪ್ಪುವಿನ ಭಾವಚಿತ್ರ ಲಗತ್ತಿಸಿ, ಗಂಧದಗುಡಿ ಚಿತ್ರದ ಅಪ್ಪು ಭಾವಚಿತ್ರವಿರುವ ಟೀಶರ್ಟ್ ಧರಿಸಿ, ಸೈಕಲ್ ಪ್ರವಾಸ ಮಾಡುತ್ತಿರುವ ಮುತ್ತುಸೆಲ್ವಂ ಅವರ ಅಪ್ಪು ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗಿದೆ. ಪಟ್ಟಣದ ತಾಲೂಕು ಕಚೇರಿ, ಡಿವೈಎಸ್ಪಿ ಕಚೇರಿ, ಪುರಸಭೆ, ತಾ.ಪಂ. ಕಚೇರಿಗಳಿಗೆ ತೆರಳಿ ಅಧಿಕಾರಿಗಳಿಂದ ದಾಖಲೆ ಪುಸ್ತಕಕ್ಕೆ ಸಹಿ ಪಡೆದು, ಫೋಟೋ ಕ್ಲಿಕ್ಕಿಸಿಕೊಂಡು, ಗಿನ್ನೀಸ್ ದಾಖಲೆ ಮತ್ತು ಪಟ್ಟಣಕ್ಕೆ ಭೇಟಿ ನೀಡಿದ ಸಾಕ್ಷಿಗಾಗಿ ಸಂಗ್ರಹಿಸಿದರು. ಪಟ್ಟಣದ ಒಕ್ಕರಣೆಬಾವಿ ಬೀದಿಯ ಎಚ್.ಎಸ್.ಸುನೀಲ್, ಗುಂಡಣ್ಣ, ನರಸಿಂಹ, ಚೇತನ್, ಅಶ್ವತ್ಥ್, ಮಹೇಶ, ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.