ಶಿರಸಿ: ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ಗೌರಿ-ಗಣೇಶ ಹಬ್ಬವನ್ನು ತಾಲೂಕಿನಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದಾರೆ. ಜಿಟಿಜಿಟಿ ಮಳೆಯಲ್ಲಿ ಬೆಲೆ ಏರಿಕೆಯ ನಡುವೆಯೂ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿ ನಡೆದಿದೆ.
ಕಳೆದ ಬಾರಿಯ ಹಬ್ಬಕ್ಕೆ ಹೋಲಿಸಿದರೆ ಈ ಬಾರಿ ಹೂವು, ಹಣ್ಣುಗಳ ಬೆಲೆಗಳು ಗಗನಕ್ಕೇರಿವೆ. ಸೇವಂತಿಗೆ ಪ್ರತಿ ಕೆಜಿಗೆ ₹೪೫೦ನಿಂದ ₹೫೦೦, ಸೇವಂತಿಗೆ ಹೂವು ಮಾರಿಗೆ ₹100-150ವರೆಗೆ ಹಾಗೂ ಮೊಳಕ್ಕೆ ₹50ರಂತೆ ಮಾರಾಟವಾಗುತ್ತಿದೆ. ಚೆಂಡು ಹೂವಿನ ಮಾಲೆಗೆ ₹200 ದರವಿದೆ. ಜಾಜಿ ಮಲ್ಲಿಗೆ ಹೂವಿನ ಮಾರಿಗೆ ₹200ನಿಂದ ₹250 ವರೆಗೆ ಮಾರಾಟವಾಗುತ್ತಿದೆ.
ಪ್ರತಿ ಮಂಗಳವಾರ ಶಿರಸಿಯಲ್ಲಿ ವಾರದ ಸಂತೆ ನಡೆಯುತ್ತದೆ. ಹಬ್ಬದ ಸಂತೆಯಾದ್ದರಿಂದ ತರಕಾರಿ-ಹಣ್ಣುಗಳು ದುಬಾರಿ ಇವೆ. ಏಲಕ್ಕಿ ಬಾಳೆ ಕೆಜಿಗೆ ₹120ಗೆ ಮಾರಾಟವಾಗುತ್ತಿದೆ. ಸೇಬು ಪ್ರತಿ ಕೆಜಿಗೆ ₹200-240ವರೆಗೆ ದರ ಇದೆ. ದಾಳಿಂಬೆ ಕೆಜಿಗೆ ₹240, ಮೊಸಂಬಿಗೆ ₹90 ದರ ಇದೆ. ಹಬ್ಬ ಇರುವುದರಿಂದ ಗ್ರಾಹಕರು ಹೆಚ್ಚಿನ ಹಣ ಕೊಟ್ಟೇ ಖರೀದಿ ಮಾಡುತ್ತಿದ್ದಾರೆ.