ಸರ್ಕಾರಿ ಕಚೇರಿ ಆವರಣದಲ್ಲಿ ಗುಂಡು, ತುಂಡು ಪಾರ್ಟಿ

KannadaprabhaNewsNetwork |  
Published : May 29, 2025, 01:41 AM IST
28 ಟಿವಿಕೆ 2 – ತುರುವೇಕೆರೆಯ ಲೋಕೋಪಯೋಗಿ ಇಲಾಖಾ ಆವರಣದಲ್ಲಿ ಶಾಮಿಯಾನ ಹಾಕಿ ಬಾಡೂಟದ ವ್ಯವಸ್ಥೆ ಮಾಡಿರುವುದು.  | Kannada Prabha

ಸಾರಾಂಶ

ಇಲ್ಲಿಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಿವೃತ್ತಿ ಇದೇ ತಿಂಗಳ 31 ಕ್ಕೆ ಇದೆ. ಆದರೆ ಅವರ ನಿವೃತ್ತಿಗೆ ಮೊದಲೇ ಅವರಿಂದ ಲಾಭ ಪಡೆದವರು ಇಲಾಖೆಯ ಆವರಣದಲ್ಲೇ ಶಾಮಿಯಾನ ಹಾಕಿ ಬಾಡೂಟದ ವ್ಯವಸ್ಥೆ ಮಾಡಿದ್ದ ಘಟನೆ ನಡೆದಿದ್ದು ವ್ಯಾಪಕ ಚರ್ಚೆಗೆ ಆಸ್ಪದ ನೀಡಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಇಲ್ಲಿಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಿವೃತ್ತಿ ಇದೇ ತಿಂಗಳ 31 ಕ್ಕೆ ಇದೆ. ಆದರೆ ಅವರ ನಿವೃತ್ತಿಗೆ ಮೊದಲೇ ಅವರಿಂದ ಲಾಭ ಪಡೆದವರು ಇಲಾಖೆಯ ಆವರಣದಲ್ಲೇ ಶಾಮಿಯಾನ ಹಾಕಿ ಬಾಡೂಟದ ವ್ಯವಸ್ಥೆ ಮಾಡಿದ್ದ ಘಟನೆ ನಡೆದಿದ್ದು ವ್ಯಾಪಕ ಚರ್ಚೆಗೆ ಆಸ್ಪದ ನೀಡಿದೆ. ಬುಧವಾರ ಮಧ್ಯಾಹ್ನದಿಂದ ಇಲಾಖೆಯ ಆವರಣದಲ್ಲಿ ಶಾಮಿಯಾನ ಹಾಕಿಸಿ ಅಲ್ಲಿ ನೂರಾರು ಮಂದಿಗೆ ಎಇಇ ಪ್ರಭಾಕರ್ ನಿವೃತ್ತಿಗೆ ಮೊದಲೇ ಅವರಿಂದ ಅನುಕೂಲ ಪಡೆದುಕೊಂಡ ಕೆಲವು ಗುತ್ತಿಗೆದಾರರು ವಿಶೇಷವಾದ ಬಾಡೂಟದ ವ್ಯವಸ್ಥೆ ಮಾಡಿದ್ದರು. ಇಲ್ಲಿ ಚಿಕನ್, ಮಟನ್ ಸೇರಿದಂತೆ ವಿವಿಧ ಮಾಂಸಾಹಾರಿ ತಿನಿಸುಗಳನ್ನು ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಇಇ, ತಿಪಟೂರು, ಗುಬ್ಬಿ, ಕುಣಿಗಲ್ ಸೇರಿದಂತೆ ಇನ್ನಿತರ ಕಡೆಯಿಂದ ಅಧಿಕಾರಿಗಳು ಮತ್ತು ಅಲ್ಲಿನ ಕೆಲವು ಸಿಬ್ಬಂದಿ ಬಾಡೂಟ ಸವಿಯಲು ಆಗಮಿಸಿದ್ದರು ಎಂದು ಹೇಳಲಾಗಿದೆ.

ಬಾಡೂಟದ ಸೇವೆ ಇಲಾಖಾ ಆವರಣದಲ್ಲಿ ಅಲ್ಲದೇ ಇಲಾಖೆಯ ಒಳಗೂ ನಡೆದಿದೆ. ಕಚೇರಿಯ ಆವರಣದಲ್ಲಿ ಹತ್ತಾರು ಕಾರುಗಳು, ಸರ್ಕಾರಿ ಜೀಪುಗಳು ಬೀಡುಬಿಟ್ಟಿದ್ದವು. ಈ ಕುರಿತಂತೆ ಅಲ್ಲಿನ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಾರ್ವಜನಿಕ ಸ್ಥಳವಾಗಿರುವ ಇಲ್ಲಿ ಅಲ್ಲಿನ ಅಧಿಕಾರಿಗಳು ತಮ್ಮ ಸ್ವಂತ ಸ್ಥಳವೆಂಬಂತೆ ಇಂತಹ ಕಾರ್ಯಕ್ರಮಕ್ಕೆ ಆಸ್ಪದ ನೀಡಿದ್ದಾದರೂ ಹೇಗೆ. ಇಂತಹ ಕಾರ್ಯಕ್ರಮಗಳನ್ನು ನಡೆಸಲು ಹಿರಿಯ ಅಧಿಕಾರಿಗಳು ಅನುಮತಿ ನೀಡಿದ್ದಾರೆಯೇ?. ಸಾರ್ವಜನಿಕರಿಗೂ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡುವರೇ? ಎಂದು ಅಮ್ಮಸಂದ್ರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸಿದ್ದಗಂಗಯ್ಯ ಪ್ರಶ್ನಿಸಿದ್ದಾರೆ. ನೂರಾರು ಮಂದಿ ಬಾಡೂಟದೊಂದಿಗೆ ಪಾನಕಗೋಷ್ಠಿಯನ್ನೂ ನಡೆಸಿದ್ದಾರೆ. ಬಾಡೂಟದ ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ಕೆಲವು ಮಂದಿ ಕಚೇರಿಯ ಆವರಣಕ್ಕೆ ಬಂದು ಫೋಟೋ ಮತ್ತು ವಿಡಿಯೋ ತೆಗೆಯುವ ವೇಳೆ ಬಾಡೂಟದ ವಸ್ತುಗಳನ್ನು ಬೇರೆಡೆ ಸಾಗಿಸಲು ಸಾಧ್ಯವಾಗಲಿಲ್ಲ. ಆದರೆ ಪಾನಕದ ವಸ್ತುಗಳನ್ನು ಕೂಡಲೇ ಬೇರೆಡೆಗೆ ಸಾಗಿಸಿದರು ಎಂದು ತಿಳಿದುಬಂದಿದೆ. ಲೋಕೋಪಯೋಗಿ ಇಲಾಖಾ ಇಎಎ ನಿವೃತ್ತಿಗೆ ಮೊದಲೇ ತಮ್ಮ ಕಚೇರಿಯಲ್ಲಿ ಬಾಡೂಟದ ವ್ಯವಸ್ಥೆ ಮಾಡಿದ್ದ ಬಗ್ಗೆ ಶಾಸಕ ಎಂ.ಟಿ.ಕೃಷ್ಣಪ್ಪನವರ ಕಿವಿಗೂ ವಿಷಯ ಮುಟ್ಟಿದೆ. ಕೆಂಡಾಮಂಡಲರಾದ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೆಂದು ತಿಳಿದುಬಂದಿದೆ. ಲೋಕೋಪಯೋಗಿ ಇಲಾಖಾ ಆವರಣದಲ್ಲೇ ಹುತ್ತವೊಂದು ಇದ್ದುದರಿಂದ ಅಲ್ಲೇ ನಾಗದೇವರ ಸಣ್ಣ ದೇವಾಲಯವನ್ನು ಕಟ್ಟಲಾಗಿದೆ. ಅಲ್ಲಿ ದಿನವೂ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಇಂತಹ ಪವಿತ್ರ ಸ್ಥಳದಲ್ಲಿ ಬಾಡೂಟ ನಡೆಸಿರುವುದು ಆಸ್ತಿಕರ ಮನಸ್ಸಿಗೆ ನೋವು ತರಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ