ಬಳ್ಳಾರಿ: ಜಿಲ್ಲೆಯಾದ್ಯಂತ ಗುರುಪೂರ್ಣಿಮೆಯನ್ನು ಬುಧವಾರ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ನಗರದ ವಿಶಾಲ್ ನಗರ, ಕೋಟೆ ಪ್ರದೇಶ, ರೇಡಿಯೋ ಪಾರ್ಕ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿರುವ ಸಾಯಿಬಾಬಾ ಮಂದಿರಗಳು ಭಕ್ತರಿಂದ ಕಿಕ್ಕಿರಿದು ತುಂಬಿದ್ದವು. ಗುರುಪೂರ್ಣಿಮೆ ಅಂಗವಾಗಿ ಬಾಬಾರವರ ಮೂರ್ತಿಗೆ ಪಂಚಾಮೃತ, ಕ್ಷೀರ, ಗಂಗಾಜಲ ಸೇರಿದಂತೆ ವಿವಿಧ ಅಭಿಷೇಕಗಳನ್ನು ನೆರವೇರಿಸಲಾಯಿತು. ಬಣ್ಣ ಬಣ್ಣದ ಹೂವುಗಳಿಂದ ಅಲಂಕೃತಗೊಂಡ ಬಾಬಾರವರ ದಿವ್ಯ ಮೂರ್ತಿ ಭಕ್ತರ ಗಮನ ಸೆಳೆಯಿತು. ದೇವಸ್ಥಾನಗಳನ್ನು ವಿದ್ಯುತ್ ದೀಪಾಲಂಕಾರ ಹಾಗೂ ಹೂವಿನ ತೋರಣಗಳಿಂದ ಸಿಂಗರಿಸಲಾಗಿದ್ದು, ಭಕ್ತಿಮಯ ವಾತಾವರಣ ನಿರ್ಮಾಣವಾಗಿತ್ತು.
ವಿಶಾಲ್ ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಬೆಳಿಗ್ಗೆ 5 ಗಂಟೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಶ್ರೀಗಣಪತಿ ಪೂಜೆ, ಮಂಗಳ ಸ್ನಾನ, ಕ್ಷೀರಾಭಿಷೇಕ, ಸಂಕೀರ್ತನೆ, ವೇದಘೋಷ, ಪಾದುಕಾ ಪೂಜೆ ಹಾಗೂ ಗಂಗಾಜಲಾಭಿಷೇಕ ನೆರವೇರಿದವು. ನಂತರ ನಡೆದ ಲಘು ಆರತಿ, ಪಲ್ಲಕ್ಕಿ ಉತ್ಸವ ಮತ್ತು ಮಹಾಮಂಗಳಾರತಿಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಸಾಯಿನಾಮ ಸ್ಮರಣೆ ಮಾಡಿದರು. "ಓಂ ಸಾಯಿ ರಾಮ್ " ಎಂಬ ಜಯಘೋಷಗಳಿಂದ ದೇವಸ್ಥಾನದ ಆವರಣ ಮೊಳಗಿತು.ಗುರುಪೂರ್ಣಿಮೆ ಹಿನ್ನೆಲೆ ಬೆಳಗಿನ ಜಾವದಿಂದಲೇ ಜಿಲ್ಲೆ ಸೇರಿದಂತೆ ನೆರೆಯ ಪ್ರದೇಶಗಳಿಂದಲೂ ಭಕ್ತರು ತಂಡೋಪತಂಡವಾಗಿ ಆಗಮಿಸಿದರು. ಕೆಲವರು ಕುಟುಂಬ ಸಮೇತರಾಗಿ, ಇನ್ನೂ ಕೆಲವರು ಭಜನಾ ಮಂಡಳಿಗಳೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಸರದಿ ಸಾಲಿನಲ್ಲಿ ನಿಂತು ಬಾಬಾರವರ ದರ್ಶನ ಪಡೆದ ಭಕ್ತರು ತಮ್ಮ ಇಷ್ಟಾರ್ಥಗಳು ಈಡೇರಲಿ ಎಂದು ಪ್ರಾರ್ಥಿಸಿದರು.
ದರ್ಶನಕ್ಕೆ ಆಗಮಿಸಿದ ಎಲ್ಲ ಭಕ್ತರಿಗೆ ದೇವಸ್ಥಾನದ ಆವರಣದಲ್ಲಿ ಮಹಾಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ನೂರಾರು ಸ್ವಯಂಸೇವಕರು ಪ್ರಸಾದ ವಿತರಣೆ ಹಾಗೂ ಭಕ್ತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸೇರಿದಂತೆ ಸಾವಿರಾರು ಮಂದಿ ಪ್ರಸಾದ ಸ್ವೀಕರಿಸಿ ಗುರುಪೂರ್ಣಿಮೆಯ ಪುಣ್ಯವನ್ನು ಪಡೆದರು.