ಫುಟ್ಪಾತ್ ಮೇಲೆ ಬೀದಿ ಬದಿ ವ್ಯಾಪಾರಿಗಳು, ಫಾಸ್ಟ್ಫುಡ್ಗಳದ್ದೇ ಕಾರುಬಾರು । ಒತ್ತುವರಿ ತೆರವಿಗೆ ಕ್ರಮಕೈಗೊಳ್ಳದ ಪುರಸಭೆ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ‘ನಡೆಯುವ ಹಕ್ಕು ಮೂಲಭೂತ ಹಕ್ಕು’ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ನೀಡಿದೆ. ರಾಜ್ಯ ಸರ್ಕಾರವೂ ಕೋರ್ಟ್ ಆದೇಶ ಪಾಲಿಸುವಂತೆ ಕಟ್ಟುನಿಟ್ಟಿನ ಸೂಚನೆಯನ್ನೂ ಹೊರಡಿಸಿದೆ. ಆದರೆ ಇಲ್ಲಿನ ಪುರಸಭೆ ಮಾತ್ರ ಪುಟ್ಪಾತ್ ಒತ್ತುವರಿ ತೆರವಿಗೆ ಮೀನಮೇಷ ಎಣಿಸುತ್ತಿದೆ.ಪಟ್ಟಣದ ಪಾದಚಾರಿ ಮಾರ್ಗಗಳ ನಿರ್ಮಾಣ ಮತ್ತು ನಿರ್ವಹಣೆ ಬಗ್ಗೆ ಪುರಸಭೆ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಗಮನ ಹರಿಸುತ್ತಿಲ್ಲ ಎಂಬ ಆರೋಪ ಪಟ್ಟಣದಲ್ಲಿ ಕೇಳಿಬಂದಿದೆ.ಕರ್ನಾಟಕ ಸರ್ಕಾರದ ಪೌರಾಡಳಿತ ನಿರ್ದೇಶನಾಲಯ ಕಳೆದ ಜು.೪ರಂದು ಹೊರಡಿಸಿರುವ ಸುತ್ತೋಲೆ ಪ್ರಕಾರ ಸುಪ್ರೀಂಕೋರ್ಟ್ನ ಸಿವಿಲ್ ಅಪೀಲ್ No(S)-4665-4666/2025 ಪ್ರಕರಣದಲ್ಲಿ ‘ನಡೆಯುವ ಹಕ್ಕು’ ಸಂವಿಧಾನದ 19(1)(ಡಿ) ಮತ್ತು 21ನೇ ವಿಧಿಯ ಅಡಿ ಮೂಲಭೂತ ಹಕ್ಕು ಎಂದು ಘೋಷಿಸಿದೆ.ಈ ಹಕ್ಕಿನ ಜೊತೆಗೆ ಗುರುತಿಸಲಾದ, ನಿರ್ವಹಿಸಲಾದ ಪಾದಚಾರಿ ಮಾರ್ಗಗಳನ್ನು ಒದಗಿಸುವ ಕರ್ತವ್ಯವೂ ಅಧಿಕಾರಿಗಳ ಮೇಲಿದೆ ಎಂದು ನ್ಯಾಯಾಲಯವೂ ಕೂಡ ಸ್ಪಷ್ಟವಾಗಿ ಹೇಳಿದೆ. ಆದೇಶದಲ್ಲಿ ಪ್ರತಿ ರಸ್ತೆಯಲ್ಲೂ ಕನಿಷ್ಠ 1.2 ಮೀಟರ್ ಅಗಲದ ಪಾದಚಾರಿ ಮಾರ್ಗವನ್ನು ಗುರುತಿಸಬೇಕು. ಅತಿಕ್ರಮಣ ತೆರವುಗೊಳಿಸಬೇಕು ಎಂದಿದೆ.ಶಾಲೆ, ಆಸ್ಪತ್ರೆ, ಬಸ್ ನಿಲ್ದಾಣ ಸಂಪರ್ಕಿಸುವ ರಸ್ತೆಗಳಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ. 15 ದಿನದೊಳಗೆ ಕೈಗೊಂಡ ಕ್ರಮದ ವರದಿಯನ್ನು ಸಲ್ಲಿಸಬೇಕು ಎಂದೂ ತಿಳಿಸಲಾಗಿದೆ. ಆದರೆ ಪಾದಾಚಾರಿ ಮಾರ್ಗದ ಬಗ್ಗೆ ಪುರಸಭೆ ಮಾತ್ರ ಜಾಣ ಮೌನ ವಹಿಸಿದೆ.ಗುಂಡ್ಲುಪೇಟೆ ಸ್ಥಿತಿ ಏನು?ಆದರೆ, ಪಟ್ಟಣದ ಪ್ರಮುಖ ಮೈಸೂರು-ಊಟಿ ಹೆದ್ದಾರಿಯ ಇಕ್ಕೆಲಗಳಲ್ಲಿ ಪಾದಚಾರಿಗಳಿಗೆ ಮಾರ್ಗವೇ ಇಲ್ಲ. ಹೆದ್ದಾರಿ ಬದಿಯಲ್ಲ, ಹೆದ್ದಾರಿಯಲ್ಲಿಯೇ ವಾಹನಗಳು ನಿಲ್ಲುತ್ತಿವೆ. ಪಾದಾಚಾರಿ ಮಾರ್ಗದಲ್ಲಿ ತಳ್ಳುವಗಾಡಿ ನಿಲ್ಲುತ್ತವೆ.ರಸ್ತೆಗಳಲ್ಲಿ ಸರಿಯಾದ ಪಾದಚಾರಿ ಮಾರ್ಗಗಳೇ ಇಲ್ಲ. ಪಟ್ಟಣದ ಜನ ಸಂದಣಿ ಪ್ರದೇಶವಾದ ಹಳೇ ಬಸ್ ನಿಲ್ದಾಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯಲ್ಲಿ ಬಹುತೇಕ ಅಂಗಡಿ ಮುಂಗಟ್ಟಗಳು ಫುಟ್ಪಾತ್ ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ.ದುರಂತ ಎಂದರೆ ಪುರಸಭೆ ವಾಣಿಜ್ಯ ಮಳಿಗೆಯ ಮುಂದಯೇ ಪುಟ್ಪಾತ್ ಒತ್ತುವರಿ ಮಾಡಿಕೊಂಡಿದ್ದಾರೆ. ಇದು ಪುರಸಭೆಗೆ ಗೊತ್ತಿದ್ದು ಗೊತ್ತಿಲ್ಲದ ರೀತಿ ವರ್ತಿಸುತ್ತಿದೆ.ಮಡಹಳ್ಳಿ ರಸ್ತೆ ಇತ್ತೀಚೆಗೆ ಅಭಿವೃದ್ಧಿಗೊಂಡಿದೆ. ಈ ರಸ್ತೆಯಲ್ಲಿ ಒಂದು ಬದಿ ಫಾಸ್ಟ್ಪುಡ್ ಅಂಗಡಿಗಳಿವೆ. ಮತ್ತೊಂದು ಬದಿ ಖಾಸಗಿ ವಾಹನಗಳ ನಿಲ್ಲುತ್ತಿವೆ. ವಿದ್ಯಾರ್ಥಿಗಳು, ವೃದ್ಧರು ಮತ್ತು ಮಹಿಳೆಯರು ಈ ರಸ್ತೆಯಲ್ಲಿಯೇ ನಡೆಯುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.ಸ್ಥಳೀಯರು ಹೇಳುವ ಪ್ರಕಾರ ರಸ್ತೆ ಬದಿಯಲ್ಲಿ ನಡೆಯಲು ಜಾಗವೇ ಇಲ್ಲ. ವಾಹನಗಳ ಓಡಾಟದ ನಡುವೆ ಜೀವವನ್ನು ಕೈಯಲ್ಲಿ ಹಿಡಿದು ನಡೆಯುವಂತಾಗಿದೆ. ಪುರಸಭೆಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಪೊಲೀಸರು ಕೂಡ ಅತಿಕ್ರಮಣ ತೆರವಿಗೆ ಕ್ರಮ ಕೈಗೊಂಡಿಲ್ಲ.
ಕಾನೂನಿನ ಅಂಶ:ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಪಾದಚಾರಿ ಮಾರ್ಗದ ಹಕ್ಕು ಉಲ್ಲಂಘನೆಯಾದರೆ ನಾಗರಿಕರು ಸಂವಿಧಾನಾತ್ಮಕ ಪರಿಹಾರ ಮತ್ತು ಪರಿಹಾರ ಧನಕ್ಕೆ ಅರ್ಹರಾಗುತ್ತಾರೆ. ಅಲ್ಲದೆ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.ಸಾರ್ವಜನಿಕರ ಆಗ್ರಹ:ಪಟ್ಟಣದ ಪ್ರಮುಖ ರಸ್ತೆಗಳ ಸಮೀಕ್ಷೆ ನಡೆಸಿ, ತಕ್ಷಣ ಪಾದಚಾರಿ ಮಾರ್ಗಗಳನ್ನು ಗುರುತಿಸುವುದು, ಅತಿಕ್ರಮಣ ತೆರವುಗೊಳಿಸಿ ಪಾದಚಾರಿಗಳು ಹಾಗೂ ವಾಹನಗಳು ಸಂಚರಿಸಲು/ತಿರುಗಾಡಲು ಪುರಸಭೆ ಹಾಗೂ ಪೊಲೀಸರು ಅವಕಾಶ ಮಾಡಿಕೊಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಸರ್ಕಾರದ ಆದೇಶಕ್ಕೆ 15 ದಿನಗಳ ಒಳಗೆ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ನಿರ್ದೇಶನವಿದ್ದರೂ, ಗುಂಡ್ಲುಪೇಟೆ ಪುರಸಭೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಅವರ ಪ್ರತಿಕ್ರಿಯೆಗೆ ಪಟ್ಟಣದ ನಾಗರಿಕರು ನಿರೀಕ್ಷಿಸಿದ್ದಾರೆ.--- ೧೪ಜಿಪಿಟಿ೩ಗುಂಡ್ಲುಪೇಟೆ ಹಳೇ ಬಸ್ ನಿಲ್ದಾಣದ ಆವರಣದಲ್ಲಿ ಅಂಗಡಿ ಮಳಿಗೆ ಮುಂದೆ ಒತ್ತುವರಿ ಮಾಡಿಕೊಂಡು ತರಕಾರಿ ಮರಾಟ ಮಾಡುತ್ತಿರುವುದು.---------