ಕಾರವಾರ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚಿತ್ತಾಕುಲಾ ಶಾಖೆಯ ವತಿಯಿಂದ ಗುಂಪು ವೈಯಕ್ತಿಕ ಅಪಘಾತ ವಿಮೆ (ಜಿಪಿಎಐ) ಯೋಜನೆಯಡಿ, ಅಪಘಾತದಲ್ಲಿ ಮೃತಪಟ್ಟ ತಮ್ಮ ಬ್ಯಾಂಕಿನ ಗ್ರಾಹಕನ ಕುಟುಂಬಕ್ಕೆ ₹10 ಲಕ್ಷ ವಿಮಾ ಪರಿಹಾರದ ಚೆಕ್ ಅನ್ನು ಗುರುವಾರ ವಿತರಿಸಲಾಯಿತು.
ಕಾರವಾರ ಪ್ರಾದೇಶಿಕ ವ್ಯವಸ್ಥಾಪಕರಾದ ಮುರಳೀಧರ ಅವರು ಮೃತನ ತಂದೆಗೆ ಪರಿಹಾರದ ಚೆಕ್ ಪ್ರದಾನ ಮಾಡಿದರು. ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ವಿವೇಕ್ ವಿನಾಯಕ ಜನ್ನು, ಚಿತ್ತಾಕುಲಾ ಶಾಖಾ ವ್ಯವಸ್ಥಾಪಕ ಚಂದ್ರಕಾಂತ್ ಮಾನೆ, ಬ್ಯಾಂಕಿನ ಇತರ ಸಿಬ್ಬಂದಿ ಹಾಗೂ ಹಲವಾರು ಗ್ರಾಹಕರು ಉಪಸ್ಥಿತರಿದ್ದರು.
ಚೆಕ್ ವಿತರಿಸಿ ಮಾತನಾಡಿದ ಬ್ಯಾಂಕ್ ಅಧಿಕಾರಿಗಳು, ಎಸ್.ಬಿ.ಐ. ನೀಡುತ್ತಿರುವ ಈ ಗುಂಪು ವೈಯಕ್ತಿಕ ಅಪಘಾತ ವಿಮಾ ಯೋಜನೆಯ ಮಹತ್ವ ವಿವರಿಸಿದರು. ಗ್ರಾಹಕರು ಕೇವಲ ₹100ನಿಂದ ಹಿಡಿದು ₹3000ಗಳ ವರೆಗಿನ ಅಲ್ಪ ಮೊತ್ತದ ಪ್ರೀಮಿಯಂ ಪಾವತಿಸಿ, ಈ ಭದ್ರತಾ ಪಾಲಿಸಿಯನ್ನು ಸುಲಭವಾಗಿ ಪಡೆಯಬಹುದಾಗಿದೆ. ಗ್ರಾಹಕರು ಪಾವತಿಸುವ ಪಾಲಿಸಿ ಮೊತ್ತದ ಆಧಾರದ ಮೇಲೆ, ಒಂದು ವೇಳೆ ಅಪಘಾತದಲ್ಲಿ ಮರಣ ಸಂಭವಿಸಿದರೆ ಅವರ ಕುಟುಂಬಕ್ಕೆ ಕನಿಷ್ಠ ₹2 ಲಕ್ಷದಿಂದ ಗರಿಷ್ಠ ₹60 ಲಕ್ಷ ವರೆಗೆ ಅಪಘಾತ ಮರಣ ವಿಮಾ ರಕ್ಷಣೆ ದೊರೆಯಲಿದೆ ಎಂದು ವಿವರಿಸಿದ ಅಧಿಕಾರಿಗಳು, ಪ್ರತಿಯೊಬ್ಬರೂ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.