ಮಹಾತ್ಮರಿಗೆ ಸಾವು ಇಲ್ಲ, ಸಿದ್ಧಿಯಿಂದ ಅಮರರಾಗಿರುತ್ತಾರೆ: ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು

KannadaprabhaNewsNetwork |  
Published : Mar 26, 2025, 01:32 AM IST
vcxv | Kannada Prabha

ಸಾರಾಂಶ

ಹುಬ್ಬಳ್ಳಿ: ಬದುಕಿನಲ್ಲಿ ಅಪಾರ ಸಾಧನೆ ಮಾಡಿದ ಯಾವುದೇ ಮಹಾತ್ಮರು, ಸತ್ಪುರುಷರು, ಶರಣರಿಗೆ ಸಾವು ಎಂಬುವುದು ಇರುವುದಿಲ್ಲ, ಸಿದ್ಧಿಯಿಂದ ಅವರೆಲ್ಲ ಅಮರರಾಗಿರುತ್ತಾರೆ. ಲಿಂಗೈಕ್ಯ ಎನ್ನುವುದು ತಪ್ಪು ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಮಹಾಸ್ವಾಮಿಗಳು ಪ್ರತಿಪಾದಿಸಿದರು.

ಹುಬ್ಬಳ್ಳಿ: ಬದುಕಿನಲ್ಲಿ ಅಪಾರ ಸಾಧನೆ ಮಾಡಿದ ಯಾವುದೇ ಮಹಾತ್ಮರು, ಸತ್ಪುರುಷರು, ಶರಣರಿಗೆ ಸಾವು ಎಂಬುವುದು ಇರುವುದಿಲ್ಲ, ಸಿದ್ಧಿಯಿಂದ ಅವರೆಲ್ಲ ಅಮರರಾಗಿರುತ್ತಾರೆ. ಲಿಂಗೈಕ್ಯ ಎನ್ನುವುದು ತಪ್ಪು ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಮಹಾಸ್ವಾಮಿಗಳು ಪ್ರತಿಪಾದಿಸಿದರು.

ಮಂಗಳವಾರ ಉಣಕಲ್ ಸಿದ್ದಪ್ಪಜ್ಜನ ಜಾತ್ರೆಯ 10ನೇ ದಿನದ ಪ್ರವಚನ ನೀಡಿದ ಅವರು, ಎಲ್ಲ ಧರ್ಮಗಳಲ್ಲೂ ಒಂದೊಂದು ರೀತಿಯ ಮಂತ್ರ (ಶಬ್ದ)ಗಳು ಇವೆ. ಅವುಗಳ ಮೂಲಕ ಅಂತರಂಗದ ಸಾಧನೆ ಮಾಡಿದರು ತಮ್ಮ ದೇಹ ಬಿಟ್ಟಿರುತ್ತಾರೆ ಅಷ್ಟೇ, ಅವರ ಆತ್ಮ ಪ್ರಾಣವಾಯುವಿನಲ್ಲಿ ಬೆರೆತಿರುತ್ತದೆ. ನರರೂಪಿ ಹರನಂತೆ ಬದುಕಿರುತ್ತಾರೆ ಎಂದರು.

ಬಸವಾದಿ ಶರಣರಿಗೆ ವಚನಗಳೇ ಮಂತ್ರವಾಗಿದ್ದವು. ಇಷ್ಟಲಿಂಗದ ಮೂಲಕ ಮಂತ್ರಸಿದ್ಧಿ ಗಳಿಸಿದ್ದ ಬಸವಣ್ಣ ಅವರ ಮಾತುಗಳೇ ಮಂತ್ರವಾದವು. ಇವರನ್ನು ಅರಸಿ ಬೇರೆ ಬೇರೆ ನಾಡಿನ ಜನ ಕಲ್ಯಾಣಕ್ಕೆ ಬಂದು ಶರಣರಾದರು. ಇಷ್ಟಲಿಂಗದಲ್ಲೇ ಜಗತ್ತನ್ನು ನೋಡುತ್ತಿದ್ದ ಬಸವಣ್ಣನಿಗೆ ಆ ಶರಣರ ಆಗಮನ ದೂರದಿಂದಲೇ ದೃಷ್ಟಿಗೆ ಗೋಚರವಾಗುತ್ತಿತ್ತು. ಅವರ ಬರುವಿಕೆಯ ಬಗ್ಗೆ ಮೊದಲೇ ಹೇಳುತ್ತಿದ್ದರು ಎಂದು ಬಸವಣ್ಣನ ಮಂತ್ರಸಿದ್ಧಿಯ ಬಗ್ಗೆ ಶ್ರೀಗಳು ಮನವರಿಕೆ ಮಾಡಿದರು.

ಷಣ್ಮುಖ ಶಿವಯೋಗಿಗಳ "ಮಂತ್ರದೊಳು ಶಿವನಿದ್ದಾನೆ " ವಚನ ವಿವರಿಸುತ್ತ ಅಲ್ಲಮಪ್ರಭು, ಸೊನ್ನಲಿಗೆ ಸಿದ್ಧರಾಮ, ಚೆನ್ನಬಸವಣ್ಣ, ಅಕ್ಕ ಮಹಾದೇವಿ ಅವರ ಮಂತ್ರಸಿದ್ಧಿಯನ್ನು ಮನೋಜ್ಞವಾಗಿ ವಿಶ್ಷೇಷಿಸಿ, ಸ್ವಾನುಭವ ಇಂಥದೊಂದು ಸಿದ್ಧಿ ನೀಡುತ್ತದೆ ಎಂದರು.

ಪಿಂಡದಲ್ಲಿ ದೇವರಿದ್ದಾನೆ. ಆ ದೇವರನ್ನು ಮಂತ್ರಗಳ ಮೂಲಕ ನಮ್ಮೊಳಗಡೆಯೇ ನೋಡಬೇಕೆ ಹೊರತು, ಹೊರಗಲ್ಲ. ಹೀಗೆ ಒಳಗಡೆ ಸಿದ್ಧಿ ಸಾಧಿಸಿದ ಬಸವಣ್ಣ ಶಿವಬೆಳಕನ್ನು ತಂದು ಚೆಲ್ಲಿದ. ವೋಮಕಾಯನಾದ ಅಲ್ಲಮ ಗೋರಕ್ಷಕ ಮತ್ತು ಸಿದ್ಧರಾಮರ ಸಾಧನೆಗೆ ಬೆಳಕಾದ. ಇಂಥ ಸಾಧನೆಯ ಶಕ್ತಿ ಮಂತ್ರಕ್ಕಿದೆ. ಎಲ್ಲರೂ ಇಷ್ಟಲಿಂಗದಲ್ಲಿ ನಿಷ್ಟೆ ಹೊಂದಿ ಮಂತ್ರಸಾಧನೆ ಮಾಡುವ ಮೂಲಕ ಬದುಕು ಹಸನು ಮಾಡಿಕೊಳ್ಳುವಂತೆ ನೆರೆದಿದ್ದ ಜನಸ್ತೋಮಕ್ಕೆ ನಿಜಗುಣಾನಂದರು ಕರೆನೀಡಿದರು.

ಘರ್ಜಿಸುವ ವಿವೇಕ

ಶ್ರೀಗಳ ಪ್ರವಚಣವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಉಪ್ಪಿನಬೆಟಗೇರಿ ಮೂರುಸಾವಿರ ಮಠದ ವಿರುಪಾಕ್ಷೇಶ್ವರ ಮಹಾಸ್ವಾಮಿಗಳು, ಹಿಂದೆ ಸ್ವಾಮಿ ವಿವೇಕಾನಂದರ ಮಾತುಗಳನ್ನು ಜಗತ್ತೇ ತದೇಕಚಿತ್ತದಿಂದ ಆಲಿಸುತ್ತಿತ್ತು. ಅದೇ ಸಿಂಹಘರ್ಜನೆಯನ್ನು ಇಂದು ನಿಜಗುನಾನಂದ ಶ್ರೀಗಳ ಪ್ರವಚನದಲ್ಲಿ ಕಾಣುತ್ತಿದ್ದೇವೆ. ಅಜ್ಞಾನದಲ್ಲಿ ಮುಳುಗಿದವರನ್ನು ತಮ್ಮ ಸಿಂಹವಾಣಿಯ ಮೂಲಕ ಬಡಿದೆಬ್ಬಿಸುತ್ತಿದ್ದಾರೆ ಎಂದರು.

ಮಂತ್ರಸಿದ್ಧಿ ಮಾಡಿಕೊಂಡ ಮಹಾಪುರುಷರು ತಮ್ಮ ಕರುಣೆಯಿಂದ ಈ ಜಗತ್ತನ್ನು ಉದ್ಧಾರ ಮಾಡುತ್ತಿದ್ದಾರೆ. ಅವರ ನೋವು- ಸಂಕಷ್ಟಗಳನ್ನು ಬರೀ ನೋಟಮಾತ್ರದಿಂದ ಪರಿಹರಿಸುತ್ತಿದ್ದಾರೆ. ಮಂತ್ರಕ್ಕೆ ಅಂಥದೊಂದು ಶಕ್ತಿಯಿದೆ ಎನ್ನುತ್ತ ನೆಲದುರ್ಗದ ಸಾಧಕ ವೃದ್ಧೆ, ಮುಳಗುಂದದ ಬಾಲಲೀಲಾ ಮಹಾಂತಸ್ವಾಮಿಗಳು ಮತ್ತು ಬಿ.ಕೆ.ಹಳ್ಳಿಯ ಎಂ.ಎಂ.ತಳವಾರ ಗುರುಗಳ ಸಾಧನೆಯನ್ನು ವಿವರಿಸಿದರು.

ಕುಂದಗೋಳ ಶಾಶಕ ಎಂ.ಆರ್.ಪಾಟೀಲ್, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ವೇದಿಕೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಂಗೆ ಸಿಎಂ ಸ್ಥಾನ ನೀಡದಿದ್ದರೆ ರಾಜ್ಯಕ್ಕೆ ಅಪಮಾನ ಮಾಡಿದಂತೆ
ಮೀಸಲು ವರ್ಗೀಕರಣದ ವಿರುದ್ಧ ಇಂದು ಬೆಳಗಾವಿ ಚಲೋ