ಬೆಳ್ತಂಗಡಿ: ಗುರುವಾಯನಕೆರೆ- ಮೂಡುಬಿದಿರೆ- ಕಾರ್ಕಳ ರಾಜ್ಯ ಹೆದ್ದಾರಿಯ ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡಗಳು ಸೃಷ್ಟಿಯಾಗ ತೊಡಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಈ ರಸ್ತೆಯ ಪಡಂಗಡಿ- ವೇಣೂರು ಪರಿಸರದ ಸುಮಾರು 6 ಕಿ.ಮೀ. ವ್ಯಾಪ್ತಿಯಲ್ಲಿ ಹಲವಾರು ಹೊಂಡಗಳು ಸೃಷ್ಟಿಯಾಗಿದ್ದು, ಇವುಗಳ ಗಾತ್ರ ದಿನದಿಂದ ದಿನಕ್ಕೆ ಹೆಚ್ಚುವ ಜತೆ ಹೊಂಡಗಳ ಸಂಖ್ಯೆ ಅಧಿಕಗೊಳ್ಳುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಈ ರಸ್ತೆಯಲ್ಲಿ ಹೊಂಡ ತಪ್ಪಿಸುವ ವೇಳೆ ಅಪಘಾತ ಉಂಟಾಗಿ ಜೀವ ಬಲಿಯಾಗಿದೆ.ದ್ವಿಚಕ್ರ ವಾಹನ ಸವಾರರಿಗೆ ಈ ರಸ್ತೆಯಲ್ಲಿರುವ ಹೊಂಡಗಳು ಸಿಂಹಸ್ವಪ್ನವಾಗುತ್ತಿವೆ. ಹೊಂಡಗಳನ್ನು ತಪ್ಪಿಸುವ ಬರದಲ್ಲಿ ಘನ ವಾಹನ ಚಾಲಕರು ವಾಹನಗಳನ್ನು ಅಡ್ಡಾಡಿದ್ದಿ ಚಲಾಯಿಸುತ್ತಿದ್ದು, ಇದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ಮಳೆ ಸಮಯ ಹೊಂಡಗಳಲ್ಲಿ ತುಂಬುವ ನೀರು ವಾಹನ ಸವಾರರನ್ನು, ಪಾದಚಾರಿಗಳನ್ನು ಹೈರಾಣರಾಗಿಸುತ್ತಿದೆ. ಕೆಲವು ಕಡೆ ರಸ್ತೆ ಬದಿ ಬಾಟಲಿ, ಪ್ಲಾಸ್ಟಿಕ್ ತ್ಯಾಜ್ಯ ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ.
ಮಳೆಗಾಲದ ನಿರ್ವಹಣೆ ಇಲ್ಲ: ಈ ರಸ್ತೆಯ ಮಳೆಗಾಲದ ನಿರ್ವಹಣೆ ನಡೆದಿಲ್ಲ. ರಸ್ತೆ ಬದಿಯ ಚರಂಡಿಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು, ಚರಂಡಿಗಳು ಮುಚ್ಚಿ ಹೋಗಿವೆ. ರಸ್ತೆಯಿಂದ ಚರಂಡಿಗೆ ನೀರು ಬಿಡಿಸಿಕೊಡುವ ವ್ಯವಸ್ಥೆಯೂ ಆಗಿಲ್ಲ. ಈ ಕಾರಣದಿಂದ ರಸ್ತೆಯಲ್ಲೇ ಮಳೆ ನೀರು ಹರಿಯುತ್ತಿದ್ದು, ಹೊಂಡಗಳು ಸೃಷ್ಟಿಯಾಗಲು ಕಾರಣವಾಗುತ್ತಿದೆ. ಕಳೆದ ವರ್ಷ ನಿರ್ಮಾಣವಾಗಿದ್ದ ಹೊಂಡಗಳಿಗೆ ತೇಪೆ ಕಾಮಗಾರಿ ಮಾತ್ರ ನಡೆದಿದ್ದು, ಇದೀಗ ಆ ಸ್ಥಳಗಳಲ್ಲೂ ಹೆಚ್ಚಿನ ಹೊಂಡಗಳು ಕಂಡುಬರುತ್ತಿವೆ.ಮಳೆಗಾಲ ಆರಂಭವಾಗಿದ್ದರೂ ಪ್ರಮುಖ ರಾಜ್ಯ ಹೆದ್ದಾರಿಯೊಂದರ ಚರಂಡಿ ದುರಸ್ತಿ ಕಾಮಗಾರಿ ಇದುವರೆಗೂ ನಡೆಯದಿರುವುದು ವಿಪರ್ಯಾಸವಾಗಿದೆ.