ಸುಮಾರು 11 ಕೋಟಿ ರು. ವೆಚ್ಚದಲ್ಲಿ ಉಮಿಕಲ್ ಬೆಟ್ಟದಲ್ಲಿ ಈ ಥೀಮ್ ಪಾರ್ಕ್ ನಿರ್ಮಾಣವಾಗಿತ್ತು. ಆದರೆ ಇಂದು ಅಲ್ಲಿ ಏನೂ ಇಲ್ಲ, ಬೆಟ್ಟ ಬೋಳಾಗಿದೆ. ಕೇವಲ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಈ ಥೀಮ್ ಪಾರ್ಕನ್ನು ತರಾತುರಿಯಲ್ಲಿ ನಿರ್ಮಿಸಿ ಕಾರ್ಕಳದ 2 ಲಕ್ಷ ಜನರಿಗೆ ದ್ರೋಹ ಬಗೆಯಲಾಗಿದೆ ಎಂದು ಮುನಿಯಾಳು ಹೇಳಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಕಾರ್ಕಳದ ಉಮಿಕಲ್ ಬೆಟ್ಟದ ಮೇಲೆ ನಿರ್ಮಿಸಲಾಗಿದ್ದ ಪರಶುರಾಮ ಥೀಮ್ ಪಾರ್ಕ್ನ ಅವ್ಯವಹಾರದ ತನಿಖೆಗೆ ಇದ್ದ ತಡೆಯಾಜ್ಞೆ ತೆರವಾಗಿದ್ದು, ಈ ತನಿಖೆಯನ್ನು ತಕ್ಷಣ ಪುನರಾರಂಭಿಸಬೇಕು ಮತ್ತು ತೆರವುಗೊಳಿಸಲಾಗಿರುವ ಪರಶುರಾಮನ ವಿಗ್ರಹ ಎಲ್ಲಿದೆ ಎಂದು ಪೊಲೀಸರು ಪತ್ತೆ ಹಚ್ಚಿ ಜನತೆಯ ಮುಂದೆ ತರಬೇಕು, ಈ ಬಗ್ಗೆ ಜನತೆಗೆ ಇರುವ ಸಂಶಯಗಳನ್ನು ದೂರ ಮಾಡಬೇಕು ಎಂದು ಕಾರ್ಕಳದ ಕಾಂಗ್ರೆಸ್ ನಾಯಕ ಮುನಿಯಾಲು ಉದಯಕುಮಾರ್ ಶೆಟ್ಟಿ ಉಡುಪಿ ಎಸ್ಪಿ ಅವರನ್ನು ಆಗ್ರಹಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಗ್ರಹದ ಶಿಲ್ಪಿ ಕೃಷ್ಣ ನಾಯ್ಕ್ ಅವರು ಪೊಲೀಸ್ ತನಿಖೆಗೆ ತಂದಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಅ.21ರಂದು ತೆರವುಗೊಳಿಸಿದೆ. ಆದ್ದರಿಂದ ಪೊಲೀಸರು ತನಿಖೆ ಚುರುಕುಗೊಳಿಸಬೇಕು ಎಂದರು.
ವಿಗ್ರಹ ದುರಸ್ತಿಗೆ ಸೊಂಟದ ಮೇಲಿನ ಭಾಗವನ್ನು ತೆರವು ಮಾಡಲಾಗಿತ್ತು, ಆದರೆ ಅದು ಎಲ್ಲಿದೆ ಎಂದು ಯಾರೂ ಹೇಳುತ್ತಿಲ್ಲ ಎಂದು ಹೇಳಿದರು.
ಸುಮಾರು 11 ಕೋಟಿ ರು. ವೆಚ್ಚದಲ್ಲಿ ಉಮಿಕಲ್ ಬೆಟ್ಟದಲ್ಲಿ ಈ ಥೀಮ್ ಪಾರ್ಕ್ ನಿರ್ಮಾಣವಾಗಿತ್ತು. ಆದರೆ ಇಂದು ಅಲ್ಲಿ ಏನೂ ಇಲ್ಲ, ಬೆಟ್ಟ ಬೋಳಾಗಿದೆ. ಕೇವಲ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಈ ಥೀಮ್ ಪಾರ್ಕನ್ನು ತರಾತುರಿಯಲ್ಲಿ ನಿರ್ಮಿಸಿ ಕಾರ್ಕಳದ 2 ಲಕ್ಷ ಜನರಿಗೆ ದ್ರೋಹ ಬಗೆಯಲಾಗಿದೆಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿಯ ಸಾಮಾಜಿಕ ಕಾರ್ಯಕರ್ತ ಕೃಷ್ಣಮೂರ್ತಿ ಆಚಾರ್ಯ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮುಂತಾದವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.