ಗುರುಶಾಂತರಾಜ ಶ್ರೀಗಳ ಶಿಕ್ಷಣ ಕಾಳಜಿ ಅಪಾರ

KannadaprabhaNewsNetwork |  
Published : Oct 28, 2024, 01:12 AM IST
27ಕೆಡಿವಿಜಿ8-ದಾವಣಗೆರೆಯಲ್ಲಿ ಭಾನುವಾರ ತರಳಬಾಳು ಶಿವಸೈನ್ಯದ ರಾಜ್ಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟನೆ....................27ಕೆಡಿವಿಜಿ9-ದಾವಣಗೆರೆಯಲ್ಲಿ ಭಾನುವಾರ ತರಳಬಾಳು ಶಿವಸೈನ್ಯದ ರಾಜ್ಯ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಸುದೀರ್ಘ ಇತಿಹಾಸದ ಸಾಧು ಸದ್ಧರ್ಮ ವೀರಶೈವ ಸಮಾಜಕ್ಕೆ ಸ್ಪಷ್ಟ ರೂಪುರೇಷೆ ನೀಡಿ, ಭದ್ರ ನೆಲೆ ಕಲ್ಪಿಸಿ, ಸಂಸ್ಕಾರ, ಗಟ್ಟಿತನ ತಂದುಕೊಟ್ಟವರು ಲಿಂಗೈಕ್ಯ ಶ್ರೀ ಗುರುಶಾಂತರಾಜ ಮಹಾಸ್ವಾಮೀಜಿ ಎಂದು ಸಮಾಜದ ಮುಖಂಡ, ಸಂಘಟನೆ ಗೌರವಾಧ್ಯಕ್ಷ ಮಹಾಬಲೇಶ್ವರ ಗೌಡ ಹೇಳಿದ್ದಾರೆ.

- ತರಳಬಾಳು ಶಿವಸೈನ್ಯ ರಾಜ್ಯ ಗೌರವಾಧ್ಯಕ್ಷ ಮಹಾಬಲೇಶ ಗೌಡ ಅಭಿಮತ । ರಾಜ್ಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಸುದೀರ್ಘ ಇತಿಹಾಸದ ಸಾಧು ಸದ್ಧರ್ಮ ವೀರಶೈವ ಸಮಾಜಕ್ಕೆ ಸ್ಪಷ್ಟ ರೂಪುರೇಷೆ ನೀಡಿ, ಭದ್ರ ನೆಲೆ ಕಲ್ಪಿಸಿ, ಸಂಸ್ಕಾರ, ಗಟ್ಟಿತನ ತಂದುಕೊಟ್ಟವರು ಲಿಂಗೈಕ್ಯ ಶ್ರೀ ಗುರುಶಾಂತರಾಜ ಮಹಾಸ್ವಾಮೀಜಿ ಎಂದು ಸಮಾಜದ ಮುಖಂಡ, ಸಂಘಟನೆ ಗೌರವಾಧ್ಯಕ್ಷ ಮಹಾಬಲೇಶ್ವರ ಗೌಡ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ತರಳಬಾಳು ಶಿವಸೈನ್ಯ ಸಂಘದ ರಾಜ್ಯ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾಮಾಜಿಕ ಪ್ರಜ್ಞೆ, ಸ್ಪಷ್ಟರೂಪ ನೀಡಬೇಕೆಂಬ ವಿಚಾರಧಾರೆಯಲ್ಲಿ ಸುಸಂಘಟಿತ ಸಮಸಮಾಜ ನಿರ್ಮಿಸಲು ಗುರುಶಾಂತರಾಜ ಶ್ರೀಗಳು ಗ್ರಾಮೀಣ ಭಾಗದಲ್ಲೂ ಶಿಕ್ಷಣ ಸಂಸ್ಥೆಗಳ ಸ್ಥಾಪಿಸಿ, ಸಮಾಜದ ಭಕ್ತರನ್ನು ಸುಶಿಕ್ಷಿತರಾಗಿ ಮಾಡಿದರು ಎಂದರು.

ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳು ಸಮಾಜವನ್ನು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸದೃಢಗೊಳಿಸಿ, ಸಮಾಜ ಬಾಂಧವರು ತಲೆಎತ್ತಿ ನಡೆಯುವಂತೆ ಮಾಡಿದರು. 21ನೇ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯರು ಸಹ ಅದೇ ಹಾದಿಯಲ್ಲಿ ಸಮಾಜ ಮುನ್ನಡೆಸುತ್ತಿದ್ದಾರೆ. ಹಿಂದೆ ದುಗ್ಗಾಣೆ ಮಠವಾಗಿದ್ದ ನಮ್ಮ ಮಠ ಇಂದು ₹2 ಸಾವಿರ ಕೋಟಿ ಮೌಲ್ಯದಷ್ಟು ಆಸ್ತಿ ಹೊಂದಿದೆ. ಇದು ಸಮಾಜದ ಭಕ್ತರು ಶ್ರೀಮಂತಿಕೆ, ಸಂಸ್ಕಾರ, ಉದಾರತೆ ಹೊಂದಿರುವುದಕ್ಕೆ ಸಾಕ್ಷಿ. ತರಳಬಾಳು ಶಿವಸೈನ್ಯ ಸಂಘದ ರಾಜ್ಯ ಗೌರವಾಧ್ಯಕ್ಷ ಆಗಿರುವುದಕ್ಕೆ ಹೆಮ್ಮೆಪಡುತ್ತೇನೆ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ತರಳಬಾಳು ಶಿವಸೈನ್ಯ ಸಂಘ ಯಾವುದೇ ಸಮಾಜದ ಪ್ರತಿಸ್ಪರ್ಧಿಯಲ್ಲ. ಇದು ನಮ್ಮ ಸಮಾಜವನ್ನು ಮತ್ತಷ್ಟು ಸದೃಢಗೊಳಿಸುವ, ಸಮಾಜಮುಖಿಯಾಗಿ, ಉತ್ತಮೋತ್ತಮ ಕೆಲಸ ಮಾಡುವ ನಿಟ್ಟಿನಲ್ಲಿ ರೂಪುಗೊಂಡಿದೆ. ಸಮಾಜದಲ್ಲಿ ಯಾವುದೇ ವ್ಯತ್ಯಾಸ, ನಿಲುವು, ಭಿನ್ನಾಭಿಪ್ರಾಯ ಇದ್ದರೂ ಸಮಾಜಕ್ಕೆ ಪಿತಾಮಹಾರೆಂದರೆ ತರಳಬಾಳು ಜಗದ್ಗುರುಗಳೇ ಹೊರತು, ಬೇರೆ ಯಾರೂ ಅಲ್ಲ ಎಂಬುದನ್ನು ನಾವೆಲ್ಲ ಮನಗಾಣಬೇಕಿದೆ ಎಂದರು.

ನಮ್ಮ ಸಮಾಜ, ಸಂಘವು ತರಳಬಾಳು ಪರಂಪರೆ ಗುರುಪೀಠದ ಆದೇಶವನ್ನು ಪಾಲಿಸಿಕೊಂಡು ಬರುವ ಸಂಪ್ರದಾಯ ಹೊಂದಿದೆ. ಅದೇ ರೀತಿ ತರಳಬಾಳು ಶಿವಸೇನೆ ಸಂಘವು ನಡೆದುಕೊಂಡು ಹೋಗಬೇಕೆಂಬುದು ನಮ್ಮ ಆಶಯ. ಸಂಘವು ಹೋಬಳಿಮಟ್ಟದಿಂದ ಹಿಡಿದು ತಾಲೂಕು, ಜಿಲ್ಲೆಗಳಲ್ಲಿ ತನ್ನ ಕಾರ್ಯಕ್ಷೇತ್ರ ಮತ್ತು ವ್ಯಾಪ್ತಿ ವಿಸ್ತರಿಸಿಕೊಂಡು ಕೆಲಸ ನಿರ್ವಹಿಸಬೇಕು ಎಂದು ಹಾರೈಸಿದರು.

ರೈತ ಮುಖಂಡ ಹೊನ್ನೂರು ಮುನಿಯಪ್ಪ ಮಾತನಾಡಿ, ತರಳಬಾಳು ಶಿವಸೈನ್ಯವು ಸಮಾಜದಲ್ಲಿ ತಪ್ಪು ದಾರಿಯಲ್ಲಿ ಹೋಗುವವರನ್ನು ತಿದ್ದುವ ಮೂಲಕ ಸರಿದಾರಿಗೆ ತರುವ ಕೆಲಸ ಮಾಡಬೇಕು. ಸಮಾಜವನ್ನು ಬೇರು ಮಟ್ಟದಿಂದ ಸಂಘಟಿಸುವ ಕೆಲಸ ಮಾಡಬೇಕು. ರಾಜ್ಯವ್ಯಾಪಿ ಶಿವಸೈನ್ಯ ವಿಸ್ತರಣೆ ಆಗಿರುವುದು ಸಮಾಜಕ್ಕೆ ಮತ್ತಷ್ಟು ಬಲ ತುಂಬುತ್ತದೆ ಎಂದರು.

ಪಾಲಿಕೆ ಸದಸ್ಯ ಜಿ.ಎಸ್. ಮಂಜುನಾಥ ಗಡಿಗುಡಾಳ್ ಮಾತನಾಡಿ, ತರಳಬಾಳು ಶಿವಸೈನ್ಯ ಸಂಘ ರಾಜ್ಯ ಘಟಕ ಇಂದು ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಜವಾಬ್ದಾರಿ ಕೂಡ ಹೆಚ್ಚಾಗಿದೆ. ಸಂಘಕ್ಕೆ ಯಾವುದೇ ಸಹಕಾರ ಬೇಕಾದರೂ ನಾವಿರುತ್ತೇವೆ ಎಂದರು.

ಕಕ್ಕರಗೊಳ್ಳದ ಹಿರಿಯರಾದ ಕೆ.ಜಿ. ಬಸವನಗೌಡ ಅಧ್ಯಕ್ಷತೆ ವಹಿಸಿದ್ದರು. ರಾಮಗೊಂಡನಹಳ್ಳಿ ಜಯಣ್ಣ, ಬೇತೂರು ಸಂಗನಗೌಡ, ಮಾಗನೂರು ಉಮೇಶಗೌಡ, ಯಶವಂತ ಗೌಡ, ಶ್ರೀನಿವಾಸ ಶಿವಗಂಗಾ, ಕೆ. ನಾಗಪ್ಪ ಮೇಷ್ಟ್ರು, ಕಂಸಾಗರ ಪಂಚಣ್ಣ, ಬೇತೂರು ರೇವಣಸಿದ್ದಪ್ಪ ಮರಡಿ, ಶಶಿಧರ ಹೆಮ್ಮನಬೇತೂರು, ಶಿವರಾಜ್ ಕಬ್ಬೂರು, ಕಾವಲಹಳ್ಳಿ ಪ್ರಭು, ಶಿವಕುಮಾರ್, ನುಗ್ಗೇಹಳ್ಳಿ ರವಿಕುಮಾರ ಇತರರು ಇದ್ದರು. ಶಿಕ್ಷಕ ಸಿ.ಜಿ.ಜಗದೀಶ ಕೂಲಂಬಿ, ಶಿವರಾಜ ಕಬ್ಬೂರು ಕಾರ್ಯಕ್ರಮ ನಡೆಸಿಕೊಟ್ಟರು.

- - -

ಬಾಕ್ಸ್‌* ಶಿವಸೈನ್ಯ ರಾಜ್ಯಾಧ್ಯಕ್ಷ ಶಶಿಧರ ಹೆಮ್ಮನಬೇತೂರು ನೂತನವಾಗಿ ಅಸ್ತಿತ್ವಕ್ಕೆ ಬಂದ ತರಳಬಾಳು ಶಿವಸೈನ್ಯ ಸಂಘದ ರಾಜ್ಯ ಅಧ್ಯಕ್ಷರಾಗಿ ಶಶಿಧರ ಹೆಮ್ಮನಬೇತೂರು, ಗೌರವಾಧ್ಯಕ್ಷರಾಗಿ ವಿಜಯನಗರ ಜಿಲ್ಲೆಯ ಮಹಾಬಲೇಶ್ವರ ಗೌಡರು , ಯುವ ಮುಖಂಡ ಶ್ರೀನಿವಾಸ ಶಿವಗಂಗಾ, ಉಪಾಧ್ಯಕ್ಷರಾಗಿ ಕೆ.ಬಿ.ಮೋಹನ ಸಿರಿಗೆರೆ, ಕೆ.ಪಿ.ಅಶ್ವಿನ್, ನಿಂಬೆಗುಂದಿ ಶಿಕಾರಿಪುರ, ವೀರಣ್ಣ ಮಾಕನೂರು, ಕೆ.ಬಿ.ಶ್ರೀಧರ ಪಾಟೀಲ್ ಭದ್ರಾವತಿ, ಲಿಂಗರಾಜ ಅಗಸನಕಟ್ಟೆ, ಕಾರ್ಯದರ್ಶಿಯಾಗಿ ವಿಜಯನಗರ ವಕೀಲ ಬಸವನಗೌಡ, ಕೋಶಾಧ್ಯಕ್ಷರಾಗಿ ಶಿವಕುಮಾರ್ ಡಿ.ಎಂ. ಕೋರಟಿಕೆರೆ ಸೇರಿದಂತೆ 39 ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.

- - - -27ಕೆಡಿವಿಜಿ9:

ದಾವಣಗೆರೆಯಲ್ಲಿ ಭಾನುವಾರ ತರಳಬಾಳು ಶಿವಸೈನ್ಯದ ರಾಜ್ಯ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಗವಿಕಲತೆ ನಿರ್ಮೂಲನೆಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ
ಕಾಂಗ್ರೆಸ್ಸಿನಿಂದ ಉ.ಕ.ಕ್ಕೆ ಹೆಚ್ಚು ಅನ್ಯಾಯ-ಸಂಸದ ಬೊಮ್ಮಾಯಿ