ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಶಾಸಕರಾದ ಮೊದಲ ಅವಧಿಯಲ್ಲಿ 2013ರಲ್ಲಿ ಜನತಾ ದರ್ಶನ ಮಾಡುವ ಮೂಲಕ ಪ್ರತೀ ಗ್ರಾಮಕ್ಕೆ ತಾಲೂಕು ಆಡಳಿತವನ್ನು ಕರೆದೊಯ್ದು ಜನರ ಬಳಿ ಅಹವಾಲು ಕೇಳುವ ಕೆಲಸ ಮಾಡುತ್ತಿದ್ದರು. ಈ ಕಾರ್ಯಕ್ರಮ ತಾಲೂಕಿನಾದ್ಯಂತ ಜನಮನ್ನಣೆ ಗಳಿಸಿತ್ತು.
ಸಚಿವರಾದ ಬಳಿಕ ಜನರ ಅಹವಾಲು ಸ್ವೀಕರಿಸುವ ಕೆಲಸಕ್ಕೆ ಚಾಲನೆ ನೀಡಿರುವುದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ವಿವಿಧ ಇಲಾಖೆ ಅಧಿಕಾರಿಗಳ ಮುಂದೆ ಬಂದು ಬೇಡಿಕೆಗಳ ಸಲ್ಲಿಸಿದರು.ಚಳ್ಳಕೆರೆ ನಗರದ ಹೊರವಲಯದಲ್ಲಿ ಇರುವ ಜಿಟಿಟಿಸಿ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ, ತಾಂತ್ರಿಕ ತರಬೇತಿ, ಹಾಗೂ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಸಚಿವರಿಗೆ ಅಹವಾಲು ಸಲ್ಲಿಸಿದರು.
ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸದೇ ಹಾಗೂ ಸಮವಸ್ತ್ರ, ಪುಸ್ತಕ, ಐ.ಡಿ.ಕಾರ್ಡ ಸೇರಿದಂತೆ ಇತರೆ ಸಾಮಗ್ರಿಗಳಿಗೆ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದಾರೆ. 500ವಿದ್ಯಾರ್ಥಿಗಳಿಗೆ ಸಮರ್ಪಕ ಶೌಚಾಲಯ ಇಲ್ಲ. ಇದನ್ನೆಲ್ಲಾ ಪ್ರಶ್ನಿಸಿದರೆ ಗೂಂಡಾಗಿರಿ ಮಾಡುತ್ತೀರಾ? ನಿಮ್ಮನ್ನು ಇಲ್ಲಿಂದ ಹೊರ ಹಾಕುತ್ತೇವೆ ಎಂದು ಬೆದರಿಸುವ ಮಟ್ಟಕ್ಕೆ ಬಂದಿದ್ದಾರೆ. ಪ್ರತಿಯೊಂದು ಪರಿಕರಗಳನ್ನು ನೀಡುವಾಗ ಒಂದಕ್ಕೆ ಎರಡು ಪಟ್ಟು ಹೆಚ್ಚಿನ ಹಣ ವಸೂಲಿ ಮಾಡುತ್ತಾರೆ ಎಂದು ದೂರುಗಳ ಸುರಿಮಳೆಗೖದರು.
ಬೆಳೆ ಸಮೀಕ್ಷೆದಾರರು ಬೆಳೆ ವೀಕ್ಷಣೆಗೆ ಹೋದಾಗ ವಿಷಜಂತುಗಳಿಂದ ರಕ್ಷಣೆ ಪಡೆಯಲು ಪರಿಕರಗಳ ವಿತರಣೆ, ಗುರುತಿನ ಚೀಟಿ, ಅಪಘಾತ ವಿಮೆ, ಜೀವಕ್ಕೆ ಹಾನಿಯಾದರೆ ವಿಮೆಯಂತಹ ಸೌಲಭ್ಯ ಕಲ್ಪಿಸುವುದು ಸೇರಿದಂತೆ ದಿನಭತ್ಯೆಯನ್ನೂ ಕೊಡಿಸಬೇಕೆಂದು ಸಮೀಕ್ಷೆದಾರರ ಸಂಘದ ವತಿಯಿಂದ ಸಚಿವರ ಗಮನ ಸೆಳೆದರು.
ಬಾಕ್ಸ್...
ಮಗನ ನಾಮಕರಣಕ್ಕೆ ಸಹಾಯ ಮಾಡಿ ಎಂದು ಸಚಿವರಿಗೆ ಮನವಿ ಮಾಡಿದ್ದು ಸೇರಿದಂತೆ ಈರುಳ್ಳಿ ಬೆಳೆ ನಷ್ಟವಾಗಿದೆ ಎಂದು ಹೇಳಿಕೊಂಡು ಬಂದ ಅನ್ನದಾತನ ಅಹವಾಲು ಕೇಳಿಸಿಕೊಂಡ ಸಚಿವರು ಅರ್ಜಿಗಳ ಪರಿಶೀಲನೆಗೆ ಶಾಸಕರ ಭವನದ ಸಿಬ್ಬಂದಿಗೆ ಸೂಚಿಸಿದರು.
ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಶನಿವಾರ ಸಚಿವ ಟಿ.ರಘುಮೂರ್ತಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.