)
ಮಾಗಡಿ: ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಸರಕಾರ ಬದ್ದವಾಗಿದೆ ಎಂದು ಉಸ್ತವಾರಿ ಸಚಿವ ರಾಮಲಿಂಗರೆಡ್ಡಿ ಹೇಳಿದರು.
ಸಮಾಜದ ಅಂಕುಡೊಂಕನ್ನು ತಿದ್ದುವ ಪತ್ರಕರ್ತರಿಗೆ ಸೂಕ್ತ ಭವನ ಅವಶ್ಯಕ. ಶಾಸಕ ಬಾಲಕೃಷ್ಣ ಅವರು, ಅತ್ಯಂತ ಕಾಳಜಿಯಿಂದ ಪತ್ರಕರ್ತರಿಗೆ ಸೂಕ್ತ ನಿವೇಶನ ಕೊಡಿಸುವ ಮೂಲಕ ಉತ್ತಮ ಪತ್ರಿಕಾ ಭವನ ಹಾಗೂ ಕನ್ನಡ ಭವನ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ನಾನೂ ಸಹ ಜಿಲ್ಲಾ ವ್ಯಾಪ್ತಿಯ ಪತ್ರಕರ್ತರಿಗೆ ಉಚಿತ ಬಸ್ಪಾಸ್ ವ್ಯವಸ್ಥೆ ಕಲ್ಪಿಸಿದ್ದೇನೆ. ಆರೋಗ್ಯ ವಿಮೆ ಮಾಡಲು ಚಿಂತಿಸಲಾಗಿದೆ ಎಂದರು.
ಶಾಸಕ ಬಾಲಕೃಷ್ಣ ಮಾತನಾಡಿ, ಹಲವು ವರ್ಷಗಳಿಂದಲೂ ಭವನ ನಿರ್ಮಿಸಿಕೊಡುವಂತೆ ಪತ್ರಕರ್ತರು ಬೇಡಿಕೆ ಇಟ್ಟಿದ್ದರು. ಅವರ ಮನವಿಗೆ ಸ್ಪಂದಿಸಿದ್ದೇನೆ. ಅದರಲ್ಲೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಕೆ.ರಾಮು ಸೇರಿದಂತೆ ಹಲವಾರು ಪತ್ರಕರ್ತರು ಪ್ರತಿದಿನ ನನ್ನ ಬೆನ್ನು ಹತ್ತಿದ್ದರಿಂದ ಒಂದು ಒಳ್ಳೆಯ ಸ್ಥಳವನ್ನೇ ಗುರುತಿಸಿ ಕನ್ನಡ ಭವನ ಮತ್ತು ಪತ್ರಕರ್ತರ ಭವನ ನಿರ್ಮಾಣಕ್ಕೆ ಸಂಘಕ್ಕೆ ಮಂಜೂರಾತಿ ಕೊಡಿಸಿದ್ದೇನೆ. ಏಕೆಂದರೆ ಕನ್ನಡಮ್ಮನ ಗುಡಿ ಪಕ್ಕದಲ್ಲಿಯೇ ಪತ್ರಕರ್ತರ ಭವನವೂ ಇದ್ದರೆ ಕನ್ನಡಮ್ಮನ ಸೇವೆಗೆ ನಿರಂತರಾಗಿರುತ್ತದೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಎರಡುವರೆ ಕೋಟಿ ಅನುದಾನ ಮಂಜೂರಾತಿ ತಂದಿದ್ದು, ವರ್ಷದೊಳಗೆ ಕಟ್ಟಡ ನಿರ್ಮಿಸಿಕೊಡುವ ಭರವಸೆ ನೀಡಿದರು.ಮಾಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಕೆ.ರಾಮು ಮಾತನಾಡಿ, ಸಂವಿಧಾನದ ನಾಲ್ಕೇ ಅಂಗ ಎನ್ನುವ ಪತ್ರಕರ್ತರ ಸಂಘಕ್ಕೆ ಇಲ್ಲಿನವರೆವಿಗೂ ಸ್ಥಳವಿರಲಿಲ್ಲ, ಹಲವು ವರ್ಷಗಳಿಂದಲೂ ನಮ್ಮ ಬೇಡಿಕೆಯಿತ್ತು. ಇದನ್ನು ಶಾಸಕ ಬಾಲಕೃಷ್ಣ, ತಮ್ಮಾಜಿ ಎಚ್.ಎನ್.ಅಶೋಕ್ ಕಾಳಜಿ ವಹಿಸಿ ನಿವೇಶನ ಕೊಡಿಸುವಲ್ಲಿ ಶ್ರಮಿಸಿದ್ದಾರೆ. ಜತೆಗೆ ಪುರಸಭೆ ಆಡಳಿತ ಮಂಡಲಿ, ಮುಖ್ಯಾಧಿಕಾರಿಗಳು, ಸಿಬ್ಬಂದಿಗಳಾದ ರವಿ, ಶಾಸಕರ ಆಪ್ತ ಸಹಾಯಕ ವೆಂಕಟೇಶ್ ಹಾಗೂ ಕೃಷಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಶಿವಶೆಂಕರ್ ಸಹಕಾರ ನೀಡಿದ್ದರು. ಇವರೆಲ್ಲರಿಗೂ ಪತ್ರಕರ್ತರ ಪರವಾಗಿ ಅಭಿನಂದನೆ ಸಲ್ಲಿಸಿದರು.
(ಫೋಟೋ ಕ್ಯಾಫ್ಷನ್)