ಮಳವಳ್ಳಿ ತಾಲೂಕಿನ ಎಲ್ಲಾ ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ಅನುದಾನ: ಪಿ.ಎಂ.ನರೇಂದ್ರಸ್ವಾಮಿ

KannadaprabhaNewsNetwork | Published : Jun 22, 2025 11:47 PM

ಮಳವಳ್ಳಿ ತಾಲೂಕಿನಾದ್ಯಂತ ಇಂದು ಸುಮಾರು 30 ಕೋಟಿಗೂ ಹೆಚ್ಚು ಅನುದಾನದಲ್ಲಿ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗ್ರಾಮದೊಳಗಿನ ರಸ್ತೆ ಸೇರಿದಂತೆ ಜನರಲ್ ಬೀದಿಗಳಿಗೆ ವಿಶೇಷ ಅನುದಾನ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಗ್ರಾಪಂನಿಂದ ಉದ್ಯೋಗ ಖಾತ್ರಿಯೋಜನೆಯಡಿ ಚರಂಡಿ ನಿರ್ಮಿಸಿಕೊಂಡರೇ ತಾಲೂಕಿನ ಎಲ್ಲಾ ಗ್ರಾಮಗಳ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಅನುದಾನ ನೀಡುವುದಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಶಾಂತಿ ಕಾಲೇಜಿನ ಮುಂಭಾಗ 15 ಕೋಟಿ ರು. ವೆಚ್ಚದಲ್ಲಿ ಕೊರಟಗೆರೆ-ಬಾವಲಿ ರಸ್ತೆಯ ರಾಜ್ಯ ಹೆದ್ದಾರಿ 33ರ ಮಳವಳ್ಳಿ ಪಟ್ಟಣದಿಂದ ಕಿರುಗಾವಲು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿ, ಗ್ರಾಪಂನಲ್ಲಿ ನರೇಗಾ ಯೋಜನೆಯನ್ನು ಬಳಸಿಕೊಂಡು ಚರಂಡಿ ನಿರ್ಮಿಸಿಕೊಳ್ಳುವ ಅವಕಾಶವಿದೆ ಎಂದರು.

ಮಳವಳ್ಳಿ ಮೈಸೂರು ರಸ್ತೆಯ ಕನ್ನಹಳ್ಳಿ (ಉಪ್ಪನಹಳ್ಳಿ) ಸಮೀಪ ಪ್ರಯಾಣಿಕರಿಗೆ ತೀವ್ರ ಅನಾನುಕೂಲವಾಗಿದ್ದ ಸೇತುವೆ ನಿರ್ಮಾಣಕ್ಕೆ ಈಗಾಗಲೇ 3 ಕೋಟಿ ರು. ಅನುದಾನ ಬಿಡುಗಡೆಗೊಂಡಿದೆ. ತಕ್ಷಣವೇ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದರು.

ತಾಲೂಕಿನಾದ್ಯಂತ ಇಂದು ಸುಮಾರು 30 ಕೋಟಿಗೂ ಹೆಚ್ಚು ಅನುದಾನದಲ್ಲಿ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗ್ರಾಮದೊಳಗಿನ ರಸ್ತೆ ಸೇರಿದಂತೆ ಜನರಲ್ ಬೀದಿಗಳಿಗೆ ವಿಶೇಷ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ತಾಲೂಕಿನ ಪಂಡಿತಹಳ್ಳಿಯಲ್ಲಿ 2.30 ಕೋಟಿ ರು. ವೆಚ್ಚದ ಶಿಂಷಾಪುರ ರಸ್ತೆ, ಚೊಟ್ಟನಹಳ್ಳಿಯಲ್ಲಿ 1 ಕೋಟಿ ರು. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 209ರಿಂದ ಮಂಚನಹಳ್ಳಿವರೆಗೆ ರಸ್ತೆ, ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ 1 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 209ನಿಂದ ದಬ್ಬಳಿಗೆ ನಿಡಘಟ್ಟ, ಗಾಜನೂರು ಮಾರ್ಗ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ ನೆರೆವೇರಿಸಲಾಯಿತು.

ಈ ವೇಳೆ ಮನ್ಮುಲ್ ನಿರ್ದೇಶಕರಾದ ಕೃಷ್ಣೇಗೌಡ, ಆರ್.ಎನ್.ವಿಶ್ವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಮುಖಂಡರಾದ ದೇವರಾಜು, ಅಂಬರೀಷ್, ಪುಟ್ಟಸ್ವಾಮಿ, ಬಸವರಾಜು, ಮಲ್ಲಣ್ಣ, ವೆಂಕಟೇಶ್, ಪ್ರಕಾಶ್, ಬಸವರಾಜು, ಆನಂದ್, ನಂಜುಂಡಸ್ವಾಮಿ, ಶಿವಮಾದೇಗೌಡ, ರವಿ, ನಾಗೇಶ್, ಚೌಡಪ್ಪ, ಚೊಟ್ಟನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರಾಚೇಗೌಡ, ರವೀಂದ್ರ, ಸುರೇಶ್, ಮಾದೇಶ್, ನಾಗರಾಜು, ಸಿದ್ದರಾಜು ಸೇರಿದಂತೆ ಇತರರು ಇದ್ದರು.