ಕನ್ನಡಪ್ರಭ ವಾರ್ತೆ ನಂಜನಗೂಡು
ಹುಲ್ಲಹಳ್ಳಿ ಗ್ರಾಮದ ನಿವೃತ್ತ ಪಿಡಿಒ ವೆಂಕಟರಾಮು ಅವರ ಪುತ್ರ ನವೀನ್ ಕಳೆದ 20 ವರ್ಷಗಳಿಂದ ಬಿಎಸ್.ಎಫ್. ಕರ್ತವ್ಯ ನಿರ್ವಹಿಸುತ್ತಿದ್ದರು. ತ್ರಿಪುರಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಶನಿವಾರ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಪಾರ್ಥಿವ ಶರೀರವನ್ನು ಭಾನುವಾರ ಸಂಜೆ 7 ರಲ್ಲಿ ಬೆಂಗಳೂರಿಗೆ ತರಲಾಯಿತು. ರಾತ್ರಿ 11ಕ್ಕೆ ಸ್ವಗ್ರಾಮ ಹುಲ್ಲಹಳ್ಳಿಗೆ ಕೊಂಡೊಯ್ಯಲಾಯಿತು. ಅಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಪುಷ್ಪಮಾಲಿಕೆ ಸಲ್ಲಿಸಿ ಗೌರವ ಸಲ್ಲಿಸಿದ ನಂತರ ವಿವಿಧ ಸಂಘ ಸಂಸ್ಥೆಗಳು ಗೌರವ ಸಲ್ಲಿಸಿದರು. ಬೆಳಗಿನ ಜಾವ 2 ಗಂಟೆ ನಂಜನಗೂಡಿನ ಚೆನ್ನಕೇಶವ ಲೇಔಟ್ನ ಮನೆಗೆ ತರಲಾಯಿತು.
ಬೆಳಗ್ಗೆ 8 ಗಂಟೆ ವೇಳೆಯಲ್ಲಿ ತಾಲೂಕು ಆಡಳಿತ ಮತ್ತು ಬಿಎಸ್.ಎಫ್. ಯೋಧರು ಮತ್ತು ಪೊಲೀಸ್ ತುಕಡಿಗಳು ಅವರ ಮನೆಯಲ್ಲಿ 3 ಸುತ್ತು ಗುಂಡು ಹಾರಿಸಿ ರಾಷ್ಟ್ರಧ್ವಜ ಹೊದಿಸಿ ಪುಷ್ಪ ಮಾಲಿಕ ಸಲ್ಲಿಸಿ ಗೌರವ ಸಲ್ಲಿಸಿದರು. ನಂತರ ಪಟ್ಟಣದ ಪರಶುರಾಮ ದೇವಾಲಯದ ಬಳಿಯಿರುವ ಸ್ಮಶಾನದಲ್ಲಿ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ಪಿಎಸೈ ಪ್ರಕಾಶ್ ಮದ್ಲೂರು, ಬಿಎಸ್.ಎಫ್. ಅಧಿಕಾರಿ ಮುರ್ ಮುರಾಸಾಬ್, ರೋಹಿತ್, ಸರ್ವೇಶ್ ಅವರು ವೀರ ಯೋಧ ನವೀನ್ ಅವರ ಮೃತದೇಹದ ಮೇಲೆ ಪುಷ್ಪ ಮಾಲಿಕೆ ಸಲ್ಲಿಸಿ 5 ಸುತ್ತಿನ ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ವಂದನೆ ಸಲ್ಲಿಸಿದದರು. ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಮೃತದೇಹಕ್ಕೆ ಪುಷ್ಪಮಾಲಿಕೆ ಅರ್ಪಿಸಿ ಗೌರವ ಸಲ್ಲಿಸಿದ ಬಳಿಕ ಮೃತ ದೇಹದ ಮೇಲೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಮೃತ ಯೋಧ ನವೀನ್ ಅವರ ತಂದೆ ವೆಂಕಟರಾಮು ಅವರಿಗೆ ಹಸ್ತಾಂತರಿಸಿದರು. ನಂತರ 2 ನಿಮಿಷ ಮೌನಾಚರಣೆ ನಡೆಸಿ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಅಂತ್ಯಕ್ರಿಯೆ ನೆರವೇರಿತು.ನಂಜನಗೂಡಿನ ವಿವಿಧ ಸಂಘ ಸಂಸ್ಥೆಗಳು, ಸಂಬಂಧಿಕರು, ಸ್ನೇಹಿತರು ಗೌರವ ಸಲ್ಲಿಸಿ ಕಣ್ಣೀರಿನ ಶೋಕ ಸಾಗರದ ಮೂಲಕ ಮೃತಯೋಧನಿಗೆ ಅಂತಿಮ ನಮನ ಸಲ್ಲಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.