ಯಳಂದೂರು: ಶೋಷಿತ ವರ್ಗಗಳ ಆಶಾಕಿರಣವಾಗಿ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ದಶಕಗಳಿಂದಲೂ ಸೇವೆ ಮಾಡುತ್ತಾ ಬಂದಿದ್ದಾರೆ ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್ ಬಣ್ಣಿಸಿದರು.
ಮಹದೇವಪ್ಪ ಶಾಸಕರಾಗಿ, ಮಂತ್ರಿಯಾಗಿ ರಾಜ್ಯಕ್ಕೆ ಅತ್ಯುನ್ನತ ಕೊಡುಗೆಗಳನ್ನು ನೀಡಿದ್ದಾರೆ. ರಾಜಕೀಯ ಸದೃಢತೆಯನ್ನು ಹೊಂದಿ, ಸಮಾಜದಲ್ಲಿ ಅತಿ ತುಳಿತಕ್ಕೆ ಒಳಗಾದ ಸಮುದಾಯಗಳ ಆರ್ಥಿಕ, ಶೈಕ್ಷಣಿಕ, ಅಭಿವೃದ್ಧಿಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಪುತ್ರ ಸುನೀಲ್ ಬೋಸ್ ಕೂಡ ಚಾಮರಾಜನಗರದ ಸಂಸದರಾಗಿ ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಸೋಲಿಗರ ಅಭಿವೃದ್ಧಿಗೆ ಹೆಚ್ಚು ಕಾಳಜಿ ಹೊಂದಿರುವ ಇವರು ಮುಂದಿನ ದಿನಗಳಲ್ಲಿ ಇಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉತ್ಸುಕರಾಗಿದ್ದಾರೆ. ಆದಷ್ಟು ಬೇಗ ಇಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನದ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು ಮಾತನಾಡಿ, ಮಹದೇವಪ್ಪ ಸಂವಿಧಾನದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಸಂವಿಧಾನದ ಪೀಠಿಕೆಯನ್ನು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹೇಳಿಸುವ ಮೂಲಕ ನಮ್ಮ ದೇಶದ ಸಂವಿಧಾನದ ಅರಿವನ್ನು ಪ್ರಾಥಮಿಕ ಹಂತದಲ್ಲೇ ನೀಡುವ ಕೆಲಸವನ್ನು ಮಾಡಿದ್ದಾರೆ. ಸಂವಿಧಾನ ಆಶಯದಂತೆ ಆಡಳಿತ ಮಾಡುತ್ತಿರುವ ಒಬ್ಬ ಮುತ್ಸದ್ಧಿ ರಾಜಕಾರಣಿಯಾಗಿದ್ದಾರೆ. ಅಲ್ಲದೆ 6 ಬಾರಿ ಶಾಸಕರಾಗಿ, 4 ಬಾರಿ ಸಚಿವರಾಗಿ ಅನೇಕ ಜನಾನುರಾಗಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇವರು ಆರೋಗ್ಯ ಮಂತ್ರಿಗಳಾಗಿದ್ದಾಗ ಎಲ್ಲಾ ಬಿಪಿಎಲ್ ಹೊಂದಿರುವ ಕಾರ್ಡುದಾರರಿಗೂ ಉಚಿತ ಆರೋಗ್ಯ ಸೇವೆಗಳನ್ನು ಆರಂಭಿಸಿದ್ದರು. ಆಸ್ಪತ್ರೆಗಳ ಸುಧಾರಣೆಯ ಕ್ರಾಂತಿಯೂ ಅಲ್ಲಿಂದಲೇ ಆರಂಭವಾಯಿತು. ಅಲ್ಲದೆ ಲೋಕೋಪಯೋಗಿ ಸಚಿವರಾಗಿದ್ದಾಗ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಮಾಡಿದ್ದರು. ಈಗ ಸಮಾಜ ಕಲ್ಯಾಣ ಸಚಿವರಾಗಿ ವಿದ್ಯಾರ್ಥಿ ನಿಲಯಗಳ ಅಭಿವೃದ್ಧಿ ಇಲ್ಲಿನ ಮಕ್ಕಳಿಗೆ ಉತ್ತಮ ಊಟೋಪಚಾರ ಸೇರಿದಂತೆ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿಗಳ ಆಪ್ತರಾಗಿದ್ದು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.ನಂತರ ಸೋಲಿಗ ಮಕ್ಕಳು, ಮಹಿಳೆಯರು ಕೇಕ್ ಕತ್ತರಿಸಿದರು. ಸೋಲಿಗ ಮಹಿಳೆಯರಿಗೆ ಸೀರೆಗಳನ್ನು ವಿತರಣೆ ಮಾಡಿ, ಅನ್ನದಾನವನ್ನು ಮಾಡಲಾಯಿತು.