ಮಂಗಳೂರು: ಸಾಹಿತಿ ವಸಂತಕುಮಾರ ಪೆರ್ಲ ಅವರು ತುಳುವಿನಲ್ಲಿ ಬರೆದ ೧೦ ಸಣ್ಣಕಥೆಗಳು ತೆಲುಗಿಗೆ ಅನುವಾದಗೊಂಡು ‘ನಾಕೂರು’ ಹೆಸರಿನಲ್ಲಿ ಪ್ರಕಟವಾಗಿದ್ದು, ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಲೋಕಾರ್ಪಣೆಗೊಂಡಿತು.ಮಂಗಳೂರಿನ ‘ಭೂಮಿಗೀತ’ ಸಾಹಿತ್ಯಿಕ- ಸಾಂಸ್ಕೃತಿಕ ವೇದಿಕೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ತುಳುವಿನ ಸಣ್ಣಕಥೆಗಳು ತೆಲುಗು ಭಾಷೆಗೆ ಅನುವಾದವಾಗಿ ಪ್ರಕಟಗೊಂಡಿರುವುದು ಶ್ಲಾಘನೀಯ ಎಂದರು.ಕೃತಿ ಪರಿಚಯ ಮಾಡಿದ ತೆಲುಗು ಹಾಗೂ ಇಂಗ್ಲಿಷ್ ಲೇಖಕ ಡಾ. ಜಿ.ಆರ್. ಕೃಷ್ಣ, ನಾಕೂರು ಹೆಸರಿನಲ್ಲಿ ತೆಲುಗಿನಲ್ಲಿ ಪ್ರಕಟವಾಗಿರುವ ಸಣ್ಣಕಥೆಗಳ ಪುಸ್ತಕ ತುಳು ಸಂಸ್ಕೃತಿಯ ಪ್ರತಿಬಿಂಬವಾಗಿದೆ. ನಿಸರ್ಗ ಜೀವನವನ್ನು ಕಟ್ಟಿಕೊಟ್ಟಿರುವ ಕಥೆಗಳು ಸೃಜನಾತ್ಮಕವಾಗಿ ಎಂದು ಹೇಳಿದರು.ಕವಿ ವಸಂತಕುಮಾರ ಪೆರ್ಲ ಮಾತನಾಡಿ, ನಾಕೂರು ಎಂಬುದು ಕಡಬ ಸಮೀಪ ಕುಮಾರಧಾರಾ ನದಿ ಹರಿಯುವ ಒಂದು ಪ್ರದೇಶವಾಗಿದೆ. ೧೦ ತುಳು ಕಥೆಗಳ ಪೈಕಿ ಒಂದು ಕಥೆಯ ಹೆಸರನ್ನು ಪುಸ್ತಕಕ್ಕೆ ಇರಿಸಲಾಗಿದೆ. ತುಳುನಾಡಿನ ಇತಿಹಾಸ, ಸಂಸ್ಕೃತಿ, ಪ್ರಕೃತಿ ಸೌಂದರ್ಯವನ್ನು ಈ ಕಥೆಗಳಲ್ಲಿ ಕಟ್ಟಿಕೊಡಲಾಗಿದೆ. ಹೈದರಾಬಾದ್‌ನ ರಂಗನಾಥ ರಾಮಚಂದ್ರ ರಾವ್ ಅವರು ಈ ಕಥೆಗಳನ್ನು ತೆಲುಗು ಭಾಷೆಗೆ ಅನುವಾದಿಸಿದ್ದಾರೆ. ತುಳು ಸಣ್ಣ ಕಥೆಗಳು ಇದೇ ಮೊದಲ ಬಾರಿಗೆ ತೆಲುಗಿಗೆ ಅನುವಾದಗೊಂಡಿರುವುದು ಸಂತಸ ನೀಡಿದೆ ಎಂದರು.

ಲೇಖಕ ಸದಾನಂದ ನಾರಾವಿ ಸ್ವಾಗತಿಸಿದರು. ಲೇಖಕಿ ಶೈಲಾಕುಮಾರಿ ಕೆ. ವಂದಿಸಿದರು. ಡಾ. ಮೈಥಿಲಿ ಇದ್ದರು.