ವಿವಿಧ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನಕ್ಕೆ ಅನುದಾನ

KannadaprabhaNewsNetwork |  
Published : Feb 21, 2026, 02:15 AM IST
ಕವಿವಿ ಕುಲಪತಿ | Kannada Prabha

ಸಾರಾಂಶ

ನೇಕಾರ, ದುರ್ಗಮುರ್ಗ, ಬೈರಾಗಿ ಮತ್ತು ದರವೇಶ ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳ ಕುಲಶಾಸ್ತ್ರೀಯ ಸಂಶೋಧನಾ ಅಧ್ಯಯನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಅನುದಾನ ನೀಡಲಾಗಿದೆ ಎಂದು ಕವಿವಿ ಕುಲಸಚಿವರು ಹೇಳಿದ್ದಾರೆ.

ಧಾರವಾಡ:

ರಾಜ್ಯದ ವಿವಿಧ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ ಮಾಡಲು ಕರ್ನಾಟಕ ವಿವಿಯ ಮಾನವಶಾಸ್ತ್ರ ಅಧ್ಯಯನ ವಿಭಾಗಕ್ಕೆ ರಾಜ್ಯ ಸರ್ಕಾರ ₹ 99.77 ಲಕ್ಷ ಅನುದಾನ ಒದಗಿಸಿದೆ ಎಂದು ಕವಿವಿ ಕುಲಪತಿ ಡಾ. ಎ.ಎಂ. ಖಾನ್ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಕಾರ, ದುರ್ಗಮುರ್ಗ, ಬೈರಾಗಿ ಮತ್ತು ದರವೇಶ ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳ ಕುಲಶಾಸ್ತ್ರೀಯ ಸಂಶೋಧನಾ ಅಧ್ಯಯನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಅನುದಾನ ನೀಡಲಾಗಿದೆ. ವರ್ಷದೊಳಗಾಗಿ ಅಧ್ಯಯನ ಪೂರ್ಣಗೊಳಿಸಿ ವರದಿ ನೀಡುವಂತೆ ಸರ್ಕಾರ ವಿವಿಗೆ ನಿರ್ದೇಶನ ನೀಡಿದೆ ಎಂದರು.

ಮಾನವಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರು, ಕುಲಶಾಸ್ತ್ರೀಯ ಸಂಶೋಧನಾ ನಿರ್ದೇಶಕ ಪ್ರೊ. ಟಿ.ಟಿ. ಬಸವನಗೌಡ ಅವರಿಗೆ 2026ನೇ ಸಾಲಿಗೆ ನೇಕಾರ ಮತ್ತು ದುರ್ಗಮುರ್ಗ ಅಲೆಮಾರಿ ಅರೆ ಅಲೆಮಾರಿ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನದ ಜವಾಬ್ದಾರಿ ವಹಿಸಲಾಗಿದೆ. ಸರ್ಕಾರ ಇದಕ್ಕೆ ₹ 75. 68 ಲಕ್ಷ ಅನುದಾನ ಒದಗಿಸಿದೆ. ಸಹಾಯಕ ಪ್ರಾಧ್ಯಾಪಕ ಪ್ರೊ. ಎಸ್.ಬಿ. ಸುಗಂದಿ ಅವರಿಗೆ ದರವೇಶ, ಭೈರಾಗಿ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನಕ್ಕೆ ₹ 24. 09 ಲಕ್ಷ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಯುಕೆ ಜತೆಗೆ ಒಪ್ಪಂದ:

ಇಂಗ್ಲೆಂಡ್‌ನ ಕಾರ್ಡಿಫ್ ಮೆಟ್ರೋಪಾಲಿಟನ್ ವಿವಿ ಮತ್ತು ಕವಿವಿ ಮಧ್ಯೆ ಕಾರ್ಯತಂತ್ರದ ಮತ್ತು ಸುಸ್ಥಿರ ಅಂತಾರಾಷ್ಟ್ರೀಯ ಸಂಶೋಧನಾ ಪಾಲುದಾರಿಕೆ ಸ್ಥಾಪಿಸುವ ಗುರಿ ಹೊಂದಲಾಗಿದೆ. ಹೀಗಾಗಿ ತ್ವರಿತ ಜಾಗತಿಕ ಡಿಜಿಟಲ್ ರೂಪಾಂತರ ಮತ್ತು ಆರನೇ ತಲೆಮಾರಿನ (6ಜಿ) ಸಂವಹನ ಜಾಲಗಳ ಹೊರಹೊಮ್ಮುವಿಕೆ ಕುರಿತು ಸಂಶೋಧನೆ ನಡೆಸಲು ಅನುಮೋದನೆ ದೊರಕಿದೆ. ಈ ಬಗ್ಗೆ ಒಪ್ಪಂದ ಕೂಡ ಆಗಲಿದೆ ಎಂದ ಅವರು, ಕರ್ನಾಟಕ ಕಲಾ, ವಿಜ್ಞಾನ ಕಾಲೇಜುಗಳ ಐವರು ಪದವಿ ವಿದ್ಯಾರ್ಥಿಗಳನ್ನು ಇಂಗ್ಲೆಂಡಿನಲ್ಲಿ ನಡೆಯುವ 15 ದಿನಗಳ ಸ್ಕೌಟ್ ಅಂತಾರಾಷ್ಟ್ರೀಯ ನಾಯಕತ್ವ ತರಬೇತಿಗೆ ಆಯ್ಕೆ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ, ಕವಿವಿ ಹಣಕಾಸು ಅಧಿಕಾರಿ ಪ್ರದೀಪಕುಮಾರ, ಮಾನವಶಾಸ್ತ್ರ ಅಧ್ಯಯನ ವಿಭಾಗದ ಪ್ರೊ. ಟಿ.ಟಿ. ಬಸವನಗೌಡ, ಡಾ. ಎಸ್.ಬಿ. ಸುಗಂಧಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಸಂಜಯಕುಮಾರ ಮಾಲಗತ್ತಿ, ಡಾ. ಜೆ.ಎಂ. ಚಂದುನವರ, ಡಾ. ಪ್ರಭಾಕರ ಕಾಂಬಳೆ ಇದ್ದರು.

ಕುಲಸಚಿವರು ಹಾಗೂ ತಮ್ಮ ಮಧ್ಯೆ ಕೆಲವು ವಿಷಯಗಳ ಕುರಿತಾಗಿ ಭಿನ್ನಾಭಿಪ್ರಾಯವಿತ್ತು. ಈ ಬಗ್ಗೆ ಸಭೆ ನಡೆಸಿ ಸರಿಪಡಿಸಲಾಗಿದೆ. ವಿವಿ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ. ಅವರು ರಜೆ ಇದ್ದಿದ್ದರಿಂದ ಸುದ್ದಿಗೋಷ್ಟಿಗೆ ಹಾಜರಾಗಿಲ್ಲ. ಒಟ್ಟಾರೆ ವಿವಿ ಅಭಿವೃದ್ಧಿಯೇ ನಮ್ಮ ಗುರಿ.

ಪ್ರೊ. ಎ.ಎಂ. ಖಾನ್‌, ಕವಿವಿ ಕುಲಪತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನದಾಫ್‌-ಪಿಂಜಾರ ಸಮುದಾಯ ಒಪ್ಪಿಕೊಳ್ಳದ ಮುಸ್ಲಿಂ ಸಮುದಾಯ
ಜೈಲಲ್ಲಿ ಜಿಹಾದಿ: ಶಂಕಿತನ ಸುಳಿವಿಗೆ ₹5 ಲಕ್ಷ