ಕನ್ನಡಪ್ರಭ ವಾರ್ತೆ ಸುರಪುರ
ಕಾಂಗ್ರೆಸ್ ಪಕ್ಷವು ಚುನಾವಣೆ ಸಂದರ್ಭದಲ್ಲಿ ನೀಡಿದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು, ಲೋಕಸಭಾ ಮತ್ತು ಸುರಪುರ ಉಪ ಚುನಾವಣಾ ಶ್ರೀರಕ್ಷೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.ತಾಲೂಕಿನ ಕೆಂಭಾವಿ ಸಮೀಪದ ಯಡಿಯಾಪೂರ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಘೋಷಿಸಿದ ಗ್ಯಾರಂಟಿಗಳಿಂದ ರಾಜ್ಯದ ರೈತರಿಗೆ, ಮಹಿಳೆಯರಿಗೆ, ಯುವಕರಿಗೆ ಅನುಕೂಲವಾಗಿದೆ. ಇದು ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ವರವಾಗಲಿದೆ ಎಂದರು.
ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಕ್ಷೇತ್ರಕ್ಕೆ ಏನೂ ಕೊಡುಗೆ ನೀಡಿಲ್ಲ, ಭೀಮರಾಯನ ಗುಡಿಯ ರಿಂಗ್ ರಸ್ತೆ ನಿರ್ಮಾಣಕ್ಕೆ ಸಂಸದರ ಜೊತೆಗೂಡಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದರೂ ಈ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸಚಿವರು ಸೌಜನ್ಯಕ್ಕೂ ಮಾತನಾಡಿಸದೆ ಅಸಡ್ಡೆ ತೋರಿದ್ದಾರೆ. ಇದು ಈ ಭಾಗದ ಜನತೆಗೆ ಮಾಡಿದ ಘೋರ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಳಿಕ ಗ್ರಾಮದಲ್ಲಿ ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಜಿ. ಕುಮಾರನಾಯಕ ಹಾಗೂ ಸುರಪುರ ವಿಧಾನ ಸಭೆಯ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಪರ ಮತಯಾಚಿಸಿದರು. ನಂತರ ಮುದನೂರ ಬಿ. ಮತ್ತು ಮುದನೂರ ಕೆ. ಗ್ರಾಮಗಳಲ್ಲಿ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಚಿಂಚೋಳಿ, ಮುಖಂಡರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್, ಶಂಕ್ರಣ್ಣ ವಣಕ್ಯಾಳ, ವೈ.ಟಿ. ಪಾಟೀಲ್, ಶಾಂತಗೌಡ ಪೊಲೀಸ್ ಪಾಟೀಲ್, ಬಾಪುಗೌಡ ಪಾಟೀಲ್, ಬಸನಗೌಡ ಯಾಳಗಿ, ಡಾ. ಎಂ.ಎಸ್. ಕನಕರೆಡ್ಡಿ, ಗೊಲ್ಲಾಳೇಶ ಪಾಟೀಲ್, ರೆಡ್ಡೆಪ್ಪಗೌಡ ಪೊಲೀಸ್ ಪಾಟೀಲ್, ಡಾ. ಕಿರಣ ಜಕರೆಡ್ಡಿ ಸೇರಿದಂತೆ ಇತರರಿದ್ದರು.