ಕನ್ನಡಪ್ರಭ ವಾರ್ತೆ ತುಮಕೂರುಅಂದಿನ ಪತ್ರಿಕೋದ್ಯಮಕ್ಕೂ ಇಂದಿನ ಪತ್ರಿಕೋದ್ಯಮಕ್ಕೂ ಬಹಳ ವ್ಯತ್ಯಾಸವಿದೆ. ಹಿಂದೆ ಇರದಿದ್ದ ದಾವಂತ, ಅವಸರ ಇಂದು ಮಾಧ್ಯಮಗಳಲ್ಲಿದೆ. ಈಗಿನ ಮಾಧ್ಯಮಗಳಲ್ಲಿ ಸುಳ್ಳು ಮತ್ತು ವದಂತಿಗಳನ್ನು ಹರಡುವ ಮಾಧ್ಯಮಗಳೇ ಹೆಚ್ಚಾಗಿವೆ. ಅವಸರದ ಯುಗದ ಪತ್ರಿಕೋದ್ಯಮಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯ ಎಂದು ಉದಯವಾಣಿ ಪತ್ರಿಕೆಯ ಮುಖ್ಯ ಸಂಪಾದಕ ರವಿಶಂಕರ್ ಕೆ. ಭಟ್ ಅಭಿಪ್ರಾಯಪಟ್ಟರು.ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ರಾಜ್ಯಮಟ್ಟದ ಮಾಧ್ಯಮ ಹಬ್ಬ ಇಂಪ್ರೆಶನ್ 2026 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಾವು ಒಳ್ಳೆಯದಕ್ಕಿಂತ ಕೆಟ್ಟದನ್ನೇ ಸ್ವೀಕರಿಸುವ ಹಂತಕ್ಕೆ ತಲುಪಿದ್ದೇವೆ. ಯಾವುದು ಸತ್ಯ, ಯಾವುದು ಮಿಥ್ಯ ಎಂದು ತಿಳಿಯದ ವಾತಾವರಣವಿದೆ. ನಮ್ಮ ವಿವೇಚನೆಯನ್ನು ಬಳಸಿಕೊಂಡಾಗ ಮಾತ್ರ ನಿಜ ಯಾವುದು ಎಂದು ತಿಳಿಯುತ್ತದೆ. ಇಲ್ಲದಿದ್ದರೆ ನಕಲಿ, ದುರುದ್ದೇಶಪೂರಿತ ಬರವಣಿಗೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದರು.ನಮ್ಮಿಂದಲೇ ಕನ್ನಡಕ್ಕೆ ಅಪಾಯ ಎದುರಾಗುತ್ತಿದೆ. ಕನ್ನಡವನ್ನು ಒಂದು ವಿಷಯವಾಗಿಯೂ ಓದಲು ವಿದ್ಯಾರ್ಥಿಗಳು ಹಿಂದೆ ಬೀಳುತ್ತಿರುವುದು ಆತಂಕಕಾರಿ. ಬರವಣಿಗೆಯಲ್ಲಿ ತಪ್ಪುಗಳು ಹೆಚ್ಚಾಗುತ್ತಿವೆ. ನಾವು ಸರಿಯಾದ ರೂಪದಲ್ಲಿ ಕನ್ನಡ ಬಳಸದೆ ಹೋದರೆ ಭಾಷೆಗೆ ಕಂಟಕ ಕಾಯಂ. ಕನ್ನಡದ ಉಳಿವಿಗಾಗಿ ಇಂತಹ ಅನೇಕ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಚಾಂಪಿಯನ್ ಟ್ರೋಫಿ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಪತ್ರಕರ್ತೆ ಶೋಭಾ ಮಳವಳ್ಳಿ, ಪತ್ರಿಕೋದ್ಯಮದಲ್ಲಿ ಭರಪೂರ ಅವಕಾಶಗಳಿವೆ. ಆದರೆ ಅವುಗಳನ್ನು ಬಳಸಿಕೊಳ್ಳಲು ಉತ್ತಮ ಕೌಶಲ್ಯವುಳ್ಳವರ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ತಾವು ಏನಾಗಬೇಕು, ಯಾವ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂಬ ಸೃಷ್ಟತೆ ಹಾಗೂ ಪೂರ್ವ ಸಿದ್ಧತೆ ಇರಬೇಕು ನಿಮ್ಮ ಕಣ್ಣಮುಂದೆಯೇ ಸಾಕಷ್ಟು ವಿಷಯಗಳಿವೆ, ಅವುಗಳನ್ನು ಬಳಸಿಕೊಳ್ಳುವ ಕೌಶಲ್ಯ ನಿಮ್ಮ ಕೈಯಲ್ಲಿದೆ ಎಂದರು.ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಣಿ ಅವರು ಮಾತನಾಡಿದರು.